Asianet Suvarna News Asianet Suvarna News

ಕಲ್ಪತರು ನಾಡಿನಲ್ಲಿ ಹಿಂದೆಂದಿಗಿಂತಲೂ ತಾಪಮಾನ ಹೆಚ್ಚಳ: ಬಿಸಿಲಿಗೆ ಬಸವಳಿದ ಜನತೆ

ಕಲ್ಪತರು ನಾಡಿನಲ್ಲಿ ಹಿಂದೆಂದಿಗಿಂತಲೂ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ

Hot Summer In Tumakur District snr
Author
First Published Apr 5, 2024, 11:41 AM IST

ತಿಪಟೂರು: ಕಲ್ಪತರು ನಾಡಿನಲ್ಲಿ ಹಿಂದೆಂದಿಗಿಂತಲೂ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ತಿಪಟೂರಿನಲ್ಲಿ ತಾಪಮಾನ ಹೆಚ್ಚಿದ್ದು ಯಾವುದೇ ಕೆಲಸ ಕಾರ್ಯಗಳಿಗೂ ಹೋಗದೆ ಮನೆಯಲ್ಲಿಯೇ ಕೂರುವಂತಾಗಿದೆ. ರೈತರು ಹೊಲ, ತೋಟಗಳಲ್ಲಿ ಕೆಲಸ ಮಾಡಲಾರದಷ್ಟು ಬಿಸಿಲ ಬೇಗೆ ಹೆಚ್ಚಾಗಿದೆ. ತರಕಾರಿಗಳು ಮಧ್ಯಾಹ್ನದ ವೇಳೆಗೆಲ್ಲ ಬಾಡುತ್ತಿವೆ. ಹಣ್ಣು, ತರಕಾರಿಗಳನ್ನು ರಕ್ಷಣೆ ಮಾಡಿಕೊಳ್ಳಲು ವ್ಯಾಪಾರಸ್ಥರು ಹರ ಸಾಹಸ ಪಡುತ್ತಿದ್ದಾರೆ. ಯುಗಾದಿ ಹಬ್ಬ ಸಮೀಪವಿದ್ದರೂ ಜನರು ವಸ್ತುಗಳನ್ನು ಕೊಳ್ಳಲು ಮನೆಯಿಂದ ಹೊರಗೆ ಬರುತ್ತಿಲ್ಲ. ಬಿಸಿಲಿಗೆ ಬಸವಳಿದ ಜನತೆ ನೀರು, ಮಜ್ಜಿಗೆ, ತಂಪು ಪಾನೀಯ, ಐಸ್‌ಕ್ರೀಂ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಎಳೆನೀರು, ಕರ್ಬೂಜ, ಕಬ್ಬಿನಹಾಲು, ಕಲ್ಲಂಗಡಿ ಹಣ್ಣುಗಳ ಅಂಗಡಿಗಳಿಗೆ ದೌಡಾಯಿಸುತ್ತಿದ್ದಾರೆ. 

ಕಲಬುರಗಿಯಲ್ಲಿ ರಣಗುಡುತ್ತಿದೆ ಬಿಸಿಲು

ಕಲಬುರಗಿ(ಏ.05):   ಕಲಬುರಗಿಯಲ್ಲಿ ಬಿಸಿಲಬ್ಬರ ಮುಂದುವರಿದಿದೆ, ಬುಧವಾರ ಅತ್ಯಧಿಕ 44.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದ ನಗರದಲ್ಲಿ ಸತತ 2 ದಿನವೂ ತಾಪ 44.1 ಡಿಗಿ ಸೆಲ್ಸಿಯಸ್‌ ದಾಟಿದೆ. ಗುರುವಾರ ಜಿಲ್ಲೆಯಲ್ಲಿ 44. 1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಅದರಲ್ಲೂ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾದಲ್ಲಿ 44. 1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾದ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕು ಪ್ರದೇಶಗಳಲ್ಲಿಯೂ ತಾಪಮಾನ 43ರಿಂದ 44 ಡಿಗ್ರಿ ಸೆಲ್ಸಿಯಸ್‌ ಸರಾಸರಿ ದಾಖಲಾಗಿದೆ. ಹೀಗಾಗಿ ಜಿಲ್ಲಾದ್ಯಂತ ಸತತ 2ನೇ ದಿನವೂ ಉಷ್ಣಗಾಳಿ ಅಲೆಗಳು ಕಾಡಲಾರಂಭಿಸಿವೆ.
ಜನ ಮನೆಯಿಂದ ಹೊರಬರದಂತಗಿದೆ. ಮನೆಯಿಂದ ಹೊರಗಡೆ ಬರಬೇಕಾದರೆ ಮುಖಕ್ಕೆ ಕರವಸ್ತ್ರ, ಬಟ್ಟೆ ಬಳಸಿ ಮುಖ ಮುಚ್ಚಿಕೊಂಡೇ ಬರುವಂತಾಗಿದೆ. ಇನ್ನೂ ಹೊರ ಬಂದರೆ ಸಾಕು ಬಾಯಾರಿಕೆ ಕಾಡುತ್ತಿದೆ.

ಅಥಣಿ: ಬಿಸಿಲಿನ ತಾಪಕ್ಕೆ ಬಸವಳಿದ ಜನತೆ, ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್‌..!

ನಗರದಲ್ಲಿ ಅನೇಕರು ಪ್ರಮುಖ ರಸ್ತೆ, ವೃತ್ತಗಳಲ್ಲಿ, ಜನದಟ್ಟಣೆ ಇರುವಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳ ಸವಲತ್ತು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಅನೇಕರು ಜಾನುವಾರುಗಳಿಗೂ ತೊಟ್ಟಿ ಇಟ್ಟು ಕುಡಿಯಲು ನೀರಿನ ಸವಲತ್ತು ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ.

ತಾಪಮಾನ ಹೆಚ್ಚುತ್ತಿದ್ದಂತೆಯೇ ಕಲಬುರಗಿಯಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಶರಣಬಸವೇಶ್ವರ ಕೆರೆಯಲ್ಲಿಯೂ ನೀರಿನ ಮಟ್ಟ ತಳ ಕಂಡಿದೆ. ಇದರಿಂದಾಗಿ ಈ ಕೆರೆ ಸುತ್ತಲಿರುವ ಬ್ರಹ್ಮಪೂರ, ಜನತಾ ನಗರ, ಲಾಲಗೇರಿ ಕ್ರಾಲ್‌, ಲಕ್ಷ್ಮೀ ಬಡಾವಣೆ, ಶರಣ ನಗರ, ಶರಣಬಸವೇಶ್ವರ ಸಂಸ್ಥಾನ ಹಿಭಾಗದ ವಸತಿ ಪ್ರದೇಶ ಸೇರಿದಂತೆ 15 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಇದರಿಂದಾಗಿ ಅಲ್ಲಿನ ನೂರಾರು ಮನೆಗಳಲ್ಲಿರುವ ಕೊಳವೆ ಬಾವಿಗಳು ಬತ್ತಿಹೋಗಿವೆ. ಇದರಿಂದಾಗಿ ಶೇ. 60 ರಷ್ಟು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಾರಂಭಿಸಿದೆ. ಖಾಸಗಿಯಾಗಿ ಜನ ಟ್ಯಾಂಕರ್‌ ಮೊರೆ ಹೋಗಿದ್ದಾರೆ.

ನರೇಗಾ ಕೂಲಿಕಾರರ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ: 

ಬೇಸಿಗೆ ತಾಪಮಾನ ಹೆಚ್ಚಾಗಿರುವುದರಿಂದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ 14 ಜಿಲ್ಲೆಗಳಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ನಿಗದಿಪಡಿಸಿದ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

Follow Us:
Download App:
  • android
  • ios