Asianet Suvarna News Asianet Suvarna News

Ramanagar : ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿಪಿವೈ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಾಲಾವಧಿ ಅಂತಿಮ ಹಂತದಲ್ಲಿದ್ದು, ಇನ್ನು ಆರು ತಿಂಗಳು ಮಾತ್ರ ಅಧಿಕಾರಾವಧಿ ಇದೆ. ಸ್ವಾಭಾವಿಕವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಸಚಿವ ಸ್ಥಾನ ನೀಡುವುದು ಬಿಡುವುದು ಬಿಜೆಪಿ ವರಿಷ್ಠರ ನಿರ್ಧಾರ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

I am also a ministerial post aspirant says CP Yogeshwar snr
Author
First Published Nov 8, 2022, 5:58 AM IST

 ಚನ್ನಪಟ್ಟಣ (ನ.08):  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಾಲಾವಧಿ ಅಂತಿಮ ಹಂತದಲ್ಲಿದ್ದು, ಇನ್ನು ಆರು ತಿಂಗಳು ಮಾತ್ರ ಅಧಿಕಾರಾವಧಿ ಇದೆ. ಸ್ವಾಭಾವಿಕವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಸಚಿವ ಸ್ಥಾನ ನೀಡುವುದು ಬಿಡುವುದು ಬಿಜೆಪಿ ವರಿಷ್ಠರ ನಿರ್ಧಾರ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ನಗರದ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ (Temple)  ಸೋಮವಾರ ನಡೆದ ಮಹಾರುದ್ರಯಾಗದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೇರಿದಂತೆ ಕೆಲವರು ಸ್ವಾಭಾವಿಕವಾಗಿ ಸಚಿವ (Minister )  ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದೆವು. ಆದರೆ, ಸಚಿವ ಸಂಪುಟದ ವಿಸ್ತರಣೆ ಯಾವ ಕಾರಣಕ್ಕೆ ತಡವಾಗಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ವಿಸ್ತರಣೆ ಆಗಬಹುದು. ಆ ವಿಚಾರ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ ಎಂದು ಮಾರ್ಮಿಕವಾಗಿ ನುಡಿದರು.

ಪಕ್ಷದ ಮುಖಂಡನಾಗಿ ನಾನು ನನ್ನ ಹಿತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಪಕ್ಷದ ವರಿಷ್ಠರು ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಮಾಡುತ್ತಾರೆಂಬ ಭರವಸೆ ಇದೆ. ಅಲ್ಲಿಯವರೆಗೆ ನಾನು ಪಕ್ಷ ವಹಿಸಿದ ಜವಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ತಾತ್ಕಾಲಿಕ ಹುದ್ದೆಗಳು:

ಸಚಿವ ಸ್ಥಾನವಿರಬಹುದು. ಯಾವುದೇ ಹುದ್ದೆಗಳಿರಬಹುದು ಅವು ತಾತ್ಕಾಲಿಕ. ಅದರಿಂದ ನನ್ನ ಕಾರ್ಯವಿಧಾನ ಏನು ಬದಲಾವಣೆ ಆಗಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಹಾಗಾಗಿ ನಾನು ಹೆಚ್ಚು ಚನ್ನಪಟ್ಟಣ, ರಾಮನಗರ, ಮಂಡ್ಯ ಭಾಗದಲ್ಲಿ ಓಡಾಡುತ್ತಿದ್ದೇನೆ. ಪಕ್ಷ ಕಟ್ಟುವ ವಿಚಾರದಲ್ಲಿ ಪ್ರಾಮಾಣಿಕವಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಕೊಡೋದು ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಈಗ ಅದೆಲ್ಲವೂ ಗೌಣ, ಅದಕ್ಕೆಲ್ಲ ಪ್ರಾಮುಖ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕನಕಪುರದಲ್ಲಿ ನಾಯಕರಿಲ್ಲ:

ದುಂತೂರು ವಿಶ್ವನಾಥ್‌ ಜೆಡಿಎಸ್‌ ತೊರೆದ ನಂತರ ಕನಕಪುರದಲ್ಲಿ ಜೆಡಿಎಸ್‌ಗೆ ನಾಯಕರಿಲ್ಲ. ಕನಕಪುರದಲ್ಲಿ ಪಕ್ಷವನ್ನು ಮುನ್ನಡೆಸುವ ಮುಖಂಡರಿಲ್ಲದ ಕಾರಣ ಆ ಪಕ್ಷ ಅಲ್ಲಿ ಅಸ್ತಿತ್ವದಲ್ಲಿ ಇಲ್ಲ. ಕನಕಪುರ ಒಂದೇ ಅಲ್ಲ ಜಿಲ್ಲೆಯ ಇತರೆ ಮೂರು ಕ್ಷೇತ್ರಗಳಲ್ಲೂ ಜೆಡಿಎಸ್‌ ಅಸ್ತಿತ್ವ ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಜನರೇ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಮುಖಂಡರಾದ ಕೂಡ್ಲೂರು ಮಹದೇವು, ನಾಗೇಶ್‌ ಇತರರಿದ್ದರು.

ಮರಿಯಾನೆ ಅಂಬಾರಿ ಹೊರಲು ಸಾಧ್ಯವಿಲ್ಲ

ಆನೆ ಅಂಬಾರಿ ಹೊತ್ತ ಮಾತ್ರಕ್ಕೆ ಮರಿಯಾನೆ ಸಹ ಅಂಬಾರಿ ಹೊರಲು ಆಗುವುದಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಗೆ ಸಿ.ಪಿ. ಯೋಗೇಶ್ವರ್‌ ಟಾಂಗ್‌ ನೀಡಿದರು. ಈ ತಾಲೂಕಿನ ಶಾಸಕ ಕುಮಾರಸ್ವಾಮಿಯೇ ಹೊರತು ಅವರ ಮಗನಲ್ಲ. ಕುಮಾರಸ್ವಾಮಿ ಮಾಡಬೇಕಾದ ಕೆಲಸವನ್ನು ಅವರ ಮಗ ಮಾಡುತ್ತಾನೆ ಅಂದರೆ ಅದನ್ನು ಈ ಕ್ಷೇತ್ರದ ಜನ, ಮತದಾರರು ಒಪ್ಪಲ್ಲ. ಒಬ್ಬ ಗ್ರಾಮ ಪಂಚಾಯತಿ ಸದಸ್ಯೆ ಪರವಾಗಿ ಪತಿ ಕೆಲಸ ಮಾಡಿದರೆ ಸಮಾಜ ಒಪ್ಪಲ್ಲ. ಇನ್ನು ಶಾಸಕರ ಪರ ಮಗ ಕೆಲಸ ಮಾಡಿದರೆ ಒಪ್ಪುತ್ತಾ? ನಾನು ಹಿಂದೆ ನಮ್ಮ ಪಕ್ಷದ ಹಿರಿಯರನ್ನ ಕುರಿತು ಪಟ್ಟದ ಆನೆ ಅಂಬಾರಿ ಹೊತ್ತ ಮಾತ್ರಕ್ಕೆ ಮರಿಯಾನೆ ಸಹ ಅಂಬಾರಿ ಹೊರಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಆ ಮಾತು ಇಲ್ಲಿಗೂ ಅನ್ವಯಿಸುತ್ತದೆ ಎಂದು ವ್ಯಂಗ್ಯವಾಡಿದರು.

ಮಹಾರುದ್ರಯಾಗದಲ್ಲಿ ಪತ್ನಿಯೊಂದಿಗೆ ಸಿಪಿವೈ ಭಾಗಿ

ಚನ್ನಪಟ್ಟಣ: ಲೋಕಕಲ್ಯಾಣ್ಯಾರ್ಥ ನಗರದ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಹಾರುದ್ರಯಾಗದಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪತ್ನಿ ಶೀಲಾ ಯೋಗೇಶ್ವರ್‌ ಸಮೇತರಾಗಿ ಭಾಗವಹಿಸಿದರು. ಶನಿವಾರ ಸಂತೆಯ ವೇದ ಬ್ರಹ್ಮ ಪ್ರಸನ್ನ ಭಟ್‌ ನೇತೃತ್ವದಲ್ಲಿ ನಡೆದ ರುದ್ರಯಾಗ 121 ಜೋಡಿ ದಂಪತಿಗಳು ಯಾಗದಲ್ಲಿ ಭಾಗಿದ್ದರು. ಯಾಗದಲ್ಲಿ ಪತ್ನಿ ಸಮೇತರಾಗಿ ಪಾಲ್ಗೊಂಡ ಯೋಗೇಶ್ವರ್‌ ಅರ್ಧ ಗಂಟೆಗೂ ಹೆಚ್ಚು ಸಮಯ ಪೂಜೆಯಲ್ಲಿ ಭಾಗಿಯಾದರೂ. ಇದೇ ವೇಳೆ 2ನೇ ಕಾರ್ತಿಕ ಸೋಮವಾರ ಪ್ರಯುಕ್ತ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.

Follow Us:
Download App:
  • android
  • ios