Asianet Suvarna News Asianet Suvarna News

ಹಿಂದೂ ಮಹಾಗಣಪತಿಯ ಶೋಭಾಯಾತ್ರೆ: ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ ಯುವಕರು

ದಾವಣಗೆರೆ ನಗರದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಹಿನ್ನೆಲೆಯಲ್ಲಿ ನಗರದಲ್ಲಿಂದು‌ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಜನಮನ‌ ಸೂರೆಗೊಂಡಿತು. ನಗರದೆಲ್ಲೆಡೆ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದ್ದು ಶೋಭಾಯಾತ್ರೆಗೆ ಕಳೆಕಟ್ಟಿದಂತಿತ್ತು

Hindu Mahaganapati visarjana procession at davanagere district rav
Author
First Published Oct 14, 2023, 5:21 PM IST

ವರದಿ: ವರದರಾಜ್ 

ದಾವಣಗೆರೆ.(ಅ 14) :  ದಾವಣಗೆರೆ ನಗರದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಹಿನ್ನೆಲೆಯಲ್ಲಿ ನಗರದಲ್ಲಿಂದು‌ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಜನಮನ‌ ಸೂರೆಗೊಂಡಿತು. ನಗರದೆಲ್ಲೆಡೆ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದ್ದು ಶೋಭಾಯಾತ್ರೆಗೆ ಕಳೆಕಟ್ಟಿದಂತಿತ್ತು. ನಗರದ ಹೈಸ್ಕೂಲ್ ಮೈದಾನದಿಂದ ಶೋಭಾಯಾತ್ರೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸಂಸದ ಜಿ.ಎಂ ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕಣ್ವಕುಪ್ಪಿ ಗವಿಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಸುಮಾರು ಐದು ಡಿಜೆಗಳು ಮೆರುಗು ನೀಡಿದ್ದು ಡಿಜೆ ಸದ್ದಿಗೆ ಯುವಸಮೂಹ ಸಖತ್ ಸ್ಟೆಪ್ ಹಾಕಿದ್ದು ವಿಶೇಷ ವಾಗಿತ್ತು. ವಿಶೇಷವಾಗಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಡಿಜೆಗೆ ಮಹಿಳಾಮಣಿಗಳ ಡ್ಯಾನ್ಸ್ ಮೆರುಗು ತಂದಿತ್ತು. ಬೃಹತ್ ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಶುಭ ಕೋರುವ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದು ಬೃಹತ್ ಗಾತ್ರದ ಪ್ಲೆಕ್ಸ್, ಬಂಟಿಂಗ್ಸ್ ನಿಂದಾಗಿ  ಇಡೀ ದಾವಣಗೆರೆ ಅಕ್ಷರಶಃ ಕೇಸರಿಮಯವಾಗಿತ್ತು.

ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆಯಲ್ಲಿ ಅವಘಡ: ದಾವಣಗೆರೆ ಯುವಕ ಸಾವು

ಶೋಭಾಯಾತ್ರೆಯ ಕಳೆಕಟ್ಟಲು ನಾಸಿಕ್ ಡೋಲು,ಡೊಳ್ಳು, ಚಂಡೆಮದ್ದಳೆ, ನಂದಿಕೋಲು, ಸಮ್ಮಾಳ, ಗೊಂಬೆಕುಣಿತ,ಸೋಮನಕುಣಿತ, ಪೂಜಾಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ತಂದಿದ್ದವು, ನಾಡಿನಸಂಸ್ಕೃತಿ, ಸಂಪ್ರದಾಯ  ವೈಭವ ಬಿಂಬಿಸುವ ರೂಪಕ, ಮಹಾನ್ ದಾರ್ಶನಿಕರು,ಸಂತರ ಭಾವಚಿತ್ರಗಳ ಪ್ರದರ್ಶನ ನಡೆಯಿತು. 

ನಗರದ ಅಕ್ಕಮಹಾದೇವಿ ರಸ್ತೆ, ಜಯದೇವ ವೃತ್ತ,ಪಿಬಿ‌ ರಸ್ತೆ,ಹಳೇ ಬಸ್ ನಿಲ್ದಾಣ, ಅರಸು ಕ್ರಾಸ್,ಮಹಾನಗರ ಪಾಲಿಕೆ,ರಾಣಿ ಚೆನ್ನಮ್ಮ ವೃತ್ತ,ಈದ್ಗಾ ಮೈದಾನ,ಮದೀನ ಮಸೀದಿ,ಕೋರ್ಟ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿದ ನಂತರ ಶೋಭಾಯಾತ್ರೆ ಕೊನೆಗೊಂಡಿತು.ಬಳಿಕ ಬಾತಿಕೆರೆ ಪಕ್ಕದಲ್ಲಿರುವ 20 ಅಡಿಯ ಗುಂಡಿಯಲ್ಲಿ ಗಣಪತಿಯ ಮೂರ್ತಿಯ ವಿಸರ್ಜನಾ ಕಾರ್ಯ ಜರುಗಿತು. 

ಚಿತ್ರದುರ್ಗ: ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ: ಎಲ್ಲ ದಿಕ್ಕುಗಳಿಂದಲೂ ಜೈ ಶ್ರೀರಾಮ್, ಜೈಭಜರಂಗಿ ಘೊಷಣೆ!

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಇಂದು‌ ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೂ ಮದ್ಯಮಾರಾಟ ನಿಷೇಧಿಸಲಾಗಿದೆ. ನಗರದ ಎಲ್ಲಾ ವೃತ್ತಗಳಲ್ಲಿ‌ ಬಿಗಿ ಪೋಲೀಸ್ ಭದ್ರತೆ ಒದಗಿಸಲಾಗಿದೆ.ಕ್ಷಿಪ್ರ ಕಾರ್ಯಪಡೆ, ಡಿಎಆರ್ ತುಕಡಿಗಳು,ಕೆಎಸ್ ಆರ್ ಪಿ ತುಕಡಿಗಳಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.

Follow Us:
Download App:
  • android
  • ios