* ಈಗ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡಬೇಕು* ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುವುದು ವೈಯಕ್ತಿಕ ಅಭಿಪ್ರಾಯ* ಸರ್ಕಾರ ವಿಶೇಷ ಅಧಿವೇಶನ ಕರೆಯಲಿ 

ಕೊಪ್ಪಳ(ಜೂ.25): ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ, ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಪ್ರಾಮಾಣಿಕತೆ, ಬದ್ಧತೆ, ನಿಷ್ಠೆಯಿಂದ ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಬೇಕಾಗುತ್ತದೆ ಎನ್ನುವ ಮೂಲಕ ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುವ ಮಾತನ್ನು ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಪರೋಕ್ಷವಾಗಿ ನುಡಿದರು.

Add Asianetnews Kannada as a Preferred SourcegooglePreferred

ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರಾದರೂ ಸನ್ಯಾಸಿಗಳು ಇದ್ದಾರಾ? ಎಲ್ಲರಿಗೂ ಅಧಿಕಾರದ ಆಸೆ ಇರುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ ನಾಯಕನನ್ನು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡುತ್ತಾರೆ. ನಮ್ಮ ಪಕ್ಷ ಇನ್ನೂ ಅಧಿಕಾರಕ್ಕೇ ಬಂದಿಲ್ಲ. ಈಗ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕೆಲಸ ನಾವು ಮಾಡಬೇಕಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಎಂದರು.

ಕಾಂಗ್ರೆಸ್ಸಲ್ಲಿ ಸಿಎಂ ಸೀಟಿಗೆ ಈಗಲೇ ಟವೆಲ್‌: ಕಟೀಲ್‌

ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಕೆಲವು ಶಾಸಕರು ಅಭಿಮಾನದಿಂದ ಹೇಳುತ್ತಿರಬಹುದು. ಅದು ಅವರ ವೈಯಕ್ತಿಕ ಹೇಳಿಕೆ. ಆದರೆ ಪಕ್ಷದ ಹೇಳಿಕೆಯಲ್ಲ. ವೈಯಕ್ತಿಕವಾಗಿ ಅಭಿಮಾನದಿಂದ ಆ ರೀತಿ ಹೇಳುತ್ತಿರಬಹುದು. ಈಗಾಗಲೆ ಪಕ್ಷದ ಹೈಕಮಾಂಡ್‌ ಅಂಥವರಿಗೆ ಸೂಚನೆ ಕೊಟ್ಟಿದೆ. ರಾಜ್ಯದಲ್ಲಿ ಹಲವು ಸಮುದಾಯಗಳಿವೆ. ನಮ್ಮವರು ಮುಖ್ಯಮಂತ್ರಿ ಆಗಲಿ ಎಂದು ಹಲವು ಶಾಸಕರು ಹೇಳುತ್ತಿರಬಹುದು ಎಂದರು.

ರಾಜ್ಯದಲ್ಲಿ ಕೋವಿಡ್‌ 2ನೇ ಅಲೆಯಲ್ಲಿ ಅಪಾರ ಸಾವು-ನೋವು ಸಂಭವಿಸಿವೆ. ಸರ್ಕಾರದ ವೈಫಲ್ಯವೇ ಇದೆಲ್ಲದಕ್ಕೂ ಕಾರಣ. ಈಗ 3ನೇ ಅಲೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಡೆಲ್ಟಾಪ್ಲಸ್‌ ತುಂಬ ಅಪಾಯಕಾರಿ. ಆದರೂ ಸರ್ಕಾರಕ್ಕೆ ಈ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ದಪ್ಪ ಚರ್ಮದ ಸರ್ಕಾರವಾಗಿದೆ. ಚರ್ಮಗೆಟ್ಟಸರ್ಕಾರ ಎಂದು ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದರಲ್ಲದೇ, ಕೋವಿಡ್‌ ನಿರ್ವಹಣೆಯ ಕುರಿತು ಸಮಾಲೋಚನೆ ನಡೆಸಲು ಸರ್ಕಾರವು ಕೂಡಲೇ ವಿಶೇಷ ಅಧಿವೇಶನ ಕರೆಯಲಿ. ಸಾಮಾಜಿಕ ಅಂತರದಲ್ಲಿ ಕೋವಿಡ್‌-19 ನಿಯಮ ಪಾಲಿಸಲಿ, ನಮ್ಮ ಸಲಹೆಗಳನ್ನೂ ನಾವು ನೀಡಲಿದ್ದೇವೆ ಎಂದರು.