ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹಾಸನ (ಜು.20) ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಪಾರ್ಥಿವ ಶರೀರದ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ರಂಗನಾಥ ಸ್ವಾಮಿ ತಪ್ಪಲು ಜಾಗದಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದೆ. ಹೊಳೆನರಸಿಪುರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲಾಗಿದೆ. ವ್ಯಾಪಾರಿಗಳು, ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ತಮ್ಮ ಸಂತಾಪ ಸೂಚಿಸಿದ್ದಾರೆ.

ಹೊಳೆನರಸೀಪುರ ಜನರು ಅಮ್ಮಾ ಎಂದೆ ಕರೆಯುತ್ತಿದ್ದ ಚೆನ್ನಮ್ಮ ಅಗಲಿಕೆಯಿಂದ ತೀವ್ರ ದುಃಖತಪ್ತರಾಗಿದ್ದಾರೆ. ಚೆನ್ನಮ್ಮ ಹೊಳೆನರಸೀಪುರ ಜನರ ಕಷ್ಟ, ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿದ್ದರು. ಚೆನ್ನಮ್ಮ ಅವರನ್ನ ಕಳೆದುಕೊಂಡ ಹೊಳೆನರಸೀಪುರ ಜನ ಇದೀಗ ಅಂಗಡಿ ಬಂದ್ ಮಾಡಿ ಬಂದ್ ಆಚರಿಸಿದ್ದಾರೆ. ಈ ಮೂಲಕ ಗೌರವ ನಮನ ಹಾಗೂ ಸಂತಾಪ ಸೂಚಿಸಿದ್ದಾರೆ.

ಹಾಸನ ತಾಲೂಕಿನ ಶಾಲಾ ಕಾಲೇಜಿಗೆ ರಜೆ

ಚೆನ್ನಮ್ಮ ನಿಧನ ಹಾಗೂ ಇಂದು ಹೊಳೇನರಸಿಪುರದಲ್ಲಿ ಅಂತ್ಯಕ್ರಿಯೆ ನಡೆಯುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು (ಜುಲೈ 20) ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಭಾನುವಾರವೇ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಹೊಳೆನರಸೀಪುರದಲ್ಲಿ ನಡೆಯುವ ಅಂತಿಮ ದರ್ಶನ ಹಾಗೂ ಅಂತಕ್ರಿಯೆಗೆ ಹೆಚ್ಚಿನ ಜನ ಸೇರುತ್ತಿದ್ದಾರೆ.

ಮಧ್ಯಾಹ್ನ 2 ರಿಂದ 4ರ ಒಳಗೆ ಅಂತ್ಯಕ್ರಿಯೆ

ಇಂದು ಮಧ್ಯಾಹ್ನ 2 ಗಂಟೆಯ ನಂತರ 4 ಗಂಟೆ ಒಳಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೆಚ್‌ಡಿ ರೇವಣ್ಣ ಹೇಳಿದ್ದಾರೆ. ಪಡುವಲ ಹಿಪ್ಪೆ ಗ್ರಾಮ,ಹಾಗೂ ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಸೇರಿದಂತೆ ಮೂರು ದೇವಸ್ಥಾನಗಳಲ್ಲಿ ಅಭಿಷೇಕ ಮಾಡಿಸಿ ನಂತರ ತೀರ್ಥ ಪ್ರಸಾದ ಚನ್ನಮ್ಮ ಪಾರ್ಥಿವ ಶರೀರಕ್ಕೆ ಪ್ರೋಕ್ಷಣೆ ಮಾಡಲಾಗುತ್ತದೆ. ಚನ್ನಮ್ಮ ಪಾರ್ಥಿವ ಶರೀರ ಹೊಳೆನರಸೀಪುರ ಲಕ್ಷ್ಮಿ ದೇಗುಲದ ಮುಂಭಾಗಕ್ಕೂ ತೆರಳಲಿದೆ. ಚನ್ನಮ್ಮ ದೇವೇಗೌಡರು ವಾಸವಿದ್ದ ಪಡುವಲಹಿಪ್ಪೆ ಸಣ್ಣ ಮನೆ ಬಳಿಗೂ ತೆರಳಲಿದೆ. ನಂತರ ಹರದನಹಳ್ಳಿ(ಕ್ಯಾತನಹಳ್ಳಿ) ಅಂತ್ಯಕ್ರಿಯೆ ಸ್ಥಳಕ್ಕೆ ಬರಲಿದೆ ಎಂದು ರೇವಣ್ಣ ಹೇಳಿದ್ದಾರೆ.

ಜೆಪಿ ನಗರದ ಕಣ್ಣನ್ ಶರ್ಮಾ ಅರ್ಚಕರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದೆ. ದಕ್ಷಿಣ ದಿಕ್ಕಿಗೆ ತಲೆ ಇರಿಸಿ ಅಂತ್ಯಕ್ರಿಯೆ ಮಾಡುತ್ತೇವೆ. ಕಿರಿಯ ಮಗ ಅಮ್ಮನ ಅಂತ್ಯಕ್ರಿಯೆ ವಿಧಿ ವಿಧಾನ ಮಾಡುತ್ತಾನೆ. ಎಲ್ಲಾ ಗಂಡುಮಕ್ಕಳು, ಹೆಣ್ಣುಮಕ್ಕಳು ಜೊತೆಯಲ್ಲಿದ್ದು ಕಾರ್ಯ ಮಾಡುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.