ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ತಮಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

 ತುಮಕೂರು : ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ತಮಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಗುರುವಾರ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಾತಿ ಗಣತಿ ವರದಿ ಇನ್ನು ಬಂದಿಲ್ಲ. ಸುಮ್ಮನೆ ನೀರಿನೊಳಗೆ ಎಮ್ಮೆ ನಿಲ್ಲಿಸಿ ಹಾಲು ಕರೆದಂತೆ ಎಂದ ಅವರು ಅದು ಕೋಣಾನೋ, ಎಮ್ಮೆನೋ ಯಾರಿಗೆ ಗೊತ್ತು ಎಂದರು. ವರದಿ ಬಂದ ಬಳಿಕ ಈ ಬಗ್ಗೆ ಚರ್ಚೆಯಾಗುತ್ತದೆ ಎಂದ ಅವರು ಬಿಹಾರದಲ್ಲಿ ವರದಿ ಬಿಡುಗಡೆಯಾಗಿದೆ. ಆಕಾಶ ಬಿದ್ದು ಹೋಯ್ತಾ ಎಂದು ಪ್ರಶ್ನಿಸಿದರು. ಇನ್ನು ವರದಿ ಬಂದಿಲ್ಲ, ಹೀಗಾಗಿ ಸುಮ್ಮನೆ ಊಹಾಪೋಹಗಳ ಮೇಲೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.

ಆಯೋಗದವರು ವರದಿಯನ್ನು ಸರ್ಕಾರ ಕೊಟ್ಟ ನಂತರ ಆ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ ಎಂದ ಅವರು ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು ಎಂದರು.

ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹದು. ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ ಎಂದರು.

ವಿ. ಸೋಮಣ್ಣ ಕರೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸೋಮಣ್ಣ ನಮ್ಮ ಹಳೇ ಸ್ನೇಹಿತ. ನಾನೇ ಕಾಲ್ ಮಾಡಿ ಮಾತನಾಡುತ್ತೇನೆ ಎಂದರು. ಸೋಮಣ್ಣ ಅವರನ್ನು ಕಾಂಗ್ರೆಸ್ ಗೆ ಆಹ್ವಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಹಿಂದೆ ಅವರೇ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು ಎಂದರು.

ಸೋಮಣ್ಣ ಮಠದ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದಾರೆ. ನಾನು ಮತ್ತು ರಾಜಣ್ಣ ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಎಂದರು. ಸೋಮಣ್ಣ, ಲಿಂಬಾವಳಿ ಕಾಂಗ್ರೆಸ್ ಸೇರ್ಪಡೆ ವಿಚಾರ ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ನಡೆಯುತ್ತದೆ. ನಮ್ಮ ಹಂತದಲ್ಲಿ ನಡೆಯುವುದಿಲ್ಲ ಎಂದರು.

ತುಮಕೂರು ಲೋಕಸಭಾ ಚುನಾವಣೆ ಕುರಿತ ಪಕ್ಷದ ಸಭೆ ವಿಳಂಬವಾಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೃಷ್ಣ ಬೈರೇಗೌಡರನ್ನು ಜಿಲ್ಲೆಗೆ ಉಸ್ತುವಾರಿ ಮಾಡಲಾಗಿದೆ. ಅವರು ಬಂದು ಸಭೆಯನ್ನುನಡೆಸುತ್ತಾರೆ. ಕಾರ್ಯಕರ್ತರ, ಮುಖಂಡರ ಸಭೆ ನಡೆಸಿ ಕೆಪಿಸಿಸಿಗೆ ವರದಿ ಕೊಡುತ್ತಾರೆ. ಆ ವರದಿ ನೋಡಿ ಮುಂದಿನ ಬೆಳವಣಿಗೆ ನಡೆಯುತ್ತದೆ ಎಂದರು.

ಈ ಸಂಬಂಧ ನಾನು ಕೂಡ ಅವರ ಜೊತೆ ಚರ್ಚಿಸಿದ್ದು ಶೀಘ್ರ ಸಭೆ ನಡೆಯಲಿದೆ ಎಂದರು.

ಸಿಎಂ ಸ್ಥಾನದ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡುವುದಿಲ್ಲ ಅಂತಾ ಹೇಳಿದ್ದೇನೆ ನನಗೆ ಆ ಪ್ರಶ್ನೆ ಕೇಳಬೇಡಿ ಎಂದರು.