ಲವ್ ಜಿಹಾದ್, ಗೋಹತ್ಯೆ ವಿರುದ್ಧ ಶೀಘ್ರ ಕಠಿಣ ಕಾನೂನು: ಸಚಿವ ಬೊಮ್ಮಾಯಿ
1960ರ ದಶಕದಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ| ಗಾಂಧೀಜಿ ಕೂಡ ಗೋಹತ್ಯೆ ವಿರುದ್ಧ ನಿಲುವು ಹೊಂದಿದ್ದರು| ಈ ಹಿಂದೆ ಗೋಹತ್ಯೆ ತಡೆ ಕಾನೂನು ಜಾರಿಗೆ ಮುಂದಾದಾಗ ರಾಜ್ಯಪಾಲರು ಸಹಿ ಹಾಕಿರಲಿಲ್ಲ| ಈ ಬಾರಿ ಮತ್ತೆ ಗೋಹತ್ಯೆ ತಡೆಗೆ ಕಠಿಣ ನಿಯಮ ಸೇರಿಸಿ ಜಾರಿ|
ಮಂಗಳೂರು(ಡಿ.03): ರಾಜ್ಯದಲ್ಲಿ ಲವ್ ಜಿಹಾದ್ ಸಾಮಾಜಿಕ ಪಿಡುಗು ಆಗಿದೆ. ಲವ್ ಜಿಹಾದ್ ಅತಿರೇಕವಾಗಿದ್ದು, ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಸಮಾಜದ ಶಾಂತಿ ಹಾಳು ಮಾಡುತ್ತಿರುವುದರಿಂದ ಅದರ ವಿರುದ್ಧ ಸಂವಿಧಾನದ ಚೌಕಟ್ಟಿನಡಿ ಶೀಘ್ರ ಕಠಿಣ ಕಾನೂನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಅದೇ ರೀತಿ ಗೋವುಗಳ ರಕ್ಷಣೆ ಹಾಗೂ ಗೋಹತ್ಯಾ ನಿಷೇಧದ ಕುರಿತು ಶೀಘ್ರದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
"
ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಸ್ವಾತಂತ್ರ ಹೆಸರಿನಲ್ಲಿ ಸುಲಭವಾಗಿ ಮತಾಂತರ ಕೃತ್ಯ ನಡೆಸುತ್ತಿದ್ದಾರೆ. ಈಗ ಕೋರ್ಟ್ ಕೂಡ ಮತಾಂತರ ಬಗ್ಗೆ ವ್ಯಾಖ್ಯೆ ಮಾಡಿದೆ. ಸಮಾಜದ ಸ್ವಾಸ್ಥ್ಯ, ಶಾಂತಿ ಮತ್ತು ಸಂಸ್ಕೃತಿ ನಾಶ ಮಾಡುವ ಲವ್ಜಿಹಾದ್ಗೆ ಕಡಿವಾಣ ಹಾಕಲು ಸಮಗ್ರ ಕಠಿಣ ಕಾನೂನು ಜಾರಿಯೇ ಪರಿಹಾರ ಎಂದರು.
ಮಂಗಳೂರಿನ ಗೋಡೆ ಬರಹ ಕೇಸ್ : ತೀರ್ಥಹಳ್ಳಿ ಯುವಕ ಅರೆಸ್ಟ್
ಗೋಹತ್ಯೆ ತಡೆಗೆ ಕಠಿಣ ಕಾನೂನು:
1960ರ ದಶಕದಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಗಾಂಧೀಜಿ ಕೂಡ ಗೋಹತ್ಯೆ ವಿರುದ್ಧ ನಿಲುವು ಹೊಂದಿದ್ದರು. ಗೋಹತ್ಯೆ ನಿಷೇಧ ಕಾನೂನು ಇದ್ದರೂ ಅದಕ್ಕೆ ಹಲ್ಲು ಇರಲಿಲ್ಲ. ಹಾಗಾಗಿ ಅದನ್ನು ದುರುಪಯೋಗ ಪಡಿಸಲಾಗುತ್ತಿತ್ತು. ಈ ಹಿಂದೆ ಗೋಹತ್ಯೆ ತಡೆ ಕಾನೂನು ಜಾರಿಗೆ ಮುಂದಾದಾಗ ರಾಜ್ಯಪಾಲರು ಸಹಿ ಹಾಕಿರಲಿಲ್ಲ. ಹಾಗಾಗಿ ಈ ಬಾರಿ ಮತ್ತೆ ಗೋಹತ್ಯೆ ತಡೆಗೆ ಕಠಿಣ ನಿಯಮಗಳನ್ನು ಸೇರಿಸಿ ಜಾರಿಗೊಳಿಸಲಾಗುವುದು.