ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಹುಬ್ಬಳ್ಳಿ ಯೋಧ ಹುತಾತ್ಮ
ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿ| ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ್ ಹನುಮಂತಪ್ಪ ಓಲೇಕಾರ್ (29) ಹುತಾತ್ಮ| ಕಳೆದ 9 ವರ್ಷದಿಂದ 19ನೇ ಮದ್ರಾಸ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹನುಮಂತಪ್ಪ ಓಲೇಕಾರ್| ಮಂಜುನಾಥ್ ಅವರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ನಿಖಿತಾ ಎಂಬುವರ ಜತೆ ವಿವಾಹವಾಗಿತ್ತು| ಮದುವೆ ಮುಗಿಯುತ್ತಿದ್ದಂತೆ ಮಂಜುನಾಥ್ ಗಡಿ ಕಾಯಲು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದರು|
ಹುಬ್ಬಳ್ಳಿ(ಅ .2): ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ್ ಹನುಮಂತಪ್ಪ ಓಲೇಕಾರ್ (29) ಹುತಾತ್ಮರಾಗಿದ್ದಾರೆ. ಕಳೆದ 9 ವರ್ಷದಿಂದ 19ನೇ ಮದ್ರಾಸ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಂಜುನಾಥ್ ಅವರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ನಿಖಿತಾ ಎಂಬುವರ ಜತೆ ವಿವಾಹವಾಗಿತ್ತು. ಮದುವೆ ಮುಗಿಯುತ್ತಿದ್ದಂತೆ ಮಂಜುನಾಥ್ ಗಡಿ ಕಾಯಲು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಂಜುನಾಥ ಉಗ್ರರ ಗುಂಡಿಗೆ ಬಲಿಯಾದ ಸುದ್ದಿಯನ್ನು ದೂರವಾಣಿ ಮುಖಾಂತರ ಸೇನೆಯ ಅಧಿಕಾರಿಗಳು ತಿಳಿಸುತ್ತಿದ್ದಂತೆ ಅವರ ಪತ್ನಿ ನಿಖಿತಾ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುತ್ತಿತ್ತು, ಇಡೀ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿತ್ತು.
ಗ್ರಾಮಸ್ಥರೆಲ್ಲರೂ ತಮ್ಮ ಕೆಲಸಗಳನ್ನು ಬದಿಗೊತ್ತಿ ಮಂಜುನಾಥ ಅವರ ಮನೆಯ ಮುಂದೆ ಒಗ್ಗೂಡಿ ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ತಹಸೀಲ್ದಾರ್ ಸಂಗಪ್ಪ ಬಾಡಗಿ ಮತ್ತಿತರರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಕುರಿತಂತೆ ತಹಸೀಲ್ದಾರ್ ಸಂಗಪ್ಪ ಬಾಡಗಿ ಮಾತನಾಡಿ, ಮುಂಜನಾಥ ಅವರು ಹುತಾತ್ಮರಾದ ವಿಷಯವನ್ನು ಸೇನೆಯ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದರೆ, ಪಾರ್ಥಿವ ಶರೀರ ಯಾವಾಗ ಬರುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ.