*  ಖಾಸಗಿ ಏಜೆನ್ಸಿ, ಅಂಚೆಗೆ ನೀಡುವ ಚಿಂತನೆ*  ನೂತನವಾಗಿ ಸೇರ್ಪಡೆಯಾಗುವ ಪೊಲೀಸ್‌ ಸಿಬ್ಬಂದಿಗೆ ಒಳ್ಳೆಯ ವೇತನ ಜಾರಿ*  ಗೃಹ ಇಲಾಖೆಗೆ ಕಳೆದ 3 ವರ್ಷಗಳಷ್ಟು ಅನುದಾನ ದೊರೆತಿಲ್ಲ 

ಚನ್ನಮ್ಮನ ಕಿತ್ತೂರು(ಸೆ.09): ಕೋರ್ಟ್‌ ನೀಡುವ ಸಮನ್ಸ್‌ಗಳನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವ ಕಾರ್ಯಕ್ಕೆ ಪೊಲೀಸ್‌ ಸಿಬ್ಬಂದಿಯೇ ತೆರಳಬೇಕಾಗುತ್ತಿದೆ. ಇನ್ನು ಮುಂದೆ ಸಮನ್ಸ್‌ ತಲುಪಿಸುವ ಕಾರ್ಯವನ್ನು ಖಾಸಗಿ ಏಜೆನ್ಸಿ ಅಥವಾ ಅಂಚೆ ಇಲಾಖೆಗೆ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಅವ​ರು ಮಾತನಾಡಿದರು. ಔರಾದಕರ ವರದಿಯಲ್ಲಿ ನೂತನವಾಗಿ ಸೇರ್ಪಡೆಯಾಗುವ ಪೊಲೀಸ್‌ ಸಿಬ್ಬಂದಿಗೆ ಒಳ್ಳೆಯ ವೇತನ ಜಾರಿಯಾಗುತ್ತದೆ. ಇನ್ನುಳಿದಂತೆ ಹಳೇ ಸಿಬ್ಬಂದಿ ವೇತನದ ಕುರಿತು ಚಿಂತನೆ ನಡೆಸಿದ್ದು, ಕೆಲವು ತಾಂತ್ರಿಕ ದೋಷಗಳಿದ್ದು ಅವುಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಅಮಾಯಕರಿಗೆ ರೌಡಿ ಪಟ್ಟಿಯಿಂದ ಮುಕ್ತಿ: ಸುಳ್ಳು ಕೇಸ್‌ನಲ್ಲಿ ಸಿಲುಕಿರುವವರು ಇನ್ನು ರೌಡಿಗಳಲ್ಲ!

ರಾಜ್ಯದಲ್ಲಿ ಗೃಹ ಇಲಾಖೆಗೆ ಕಳೆದ 3 ವರ್ಷಗಳಷ್ಟು ಅನುದಾನ ದೊರೆತಿಲ್ಲ. ಆದರೆ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ಇಲಾಖೆಗೆ ಸರ್ಕಾರದಿಂದ ಎಲ್ಲ ಸಹಾಯ ಸೌಲಭ್ಯಗಳು ದೊರೆಯುತ್ತಿವೆ. ರಾಜ್ಯದಲ್ಲಿ ಶೇ.49 ರಷ್ಟು ಸಿಬ್ಬಂದಿಗೆ ಹೊಸ ಗೃಹ ಸಮುಚ್ಚಯ, ವಾಹನ, ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಆಧುನೀಕರಣಗೊಳಿಸುತ್ತಿದ್ದೇವೆ ಎಂದರು.