ಚಿಕ್ಕಮಗಳೂರು ದತ್ತಪೀಠ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.  ನವೆಂಬರ್ 13ರ ಒಳಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು ಇಲ್ಲವಾದ್ರೆ, ಪ್ರವೀಣ್ ನೆಟ್ಟಾರ್ ಹತ್ಯೆಯಾದಗ ಯಾವ ರೀತಿ ಆಕ್ರೋಶ ನೋಡಿದ್ದೀರೋ  ಅದೇ ಆಕ್ರೋಶ ನೋಡುತ್ತೀರಾ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಎಚ್ಚರಿಕೆ ನೀಡಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಅ.13): ಕಾಫಿನಾಡಿನಲ್ಲಿರುವ ವಿವಾದಿತ ದತ್ತಪೀಠ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂಗಳ ಭಾವೈಕ್ಯತೆ ಕೇಂದ್ರದಲ್ಲಿ ಸಮರ ಸಾರಲು ಶ್ರೀರಾಮಸೇನೆ ತೀರ್ಮಾನಿಸಿದೆ. ಆದ್ರೆ, ಈ ಬಾರಿ ಶ್ರೀರಾಮ ಸೇನೆ, ಪೀಠದ ಬಗ್ಗೆ ಸಮರ ಸಾರಿರೋದು ಇನ್ಯಾವ್ದೋ ಧರ್ಮವನ್ನ ಗುರಿಯಾಗಿಸಿಕೊಂಡಲ್ಲ. ಬದಲಾಗಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟಕ್ಕೆ ಸಜ್ಜಾಗಿದೆ. ಅಲ್ಲದೇ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿರುವ ಶ್ರೀರಾಮ ಸೇನೆ ಕೊಟ್ಟ ಮಾತನ್ನ, ನ್ಯಾಯಾಲಯದ ಆದೇಶವನ್ನ ಈಡೇರಿಸದಿದ್ರೆ ಮುಂಬರೋ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡ್ತೀವಿ ಅನ್ನೋ ವಾರ್ನಿಂಗ್ ಕೂಡ ನೀಡಿದೆ. ಚಿಕ್ಕಮಗಳೂರಿನ ದತ್ತಪೀಠ ವಿವಾದಿತ ಕೇಂದ್ರಬಿಂದುವಾಗಿ ದಶಕಗಳೇ ಕಳೆದಿದೆ. ಹಿಂದೂಗಳು ಈ ಭಾವೈಕ್ಯತಾ ಕ್ಷೇತ್ರವನ್ನ ದತ್ತಪೀಠ ಅಂತ ಕರೆದ್ರೆ, ಮುಸ್ಲಿಮರು ಈ ಕ್ಷೇತ್ರವನ್ನ ಬಾಬಬುಡನ್ ಗಿರಿ ಅಂತ ಕರೆಯುತ್ತಾರೆ. ಈ ಕ್ಷೇತ್ರದ ಉಮೇದುವಾರಿಕೆ ಬಗ್ಗೆ ಅನೇಕ ವರ್ಷಗಳಿಂದ ಎರಡು ಧರ್ಮದವರು ಕೋರ್ಟ್ನಲ್ಲಿ ಹೋರಾಟ ನಡೆಸಿಕೊಂಡು ಬರ್ತಿವೆ. ಈ ಮಧ್ಯದಲ್ಲಿ ದಕ್ಷಿಣ ಕರ್ನಾಟಕದ ಭಾಗವಾಗಿರುವ ಚಿಕ್ಕಮಗಳೂರಿನ ದತ್ತಪೀಠವನ್ನೇ ಚುನಾವಣೆ ವಿಚಾರವನ್ನಾಗಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಗುಟ್ಟಾಗೇನು ಉಳಿದಿಲ್ಲ. ಹಿಂದುತ್ವದ ಮಂತ್ರ ಜಪಿಸಿ, ಅಧಿಕಾರಕ್ಕೆ ಬಂದ್ರೆ ಈ ಸ್ಥಳವನ್ನ ಹಿಂದೂಗಳಿಗೆ ಒಪ್ಪಿಸುತ್ತೇವೆ ಅಂತ ಬಿಜೆಪಿಯ ಹಲವು ನಾಯಕರು ವಾಗ್ದಾನ ಮಾಡಿ ರಾಜಕೀಯ ಸ್ಥಾನ ಮಾನ ಅಲಂಕರಿಸಿದ್ದಾರೆ.

ಆದ್ರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಅಂತ ಶ್ರೀರಾಮ ಸೇನೆ ಇದೀಗ ಕೆಂಡಾಮಂಡಲವಾಗಿದೆ. ಮುಂದಿನ ನವೆಂಬರ್ 13ರಂದು ದತ್ತಪೀಠ ಅಭಿಯಾನಕ್ಕೆ ದಿನಾಂಕ ನಿಗದಿ ಮಾಡಿರೋ ಶ್ರೀರಾಮ ಸೇನೆ, ಆ ದಿನದ ಒಳಗಾಗಿ ದತ್ತಪೀಠಕ್ಕೆ ಹಿಂದೂ ಆರ್ಚಕರ ನೇಮಕವಾಗಬೇಕು ಅಂತ ಆಗ್ರಹಿಸಿದೆ. ಇಲ್ಲದಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆಯಾದ ಸಂದರ್ಭದಲ್ಲಿ ಉಂಟಾದ ಆಕ್ರೋಶ ದತ್ತಪೀಠದಲ್ಲಿ ನಡೆಯುತ್ತೆ ಎಂದು ಶ್ರೀರಾಮ ಸೇನೆ ರಾಜಗ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. 

ದತ್ತಪೀಠದಲ್ಲಿ ಹಿಂದು-ಮುಸ್ಲಿಂ ಇಬ್ಬರಿಗೂ ಪೂಜೆ ಅಧಿಕಾರ: ಹೈಕೋರ್ಟ್‌ಗೆ ಮಾಹಿತಿ

ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ:
ದತ್ತಪೀಠದ ಹೋರಾಟದಲ್ಲಿ ಭಾಗಿಯಾಗಿದ್ದ ಬಿ.ಎಸ್ ಯಡಿಯೂರಪ್ಪ, ಮಾಲೆ ಹಾಕಿ ಬರುವುದಾಗಿ ಮಾತು ಕೊಟ್ಟಿದ್ರು. ಆದ್ರೆ ಮಾತಿಗೆ ತಪ್ಪಿದ ಹಿನ್ನೆಲೆಯಲ್ಲಿ ಅಧಿಕಾರವನ್ನ ಕಳೆದುಕೊಂಡ್ರು. ನೀವು, ಕೂಡ ಕೋರ್ಟ್ ಸೂಚನೆ ನೀಡಿದ್ರೂ ಹಿಂದೂ ಆರ್ಚಕರನ್ನ ನೇಮಿಸಲು ಮೀನಾಮೇಷ ಎಣಿಸುತ್ತಿದ್ದೀರಿ. ನವೆಂಬರ್ 13ರೊಳಗೆ ಆರ್ಚಕರನ್ನ ನೇಮಿಸದಿದ್ರೆ ದೊಡ್ಡ ಹೋರಾಟವನ್ನ ನೀವು ನೋಡಬೇಕಾಗುತ್ತೆ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಸಮಸ್ತ ಹಿಂದೂ ಬಾಂಧವರು ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಅಂತಾ ಶ್ರೀರಾಮ ಸೇನೆ ಕಿಡಿಕಾರಿದೆ.

ದತ್ತಪೀಠದ ಹೋಮ ಮಂಟಪದಲ್ಲಿ ಇನ್ನೂ ನಿಂತಿಲ್ಲ ಮಾಂಸಹಾರ: ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶ

ಸದ್ಯ ರಾಜ್ಯ ಸರ್ಕಾರಕ್ಕೆ ಗಡುವು ನೀಡಿರೋ ಶ್ರೀರಾಮಸೇನೆ, ದತ್ತ ಮಾಲಾ ಅಭಿಯಾನಕ್ಕೆ ತಯಾರಿ ನಡೆಸುತ್ತಿದೆ. ರಾಜ್ಯದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಕಾಫಿನಾಡಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಸರ್ಕಾರ ಶ್ರೀರಾಮ ಸೇನೆಯ ಬೇಡಿಕೆಯನ್ನು ಪಾಲಿಸುತ್ತಾ ಇಲ್ಲಾ ದತ್ತಪೀಠದಲ್ಲಿ ಹೋರಾಟದ ಎಚ್ಚರಿಕೆ ನೀಡಿರೋ ಕಾರ್ಯಕರ್ತರ ಜೊತೆ ಸಂಘರ್ಷಕ್ಕೆ ನಿಲ್ಲುತ್ತೋ ಗೊತ್ತಿಲ್ಲ. ಪ್ರತಿ ನವೆಂಬರ್ - ಡಿಸೆಂಬರ್ ನಲಿ ದತ್ತಪೀಠದ ವಿಚಾರ ಮುನ್ನಲೆಗೆ ಬರ್ತಿದ್ದು, ಈ ಬಾರಿ ಹಿಂದೂ ಕಾರ್ಯಕರ್ತರ ಸಿಟ್ಟು ಸೇಡು ಸರ್ಕಾರದ ವಿರುದ್ಧ ತಿರುಗಿ ಬಿದ್ದಿರೊದು ವಿಪರ್ಯಾಸವೇ ಸರಿ.