Asianet Suvarna News Asianet Suvarna News

ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್‌.ಈಶ್ವರಪ್ಪ

ಶ್ರೀಮಂತರಿಗೆ ಮೀಸಲಾತಿ ಬೇಕು ಎನ್ನುವ ಸಿದ್ಧಾಂತ ನಾನು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಜಿಲ್ಲೆಯ ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

I dont agree with giving reservation to the rich says ks eshwarappa gvd
Author
First Published Jan 14, 2023, 1:30 AM IST

ಬಾಗಲಕೋಟೆ (ಜ.14): ಶ್ರೀಮಂತರಿಗೆ ಮೀಸಲಾತಿ ಬೇಕು ಎನ್ನುವ ಸಿದ್ಧಾಂತ ನಾನು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಜಿಲ್ಲೆಯ ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ ಮೀಸಲಾತಿ ಹೋರಾಟದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ನನ್ನ ಜಾತಿಯವರ ಪರ ನಾನು ನಿಂತಿದ್ದೇನೆ. ಎಸ್ಟಿಹೋರಾಟಕ್ಕೆ ಕಾಗಿನೆಲೆ ಶ್ರೀಗಳ ಆಮಂತ್ರಣಕ್ಕೆ, ಗೌರವ ನೀಡಿ ಹೋಗಿದ್ದೆ. ಮೀಸಲಾತಿ ಎಂಬುವುದು ತೀರ ಹಿಂದುಳಿದವರಿಗೆ ಬೇಕು ಎನ್ನುವುದು ಡಾ.ಬಿ.ಆರ್‌.ಅಂಬೇಡ್ಕರ ಅವರ ಇಚ್ಚೆಯಾಗಿತ್ತು. 

ಮೀಸಲಾತಿ ಹತ್ತು ವರ್ಷವಿದ್ದರೇ ಸಾಕು ಎಂಬ ನಿಲುವು ಹೊಂದಿತ್ತು. ಆದರೆ ಪ್ರಸ್ತುತ ಎಲ್ಲ ಜಾತಿಯವರು ನಮ್ಮ ಸಮುದಾಯಕ್ಕೆ ಮೀಸಲಾತಿ ಬೇಕು ಎನ್ನುವಂತಾಗಿದೆ. ಮೀಸಲಾತಿ ಹೋರಾಟ ಎನ್ನುವುದು ಫ್ಯಾನ್ಸಿ ಆಗಿದೆ. ಕಡು ಬಡವರಿಗೆ ಮೀಸಲಾತಿ ಸಿಕ್ಕರೆ, ಅನುಕೂಲವಾಗುತ್ತದೆ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಪ್ರಶ್ನಿಸಿದಾಗ, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಯಾದರೂ ಸ್ಪರ್ಧೆ ಮಾಡಬಹುದು. ಅದರಲ್ಲಿ ಏನು ತಪ್ಪಿದೆ? ಕಳೆದ ಬಾರಿ ಬಾದಾಮಿಯಿಂದ ಸ್ಪರ್ಧಿಸಿ ಗೆದ್ದರು. 

ಸಿದ್ದರಾಮಯ್ಯ ಲೀಡರ್‌ ಆಗುವ ಭ್ರಮೆ ಬಿಡಲಿ: ಕೆ.ಎಸ್‌.ಈಶ್ವರಪ್ಪ ಲೇವಡಿ

ಆದರೆ, ಅಲ್ಲಿಂದ ಯಾಕೆ ಹೋಗುತ್ತಿದ್ದಾರೆ ಗೊತ್ತಿಲ್ಲ. ಬಾದಾಮಿಯನ್ನು ಬಹಳ ಅಭಿವೃದ್ಧಿ ಮಾಡಿದ್ದರೇ, ಅಲ್ಲಿಂದಲ್ಲೇ ಸ್ಪರ್ಧಿಸಬೇಕಿತ್ತು. ಇಂದು ಸ್ಪರ್ಧಿಸಿ ನಾಳೆ ಬೇರೆಡೆಗೆ ಹೋಗುತ್ತಾರೆ ಎಂದರೆ ಕೋಲಾರ ಜನರಲ್ಲಿಯೂ ಈ ಭಾವನೆ ಮೂಡಿ ಸಿದ್ದರಾಮಯ್ಯ ಅವರ ಸೋಲಿಗೆ ಕಾರಣವಾಗಬಹುದು. ಈ ರೀತಿ ಮಾಡುವುದರಿಂದ ಜನರಿಗೆ ರಾಜಕಾರಣಿಗಳ ಮೇಲಿನ ವಿಶ್ವಾಸ ಹೋಗುತ್ತದೆ. ಚುನಾವಣೆಯಲ್ಲಿ ಜಯ ಗಳಿಸಿದ ಕ್ಷೇತ್ರದ ಋುಣ ತೀರಿಸಬೇಕು ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಮಂಡ್ಯವೇ ಕೂಪಮಂಡೂಕ: ಪ್ರಧಾನಿ ಮೋದಿ ಅವರು ವಿಶ್ವ ನಾಯಕ. ಅವರು ಇಡೀ ದೇಶಕ್ಕೆ ಸ್ಫೂರ್ತಿಯಾಗಿರುವ ವ್ಯಕ್ತಿ. ಅಂತಹ ವಿಶ್ವದ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ವಿಶ್ವವೇ ಒಪ್ಪಿಕೊಂಡಿರುವ ಮೋದಿ ಅವರನ್ನು ಒಪ್ಪಿಕೊಳ್ಳುವುದಕ್ಕೆ, ಬಿಡುವುದಕ್ಕೆ ಕುಮಾರಸ್ವಾಮಿ ಯಾರು? ಕುಮಾರಸ್ವಾಮಿಗೆ ರಾಮನಗರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮಂಡ್ಯವೇ ಅವರ ಕೂಪಮಂಡೂಕ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಕೇವಲ ಮಂಡ್ಯ, ಹಾಸನ ಎಂದರೆ ಹೇಗೆ? ಕೂಪಮಂಡೂಕ ಭಾವನೆಯಿಂದ ಹೊರಗಡೆ ಬಂದು ನೋಡಬೇಕು. 

ಕುಮಾರಸ್ವಾಮಿ ಮೋದಿ ಅಂತವರನ್ನು ಟೀಕೆ ಮಾಡಿ, ದೊಡ್ಡ ಮನುಷ್ಯ ಅನಿಸಿಕೊಳ್ಳಬಹುದು. ಕುಮಾರಸ್ವಾಮಿ ಸಿಎಂ ಆದವರು. ಅವರನ್ನು ಟೀಕೆ ಮಾಡೋಕೆ ಹೋಗಲ್ಲ. ನಾನು ದೇವೇಗೌಡರ ಬಗ್ಗೆ ಮಾತನಾಡೋಕೆ ಹೋಗಲ್ಲ. ಏಕೆಂದರೆ, ದೇವೇಗೌಡರು ದೇಶಾದ್ಯಂತ ಈಜಾಡಿದವರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಈ ಬಾರಿ ಸಂಪುಟ ವಿಸ್ತರಣೆಯಾಗಲ್ಲ. ಯಾಕೆ ಎಲ್ಲರೂ ಮಂತ್ರಿ ಆಗಬೇಕು? ಯಾಕೆ ಎಲ್ಲರೂ ಎಂಎಲ್‌ಎ ಆಗಬೇಕು? ಪಕ್ಷದ ಕಾರ್ಯಕರ್ತ ಎಂಬ ಪದವನ್ನು ಸಾಯುವವರೆಗೂ ತಪ್ಪಿಸಲೂ ಸಾಧ್ಯವಿಲ್ಲ. 

ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಕಪಿಚೇಷ್ಟೆ: ಕೆ.ಎಸ್‌.ಈಶ್ವರಪ್ಪ ಟೀಕೆ

ನಮ್ಮ ರಾಜ್ಯದಲ್ಲಿ ಒಂದು ಬಾರಿಯೂ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಪೂರ್ಣ ಬಹುಮತ ನೀಡಿದಿದ್ದರೇ, ಈ ರೀತಿ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿಗೆ ಪೂರ್ಣ ಬಹುಮತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಪೂರ್ಣ ಬಹುಮತವಿದ್ದರೇ ನಮ್ಮನ್ನ ಮಂತ್ರಿ ಮಾಡುವ ಸ್ವಾತಂತ್ರ್ಯ ನಮ್ಮವರಿಗೆ ಇರುತ್ತಿತ್ತು. ವಲಸಿಗರಿಗೆ, ಸೀನಿಯರ್ಸ್‌ಗೆ, ಜಾತಿವಾರು ಮಂತ್ರಿ ಸ್ಥಾನ ನೀಡದಿದ್ದರೆ ಹೇಗೆ ಎಂಬ ಪ್ರಶ್ನೆ ಬರುತ್ತದೆ? ನಾನು ಮಂತ್ರಿಯಾಗಲೇಬೇಕು ಎಂಬ ಉದ್ದೇಶ ಹೊಂದಿಲ್ಲ. ಹಲವು ಖಾತೆಗಳನ್ನು ನಿಭಾಯಿಸಿದ ಅನುಭವ ನನಗಿದೆ. ಮಂತ್ರಿ ಸ್ಥಾನ ಕೊಟ್ಟರೇ ಸಂತೋಷ. ಇಲ್ಲವೇ ಮಂತ್ರಿಯಾಗಲೇಬೇಕು ಎಂಬ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios