ತಾಲೂಕು ಕಚೇರಿ ಸಿಬ್ಬಂದಿಗೆ ಡಿಸಿ ಶಾಕ್
ಬೆಳಗ್ಗೆ 10.30 ಗಂಟೆಗೂ ಹಲವಾರು ಅಧಿಕಾರಿಗಳು ಕಚೇರಿಗೆ ಇನ್ನೂ ಬಂದಿರಲಿಲ್ಲ. ಇದು ಕಚೇರಿಯಲ್ಲಿ ಇದ್ದವರಿಗೆ ಕಸವಿಸಿ ಉಂಟುಮಾಡಿ ಗುಸುಗುಸು ಮಾತುಗಳು ಶುರುವಾಗಿದ್ದವು. ಆಗ ನೇರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದೀಪಾ ಚೋಳ ಅವರು, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವ ಪದ್ಧತಿಯನ್ನು ಇಲ್ಲಿ ರೂಢಿಸಿಕೊಂಡಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ[ಸೆ.29]: ತಾಲೂಕು ಕಚೇರಿ ಸಿಬ್ಬಂದಿಗೆ ಶುಕ್ರವಾರ ಭಾರಿ ಶಾಕ್ ಕಾದಿತ್ತು. ಕಾರಣ, ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ದೀಪಾ ಚೋಳ ಅವರು ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದು.
ಬರೀ ಭೇಟಿ ನೀಡಿ ಹೊರಟು ಹೋಗಿದ್ದರೆ ಸಿಬ್ಬಂದಿಗೆ ಇದಕ್ಕಿಂತ ಖುಷಿ ವಿಚಾರ ಬೇರೆ ಇರುತ್ತಿರಲಿಲ್ಲ. ಆದರೆ, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಜರಾತಿ ಮತ್ತು ಕಂದಾಯ ಇಲಾಖೆ ದಾಖಲಾತಿ ಪರಿಶೀಲಿಸಿದ್ದು ಸಿಬ್ಬಂದಿಗೆ ಶಾಕ್ ನೀಡಿತ್ತು.
ಬೆಳಗ್ಗೆ 10.30 ಗಂಟೆಗೂ ಹಲವಾರು ಅಧಿಕಾರಿಗಳು ಕಚೇರಿಗೆ ಇನ್ನೂ ಬಂದಿರಲಿಲ್ಲ. ಇದು ಕಚೇರಿಯಲ್ಲಿ ಇದ್ದವರಿಗೆ ಕಸವಿಸಿ ಉಂಟುಮಾಡಿ ಗುಸುಗುಸು ಮಾತುಗಳು ಶುರುವಾಗಿದ್ದವು. ಆಗ ನೇರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದೀಪಾ ಚೋಳ ಅವರು, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವ ಪದ್ಧತಿಯನ್ನು ಇಲ್ಲಿ ರೂಢಿಸಿಕೊಂಡಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಕಚೇರಿಗೆ ಬಂದರೂ ಕರ್ತವ್ಯಕ್ಕೆ ಹಾಜರಾಗದ ಓರ್ವ ಕಂದಾಯ ನಿರೀಕ್ಷಕ ಸೇರಿ 8 ನೌಕರರ ಹಾಜರಾತಿ ಪಟ್ಟಿಯಲ್ಲಿ ಗೈರು ಹಾಕಿದರು. ಅವರೆಲ್ಲರಿಗೂ ಕಾರಣ ಕೇಳಿ ನೋಟಿ ಜಾರಿ ಮಾಡುವಂತೆ ತಹಸಿಲ್ದಾರಿಗೆ ಸೂಚಿಸಿದರು. ತಹಸಿಲ್ದಾರರು ರಜೆ ಮೇಲೆ ಇದ್ದುದರಿಂದ ಅವರ ಬಂದ ನಂತರ ಕ್ರಮಕೈಗೊಳ್ಳಲಾಗುವುದು ಉಪ ತಹಸಿಲ್ದಾರ್ ಪ್ರಕಾಶ ನಾಶಿ ತಿಳಿಸಿದರು.
ಆದಾಯ ಪ್ರಮಾಣ ಪತ್ರಕ್ಕಾಗಿ ಪೋಷಕರು ಇಲ್ಲೇಕೆ?
ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಮಯದಲ್ಲೇ ಶಾಲಾ ಮಕ್ಕಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದ ಹಲವಾರು ಪೋಷಕರು ತಮಗೆ ಬೇಗನೆ ಪ್ರಮಾಣಪತ್ರ ನೀಡುತ್ತಿಲ್ಲ. ಹಲವಾರು ಸಬೂಬು ಹೇಳಿ ಕಚೇರಿಯ ಸಿಬ್ಬಂದಿ ನಮ್ಮನ್ನು ಗಂಟೆಗಟ್ಟಲೆ ಕಾಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಪೋಷಕರ ಅಳಲನ್ನು ಆಲಿಸಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ಅರ್ಜಿ ಸ್ವೀಕರಿಸುವಂತೆ ಜಿಲ್ಲೆಯ ಎಲ್ಲ ಶಾಲಾ ಪ್ರಾಚಾರ್ಯರಿಗೆ ಮಾಹಿತಿ ನೀಡಲು ಬಿಇಒಗಳಿಗೆ ಸೂಚಿಸಲಾಗಿದೆ. ಈ ವಿಷಯ ಕುರಿತು ಬಿಇಒಗಳ ಜೊತೆ ಇನ್ನೊಂದು ಬಾರಿ ಮಾತನಾಡುತ್ತೇನೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಒಟಿಸಿ ವ್ಯವಸ್ಥೆಯಿಲ್ಲದ ಕಾರಣ ಜಾತಿ, ಆದಾಯ ಪ್ರಮಾಣಪತ್ರ ಅರ್ಜಿ ವಿಲೇವಾರಿಗೆ ತಡವಾಗುತ್ತಿದೆ. 1 ಸಾವಿರಕ್ಕೂ ಅಧಿಕ ಅರ್ಜಿ ಬಾಕಿ ಉಳಿದಿವೆ ಹಾಗೂ ಇತರ ಯೋಜನೆಗಳ ಅರ್ಜಿಗಳೂ ಇವೆ. ಅರ್ಜಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಮಿನಿ ವಿಧಾನಸೌಧ ಸಿಸಿ ಇಲ್ಲದಿರುವ ಕುರಿತು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುತ್ತೇನೆ.
ತಾಲೂಕು ಕಚೇರಿಯಲ್ಲಿ ಸೇವೆಗಳಿಗಾಗಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಅಧಿಕಾರಿಗಳು ಶೀಘ್ರ ವಿಲೇವಾರಿ ಮಾಡಬೇಕು. ಅವರಿಗೆ ಅನುಕೂಲ ಮಾಡಿಕೊಡುವುದಕ್ಕೆ ನಾವು ಇಲ್ಲಿರುವುದು. ಅರ್ಜಿ ಕೇಂದ್ರ ಕೌಂಟರ್ ಗಳನ್ನು ಹೆಚ್ಚಳ ಮಾಡಿ, ಶೌಚಗೃಹ ಸ್ವಚ್ಚತೆ ದುರಸ್ತಿಗೆ ಕ್ರಮಕೈಗೊಳ್ಳಿ ಎಂದು ಉಪ ತಹಸೀಲ್ದಾರ್ ಪ್ರಕಾಶ ನಾಶಿ ಅವರಿಗೆ ಸೂಚಿಸಿದರು.
ಹೆಸರು ಮಾರಲು ಮನಮಾಡದ ರೈತರು
ಹೆಸರು ಕಾಳು ಖರೀದಿ ಬೆಂಬಲ ಬೆಲೆ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಮನಸ್ಸು ಮಾಡುತ್ತಿಲ್ಲ, ಕಾರಣ, ಕಾಳು ಖರೀದಿಯನ್ನು 10 ರಿಂದ 4 ಕ್ವಿಂಟಲ್ ಇಳಿಕೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮಾತ್ರ ರೈತರು ಈ ರೀತಿ ಮಾಡಿಲ್ಲ. ಬೆಳಗಾವಿ, ಗದಗ, ಕಲಬುರಗಿಯಲ್ಲೂ ಮಾರಾಟ ನಡೆದಿಲ್ಲ.
ಜಿಲ್ಲೆಯಲ್ಲಿ 19000 ರೈತರು ಹೆಸರು ಕಾಳು ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದರು. ರೈತರ ಸಂಖ್ಯೆ ಹೆಚ್ಚಾಗಿದ್ದನ್ನು ಕಂಡು ಖರೀದಿ ಪ್ರಮಾಣದಲ್ಲಿ ಸರ್ಕಾರ ಕಡಿಮೆಗೊಳಿಸಿದೆ ಎಂದರು.