ಮಹಿಳಾ ಠಾಣೆಯಲ್ಲಿ ದೂರು ದಾಖಲು| ಸುಳ್ಳು ಹೇಳಿ ನಂಬಿಸಿ ಎರಡನೆಯ ಮದುವೆಯಾಗಿ ಆಕೆಯಿಂದ ಲಕ್ಷಗಟ್ಟಲೇ ಹಣ ಪಡೆದಿದ್ದಲ್ಲದೇ, ಹಣ ವಾಪಸ್‌ ಕೇಳಿದ್ದಕ್ಕೆ ಆಕೆಯನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಪತಿ| 

ಹುಬ್ಬಳ್ಳಿ(ಜು.26): ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿ ಎರಡನೆಯ ಮದುವೆಯಾಗಿ ಆಕೆಯಿಂದ ಲಕ್ಷಗಟ್ಟಲೇ ಹಣ ಪಡೆದಿದ್ದಲ್ಲದೇ, ಹಣ ವಾಪಸ್‌ ಕೇಳಿದ್ದಕ್ಕೆ ಆಕೆಯನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಲ್ಲಿನ ಅಕ್ಷಯ ಕಾಲನಿಯಲ್ಲಿ ನಡೆದಿದೆ. ಇದಕ್ಕೆ ಆತನ ಮೊದಲನೆಯ ಪತ್ನಿಯೂ ಸಾಥ್‌ ನೀಡಿದ್ದಾಳೆ. ಹೀಗೆ ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

Add Asianetnews Kannada as a Preferred SourcegooglePreferred

ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಹಾಗೂ ಈತನ ಮೊದಲ ಪತ್ನಿಯೇ ಹಲ್ಲೆ ನಡೆಸಿರುವುದು. ಹಲ್ಲೆಗೊಳಗಾದ ಮಹಿಳೆಯನ್ನು ಅನಿತಾ ರೇವಣಕರ್‌ ಎಂದು ಗುರುತಿಸಲಾಗಿದೆ. ಬಸವರಾಜ ಕೆಲಗೇರಿಗೆ ಮೊದಲ ಪತ್ನಿ ಇದ್ದಾಳೆ. ಆದರೆ ವಿಚ್ಛೇಧಿತ ಮಹಿಳೆ ಅನಿತಾಳ ಬಳಿ ತನ್ನ ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ ಪ್ರೀತಿಸಿದ್ದಾನೆ. 2012ರಲ್ಲಿ ಅನಿತಾಳನ್ನು ಆಕೆಯ ಮನೆಯಲ್ಲೇ ಮದುವೆಯಾಗಿದ್ದಾನೆ. ತನ್ನ ಮೊದಲ ಕುಟುಂಬಕ್ಕೆ ಗೊತ್ತಾಗದಂತೆ ಕೆಲವರ್ಷ ಸಂಸಾರವನ್ನೂ ನಡೆಸಿದ್ದ.

ಧಾರವಾಡ: ಸುರಕ್ಷಿತವಿದ್ದರೂ ಅಳ್ನಾವರಕ್ಕಿದೆ ಕೋವಿಡ್‌ ಭಯ!

ಬಸವರಾಜ ತನಗೆ ದುಡ್ಡಿನ ಅಗತ್ಯವಿದೆ ಎಂದು ಹೇಳಿ ಎರಡನೆಯ ಪತ್ನಿಯ ಸೈಟ್‌ನ್ನು ಮಾರಿಸಿ 28 ಲಕ್ಷ ಪಡೆದಿದ್ದ. ಇಷ್ಟರಲ್ಲಾಗಲೇ ಮೊದಲ ಪತ್ನಿಗೆ ಎರಡನೆಯ ಮದುವೆಯಾಗಿರುವುದು, ಎರಡನೆಯ ಪತ್ನಿಗೆ ಮೊದಲ ಪತ್ನಿ ಇರುವುದು ಗೊತ್ತಾಗಿದೆ. ಅದಕ್ಕೆ ಎರಡನೆಯ ಪತ್ನಿ ತನ್ನ ಹಣವನ್ನು ಕೊಡುವಂತೆ ಕೇಳಿದ್ದಾಳೆ. ಇದರಿಂದ ಬಸವರಾಜ ಹಾಗೂ ಆತನ ಮೊದಲ ಪತ್ನಿ ಇಬ್ಬರು ಸೇರಿಕೊಂಡು ಅನಿತಾಳನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಕುರಿತು ಅನಿತಾ ಮೊದಲು ಕಲಘಟಗಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲ್ಲದೇ, ತಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಬಸವರಾಜನನ್ನು ಮಾತ್ರ ಪೊಲೀಸರು ಈವರೆಗೂ ಬಂಧಿಸಿಲ್ಲ. ತಮ್ಮ ರಾಜಕೀಯ ಪ್ರಭಾವ ಬಳಸಿ ಕೇಸ್‌ನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನಿತಾ ಆರೋಪಿಸಿದ್ದಾರೆ. ನಡುರಸ್ತೆಯಲ್ಲಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ವಾಟ್ಸಾಪ್‌ಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.