ಡ್ರಗ್ಸ್ ಮಾಹಿತಿ ಇದ್ದರೂ ನಿರ್ಲಕ್ಷಿಸಿದ ಪೊಲೀಸರ ವಿರುದ್ಧವೇ ಕ್ರಮ: ಬೊಮ್ಮಾಯಿ
ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗ| ಮಾದಕವಸ್ತು ಮಾರಾಟದ ಜಾಲದ ಬಗ್ಗೆ ಮಾಹಿತಿ ಇದ್ದೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ|
ಬೆಂಗಳೂರು(ಮಾ.20): ರಾಜಧಾನಿ ಬೆಂಗಳೂರು ರಾಜ್ಯದ ಮಾದಕ ವಸ್ತುಗಳ ಮಾಫಿಯಾ ಬಗ್ಗೆ ಮಾಹಿತಿ ಇದ್ದೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಡ್ರಗ್ ಮಾಫಿಯಾ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಚಿಕ್ಕಮಕ್ಕಳು ಈ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ. ಈ ಡ್ರಗ್ ಜಾಲದಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಮಾದಕವಸ್ತು ಮಾರಾಟದ ಜಾಲದ ಬಗ್ಗೆ ಮಾಹಿತಿ ಇದ್ದೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಡ್ರಗ್ಸ್ ಜಾಲದ ಬೆನ್ನುಮೂಳೆ ಮುರೀತೇವೆ: ಬೊಮ್ಮಾಯಿ
ವಿದೇಶಿ ಪ್ರಜೆಗಳು ಈ ಡ್ರಗ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿ ವೀಸಾ ಪಡೆದು ಅವಧಿ ಮುಗಿದರೂ ಅಕ್ರಮವಾಗಿ ನೆಲೆಸುತ್ತಿದ್ದಾರೆ. ಕೆಲವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಪ್ರಕರಣ ಮುಗಿಯುವವರೆಗೂ ಇಲ್ಲೇ ಉಳಿಯುತ್ತಿದ್ದಾರೆ. ಆಫ್ರಿಕಾ, ಕೀನ್ಯಾ, ಬಾಂಗ್ಲಾ ದೇಶ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಈ ಡ್ರಗ್ ಮಾಫಿಯಾದಲ್ಲಿ ಇದ್ದಾರೆ. ಇದನ್ನು ಮಟ್ಟಹಾಕಲು ರಾಜ್ಯದಲ್ಲಿ ಮೊದಲ ಬಾರಿಗೆ ಮಾದಕವಸ್ತು ಪ್ರಕರಣಗಳ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತಿದೆ ಎಂದರು.
ತೆರೆಯಿಂದ ಮರೆಯಾದ ಗಾಯಕಿ; ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ ಕಿಡಿಗೇಡಿಗಳು!
ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 1,600ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಕೆ.ಆರ್. ಪುರ ವ್ಯಾಪ್ತಿಯಲ್ಲೇ 67 ಪ್ರಕರಣ ದಾಖಲಿಸಿ 89 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಡಿ ನಗರದಲ್ಲಿ 303 ಮಂದಿಯನ್ನು ಬಂಧಿಸಲಾಗಿದೆ. ಮಾದಕ ವಸ್ತು ಸೇವಿಸುವ ಹಾಗೂ ಮಾರಾಟ ಮಾಡುವ ಗ್ಯಾಂಗ್ಗಳನ್ನು ಹಿಡಿದು ಹೆಡೆಮುರಿ ಕಟ್ಟಲು ಎಲ್ಲ ಡಿಸಿಪಿಗಳಿಗೆ ಸೂಚಿಸಲಾಗಿದೆ. ಪ್ರತಿ ದಿನ ಕಾರ್ಯಾಚರಣೆ ಸಂಘಟಿಸಿ, ವರದಿ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದರು.