ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ಗ್ರಾಮಾಂತರ ಪ್ರದೇಶದಿಂದ ಉದ್ಯೋಗ ಅರಸಿ ಬರುವ ಯುವತಿ ಹಾಗೂ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹಾಗೂ ನಿರಾಶ್ರಿತ ವೃದ್ಧರಿಗೆ ಶ್ರವಣ ಕುಮಾರ ಹೆಸರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಘೋಷಿಸುವ ಸಾಧ್ಯತೆ ಇದೆ.

ಬೆಂಗಳೂರು (ಫೆ.23): ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ಗ್ರಾಮಾಂತರ ಪ್ರದೇಶದಿಂದ ಉದ್ಯೋಗ ಅರಸಿ ಬರುವ ಯುವತಿ ಹಾಗೂ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹಾಗೂ ನಿರಾಶ್ರಿತ ವೃದ್ಧರಿಗೆ ಶ್ರವಣ ಕುಮಾರ ಹೆಸರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಬಿಬಿಎಂಪಿಯು 2023-24ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ. 

ರಾಜ್ಯ ಸರ್ಕಾರದ ಅನುದಾನ ಯೋಜನೆಗಳು ಒಳಗೊಂಡದಂತೆ ಬರೋಬ್ಬರಿ 10 ಸಾವಿರ ಕೋಟಿ ಮೊತ್ತದ ಬೃಹತ್‌ ಬಜೆಟನ್ನು ಈ ಬಾರಿ ಬಿಬಿಎಂಪಿ ಮಂಡಿಸುವ ನಿರೀಕ್ಷೆ ಇದೆ. ಏಪ್ರೀಲ್‌ ಅಥವಾ ಮೇನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿಗರ ಮನ ಗೆಲ್ಲುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಅದರೊಂದಿಗೆ ಬಿಬಿಎಂಪಿಯ ಬಜೆಟ್‌ನಲ್ಲಿ ಮತ್ತಷ್ಟು ವಿನೂತ ಯೋಜನೆಗಳನ್ನು ನೀಡುವ ನಿರೀಕ್ಷೆ ಇದೆ.

ಗ್ರಾಮ ಒನ್‌ಗಳಿಗೆ ಇನ್ನಷ್ಟು ಆರ್ಥಿಕ, ತಾಂತ್ರಿಕ ಶಕ್ತಿ: ಸಿಎಂ ಬೊಮ್ಮಾಯಿ

ಮಹಿಳೆಯರ ಕೇಂದ್ರಿತ ಬಜೆಟ್‌?: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕ್ಕೆ ನಗರದ 250 ಸ್ಥಳದಲ್ಲಿ ಶಿ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದೆ. ಅದರೊಂದಿಗೆ ರಾಜ್ಯದ ಗ್ರಾಮಾಂತರ ಪ್ರದೇಶದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಆಗಮಿಸಿವ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಭಾರತದ ಮೊಟ್ಟಮೊದಲ ಶಿಕ್ಷಕಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ‘ಸಾವಿತ್ರಿಬಾಯಿ ಪುಲೆ’ ಹೆಸರಿನಲ್ಲಿ ವಸತಿ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ಗ್ರಾಮಾಂತರ ಪ್ರದೇಶದ ಯುವತಿಯರಿಗೆ ಹಾಗೂ ಮಹಿಳೆಯರಿಗೆ ವಸತಿ ಸಮಸ್ಯೆ ಪರಿಹಾರ ಮಾಡುವುದಾಗಿದೆ.

ನಿರಾಶ್ರಿತ ವೃದ್ಧರಿಗೆ ವಸತಿ ವ್ಯವಸ್ಥೆ: ನಗರದಲ್ಲಿ ನಿರಾಶ್ರಿತ ವೃದ್ಧರಿಗೆ ವಸತಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಶ್ರವಣ ಕುಮಾರ ಹೆಸರಿನಲ್ಲಿ ಯೋಜನೆಯನ್ನು ಬಿಬಿಎಂಪಿ ಬಜೆಟ್‌ನಲ್ಲಿ ರೂಪಿಸಿದ್ದು, ಈ ಯೋಜನೆಯ ಮೂಲಕ ನಿರಾಶ್ರಿತ ಹಿರಿಯ ನಾಗರಿಕರಿಗೆ ವ್ಯವಸ್ಥೆ ವ್ಯವಸ್ಥೆ ಕಲ್ಪಿಸುವುದು. ಜತೆಗೆ, ಅವರಿಗೆ ಊಟ, ವೈದ್ಯಕೀಯ ಸೌಲಭ್ಯ ನೀಡಲು ಯೋಜಿಸಲಾಗಿದೆ. ಇಲ್ಲದೇ ಚುನಾವಣಾ ವರ್ಷ ಆಗಿರುವುದರಿಂದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಆಸ್ತಿ ತೆರಿಗೆ ವಿನಾಯಿತಿ ನೀಡುವುದು. ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಹೊಸ ಯೋಜನೆಗಳು ಘೋಷಿಸುವ ನಿರೀಕ್ಷೆ ಇದೆ.

ಬಿಜೆಪಿ ಪ್ರಣಾಳಿಕೆಗೆ ಕ್ಯುಆರ್‌ ಕೋಡಲ್ಲೂ ಸಲಹೆ ನೀಡಿ: ಸುಧಾಕರ್‌

ಬಿಬಿಎಂಪಿ ಬಜೆಟ್‌ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾರ್ಚ್‌ ಮೊದಲ ವಾರದಲ್ಲಿ ಮಂಡಿಸಲಾಗುವುದು. ತದ ನಂತರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು. ಸರ್ಕಾರ ಮಾರ್ಚ್‌ ಅಂತ್ಯದೊಳಗೆ ಅನುಮೋದನೆ ನೀಡಲಿದ್ದು, ಏಪ್ರಿಲ್‌ 1ರಿಂದ ಯೋಜನೆಗಳ ಅನುಷ್ಠಾನ ಆರಂಭಿಸಲಾಗುವುದು.
-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ.