ಬುದ್ಧಿಮಾಂದ್ಯ ಮಕ್ಕಳ ಕಂಡು ಸಚಿವ ಬಸವರಾಜ ಬೊಮ್ಮಾಯಿ ಭಾವುಕ| ಗುಲಾಬಿ ಹೂ ಕೊಟ್ಟು ಸಚಿವ ಬೊಮ್ಮಾಯಿಗೆ ಹುಟ್ಟುಶುಭಾಶಯ ತಿಳಿಸಿದ ಮಕ್ಕಳು| ಕೇಕ್‌ ಕತ್ತರಿಸಿ ಮಕ್ಕಳಿಗೆ ಬಟ್ಟೆ ವಿತರಿಸಿದ ಬೊಮ್ಮಾಯಿ|

ಹಾವೇರಿ(ಜ.29): ನಗರದ ಇಜಾರಿಲಕಮಾಪೂರದ ಜ್ಞಾನಜ್ಯೋತಿ ಬುದ್ಧಿಮಾಂದ್ಯ ವಸತಿ ಶಾಲೆಗೆ ತಮ್ಮ 60ನೇ ಜನ್ಮದಿನ ಆಚರಿಸಿಕೊಳ್ಳಲು ಆಗಮಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಮಕ್ಕಳು ಗುಲಾಬಿ ಹೂ ಕೊಟ್ಟು ಶುಭಾಶಯ ಹೇಳುತ್ತಿದ್ದಂತೆ ಸಚಿವರು ಭಾವುಕರಾದರು.

Add Asianetnews Kannada as a Preferred SourcegooglePreferred

"

ಮಕ್ಕಳು ಸಚಿವ ಬೊಮ್ಮಾಯಿಗೆ ಹೂ ಕೊಟ್ಟು ಕೈಕುಲುಕಿದರು. ಈ ವೇಳೆ ಸಚಿವರು ಮಕ್ಕಳಿಂದ ಕೇಕ್‌ ಕತ್ತರಿಸಿ ತಿನ್ನಿಸಿ ಎಲ್ಲರಿಗೂ ಬಟ್ಟೆ ವಿತರಿಸಿದರು. ಆಗ ಮಕ್ಕಳು ತಮ್ಮದೇಯಾದ ಲೋಕದಲ್ಲಿದ್ದರು. ಆ ಮಕ್ಕಳ ಸ್ಥಿತಿ ಕಂಡು ಭಾವುಕರಾಗಿದ್ದ ಬೊಮ್ಮಾಯಿ ಅವರ ಕಣ್ಣುಗಳು ತೇವಗೊಂಡವು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಮಾತನಾಡಿದ ಸಚಿವರು, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ ಬದುಕು ಮಾತ್ರ ಪ್ರಸ್ತುತ. ಇವರು ದೇವರ ಮಕ್ಕಳು. ಇವರ ಸೇವೆ ದೇವರ ಸೇವೆ ಇದ್ದಂತೆ. ಇಲ್ಲಿಯ ಶಿಕ್ಷಕರ ಮಾನಸಿಕ ಶಕ್ತಿ ಅದ್ಭುತವಾಗಿದ್ದು, ನಿತ್ಯ ಮಕ್ಕಳೊಂದಿಗೆ ಕಾಲ ಕಳೆಯುವುದು ಸವಾಲಿನ ಕೆಲಸವಾಗಿದೆ ಎಂದರು.

ಈ ಸಂಸ್ಥೆಗೆ ನಮ್ಮ ಟ್ರಸ್ಟ್‌ ವತಿಯಿಂದ ವೈಯಕ್ತಿಕವಾಗಿ 2 ಲಕ್ಷ ಅನುದಾನ ಕೊಡುತ್ತೇನೆ. ಏನಾದರೂ ಶಾಶ್ವತ ಕೆಲಸಗಳಿಗಾಗಿ ಮುಂಬರುವ ಬಜೆಟ್‌ನಲ್ಲಿ 10ಲಕ್ಷ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.<br/>ಇದು ನಮ್ಮ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸ್ಥಳವಾಗಿದೆ. ಈ ಮಕ್ಕಳ ಜವಾಬ್ದಾರಿಯನ್ನು ಇಡೀ ಸಮಾಜ ಹೊರಬೇಕಿದೆ. ಇವರ ಸೇವೆಗೆ ನಾವು ಮುಂದಾಗಬೇಕಿದೆ. ಈ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು, ಕಷ್ಟ-ಕಾರ್ಪಣ್ಯಗಳನ್ನು ದೂರಮಾಡಲು ನೆರವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಸಿಇಒ ರಮೇಶ ದೇಸಾಯಿ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಪ್ರಮುಖರಾದ ನವೀನ ಸವಣೂರು, ಗಂಗಾಧರ ಗಡ್ಡೆ ಇದ್ದರು.<br/>