ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ಹೊಟೇಲ್ ಮುಚ್ಚಿ, ಸಾಲದ ಸುಳಿಗೆ ಸಿಲುಕಿದ ಹೊಟೇಲ್ ಮಾಲೀಕ ರಾಮ ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸುತ್ತದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮನಕಲಕುವ ಘಟನೆ ನಡೆದಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕ ಸಾವಿಗೆ ಶರಣಾಗಿದ್ದಾರೆ. ಸಾಲದ ಒತ್ತಡದಿಂದ ಬೇಸತ್ತ ಹೊಟೇಲ್ ಉದ್ಯಮಿ ಸಿಲಿಂಡರ್ ಸಿಗದೆ ಬಂದ್ ಆದ ಹಿನ್ನೆಲೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ರಾಮ ಹಳ್ಳೂರಿ ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

ಕಳೆದ ಕೆಲವು ದಿನಗಳಿಂದ ಹೊಟೇಲ್ ಬಂದ್

ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣದ ಸಮೀಪದಲ್ಲಿರುವ ‘ಹನುಮಾನ ಹೊಟೇಲ್’ ಅನ್ನು ನಡೆಸುತ್ತಿದ್ದ ರಾಮ ಹಳ್ಳೂರಿ ಕಳೆದ ಕೆಲವು ದಿನಗಳಿಂದ ತಮ್ಮ ಹೊಟೇಲ್‌ನ್ನು ಬಂದ್ ಮಾಡಿಕೊಂಡಿದ್ದರು. ವಾಣಿಜ್ಯ ಸಿಲಿಂಡರ್ ಸಿಗದ ಕಾರಣದಿಂದ ಹೊಟೇಲ್ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದ ಅವರ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು.

ಸಾಲದ ಬಡ್ಡಿ ಕಟ್ಟಲಾಗದೆ ಸಂಕಷ್ಟ

ಇದೇ ಸಮಯದಲ್ಲಿ ಅವರು ತೆಗೆದುಕೊಂಡಿದ್ದ ಸಾಲದ ಬಡ್ಡಿ ಕೂಡ ಹೆಚ್ಚುತ್ತಾ ಹೋಗಿತ್ತು. ಹೊಟೇಲ್ ಬಂದ್ ಆಗಿದ್ದ ಪರಿಣಾಮ ಹಣದ ಒಳಹರಿವು ಕಡಿಮೆಯಾಗಿದ್ದು, ಸಾಲ ತೀರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್ಥಿಕ ಸಂಕಷ್ಟ ಮತ್ತು ಬಡ್ಡಿದಾರರ ಕಾಟದಿಂದ ಮನನೊಂದ ರಾಮ ಹಳ್ಳೂರಿ ಮಾರ್ಚ್ ತಿಂಗಳ ಅಂತ್ಯದ ವೇಳೆ ಸಾವಿಗೆ ಶರಣಾಗಿದ್ದಾರೆ.

ಈ ಘಟನೆ ಸ್ಥಳೀಯ ವ್ಯಾಪಾರ ವಲಯದಲ್ಲಿ ಆತಂಕ ಮತ್ತು ದುಃಖದ ವಾತಾವರಣವನ್ನು ಸೃಷ್ಟಿಸಿದೆ. ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಹಾಗೂ ಮೂಲಭೂತ ಅಗತ್ಯಗಳ ಕೊರತೆ ಎಷ್ಟು ಗಂಭೀರ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.