Asianet Suvarna News Asianet Suvarna News

ಸೋತ ಎಂಟಿಬಿ ಆರೋಪಕ್ಕೆ ತಂದೆ ಬಚ್ಚೇಗೌಡರ ಪರ ನಿಂತ ಶರತ್

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ತಮ್ಮ ತಂದೆ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಎಂಟಿಬಿ ನಾಗರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

Hosakote MLA Sharath Bachegowda Bats For His father
Author
Bengaluru, First Published Dec 19, 2019, 10:26 AM IST

ಸೂಲಿಬೆಲೆ[ಡಿ.19]:  ಎಂಟಿಬಿ ನಾಗರಾಜ್‌ ಸೋಲಿಗೆ ಆತ್ಮವಲೋಕನ ಮಾಡಿಕೊಳ್ಳುವುದು ಬಿಟ್ಟು ಹತಾಶೆಯಿಂದ ನನ್ನ ಸೋಲಿಗೆ ಬಚ್ಚೇಗೌಡ ಕಾರಣ ಎಂದು ಬೆರಳು ತೋರಿಸುವುದು ಬಿಡಬೇಕು ಎಂದು ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಹೇಳಿದ್ದಾರೆ

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಿಂದ ಧರ್ಮಸ್ಥಳಕ್ಕೆ ಶರತ್‌ ಬಚ್ಚೇಗೌಡರ ಗೆಲುವಿನ ಹಿನ್ನೆಲೆಯಲ್ಲಿ ಹತ್ತು ಟನ್‌ ತರಕಾರಿ, 105 ಮೂಟೆ ಅಕ್ಕಿ ರವಾನೆ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ನನ್ನ ಸೋಲಿಗೆ ಶರತ್‌ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ ಎಂದು ಎಂಟಿಬಿ ನಾಗರಾಜ್‌ ಹೇಳುತ್ತಿರುವುದು ಅವರ ಹತಾಶೆ ಮಾತುಗಳಾಗಿವೆ. ಬಚ್ಚೇಗೌಡರು ನನ್ನ ಪರವಾಗಿ ಮತಯಾಚನೆ ಮಾಡಿಲ್ಲ. ಅವರ ಸೋಲಿಗೆ ನಾನು ಕಾರಣವಾಗದೆ ಬೇರೆ ಇನ್ಯಾರೂ ಕಾರಣವಾಗಲು ಸಾಧ್ಯವಿಲ್ಲ. ಏಕೆಂದರೆ ಅವರ ವಿರುದ್ಧವಾಗಿ ನಿಂತಿದ್ದದ್ದು ನಾನೇ. ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ 100 ಬಚ್ಚೇಗೌಡರು ಬಂದರೂ, ನನ್ನನ್ನು ಸೋಲಿಸಲು ಆಗೋಲ್ಲ ಅಂದಿದ್ದರು. ಈಗ ಬಚ್ಚೇಗೌಡ ನನ್ನ ಸೋಲಿಗೆ ಕಾರಣ ಅಂತ ಹೇಳುತ್ತಿದ್ದಾರೆ. ಬಚ್ಚೇಗೌಡರ ಕಡೆ ಬೆರಳು ತೋರಿಸುವುದಕ್ಕಿಂತ ಮೊದಲು ಅವರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಡಿ. 22ರಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೂ ಮೊದಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಈಗಾಗಲೇ ಭೇಟಿಗೆ ಅವಕಾಶ ಕೇಳಿದ್ದೆ. ಕೇಂದ್ರ ಸಚಿವರ ಆಗಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯ ಒತ್ತಡದಿಂದ ಸಾಧ್ಯವಾಗಲಿಲ್ಲ. ಈ ವಾರದಲ್ಲಿ ಭೇಟಿಯಾಗಲು ಪ್ರಯತ್ನ ಮಾಡುತ್ತೇನೆ. ಎಂಟಿಬಿ ನಾಗರಾಜ್‌ಗೆ ಮಂತ್ರಿ ಪದವಿ ನೀಡುವ ವಿಷಯ ನಾನು ಮಾತನಾಡೋಲ್ಲ. ಅದು ಅವರಿಗೆ ಬಿಟ್ಟವಿಷಯ. ನಾನು ಹೊಸಕೋಟೆ ಕ್ಷೇತ್ರದ ಅಭಿವೃದ್ಧಿ ಯೋಚಿಸುತ್ತಿದ್ದೇನೆ ಎಂದರು.

ಕಾಂಗ್ರೆಸಿಗೆ ಬೆಂಬಲ ಸುಳ್ಳು ಎಂದ ಶರತ್ : ಮುಂದಿನ ನಡೆ ಏನು?...

ಸೂಲಿಬೆಲೆ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ವಿ. ಸತೀಶ್‌ಗೌಡ ಮಾತನಾಡಿ, ಹೊಸಕೋಟೆ ಉಪ ಚುನಾವಣೆಯಲ್ಲಿ ಶರತ್‌ ಬಚ್ಚೇಗೌಡರು ಗೆಲುವಿಗಾಗಿ ಕಾರ್ಯಕರ್ತರು ಹರಕೆ ಹೊತ್ತುಕೊಂಡಿದ್ದು, ಅದನ್ನು ತೀರಿಸುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಶ್ರೀಕ್ಷೇತ್ರ ಧರ್ಮಸ್ಥಳ ಅನ್ನದಾಸೋಹಕ್ಕೆ ಹತ್ತು ಟನ್‌ ತರಕಾರಿ ಹಾಗೂ 105 ಮೂಟೆ ಅಕ್ಕಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದರು. 

Follow Us:
Download App:
  • android
  • ios