Asianet Suvarna News Asianet Suvarna News

ಕಾಫಿನಾಡಿನಲ್ಲಿ ಹೈ ಅಲರ್ಟ್ , ರೆಸಾರ್ಟ್ ಟ್ರಕ್ಕಿಂಗ್ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ.  ನದಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ನದಿ, ಝರಿ, ಹೋಂಸ್ಟೇ,ರೆಸಾರ್ಟ್, ಟ್ರಕ್ಕಿಂಗ್ ಸ್ಥಳಗಳಿಗೆ ಪ್ರವಾಸಿಗರು ಬಾರದಂತೆ ಪ್ರವಾಸಿಗರಿಗೆ ಸೂಚನೆ.

High alert in chikkamagaluru ban for tourists to resort trekking places gow
Author
First Published Jul 26, 2023, 9:41 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜು.26): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ.  ನದಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧಿಸಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆಯಾಗಿದ್ದು, ತಾಯಿಹಳ್ಳದಲ್ಲಿ ಕೊಚ್ಚಿಹೋಗಿದ್ದ ವೃದ್ದೆಯ ಶವ ಪತ್ತೆಯಾಗಿದೆ.

ವೃದ್ದೆಯ ಶವ ಪತ್ತೆ:
ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಗ್ರಾಮದ ಬಳಿ 62 ವರ್ಷದ ವೃದ್ದೆ ರೇವಮ್ಮ ನಿನ್ನೆ ತೋಟಕ್ಕೆ ಹೋಗುವ ವೇಳೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದ್ದು, ಅಡಿಕೆ ತೋಟದ 200 ಮೀಟರ್ದೂರದಲ್ಲಿ ಶವ ಇಂದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಮಳೆಗೆ ಒಟ್ಟು ಮೂವರು ಜೀವ ಕಳೆದುಕೊಂಡಂತಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಾಗೂ ಗಿರಿಪ್ರದೇಶದಲ್ಲಿ  ಧಾರಾಕಾರ ಮಳೆಯಾಗುತ್ತಿರುವ  ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ  ಹರಿಯುತ್ತಿದ್ದು, ಜನರು ಹಳ್ಳದಾಟುವಾಗ ಮಳೆ ಅಬ್ಬರ ಇಳಿಯುವಾಗುವವರೆಗೆ ಎಚ್ಚರವಹಿಸಬೇಕಾಗಿದೆ.

ಬೆಳೆಹಾನಿ ನೋಡುವಂತೆ ಮನವಿ, ಮಹಿಳೆಯ ಕಡೆಗೆ ತಿರುಗಿಯೂ ನೋಡದೆ ಹೋದ ಸಚಿವ ಬೋಸರಾಜ್

ಗಿರಿಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ 5 ಸ್ಥಳಗಳಲ್ಲಿ ಭೂ ಕುಸಿತ ಉಂಟಾಗಿದೆ. ಪ್ರವಾಸಿಗರನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ನಿರ್ಬಂಧವಿಧಿಸಿದ್ದು, ಬ್ಯಾರಿಕೇಡ್ಗಳನ್ನು ಅವಳಡಿಸಿದೆ. ಗಿರಿಗಳು ಮುಗಿಲು ಚುಂಬಿಸುವ ದೃಶ್ಯಗಳು ಮತ್ತು ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬಂದವರಿಗೆ ನಿರಾಸೆ ಉಂಟಾಯಿತು. ಕಾಫಿನಾಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ, ಝರಿ, ಹೋಂ ಸ್ಟೇ, ರೆಸಾರ್ಟ್, ಟ್ರಕ್ಕಿಂಗ್ ಸ್ಥಳಗಳಿಗೆ ಪ್ರವಾಸಿಗರು ಬಾರದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ. ಮಳೆಬೀಳುವುದು ಕಡಿಮೆಯಾಗುವ ತನಕ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿ ತಿಳಿಸಿದೆ.

ಘಾಟಿ ರಸ್ತೆಯಲ್ಲಿ ಬಂಡೆ ಹತ್ತಿ ಸೆಲ್ಫಿ:
ಕಾಫಿನಾಡೆಂದು ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸರಿಗೆ ಪ್ರವಾಸಿಗರೇ ತಲೆನೋವಾಗಿ ಪರಿಣಮಿಸಿದ್ದಾರೆ. ಯಾವುದನ್ನು ಖಾಕಿಪಡೆಯವರು ಮಾಡಬಾರದೆನ್ನುತ್ತಾರೋ ಅದನ್ನು ಪ್ರವಾಸಿಗರು ಮಾಡುತ್ತಿದ್ದಾರೆ. ಪೊಲೀಸರು ಕಣ್ಣು ತಪ್ಪಿಸಿ ಚಾರ್ಮಾಡಿಘಾಟಿಯಲ್ಲಿ ಅಪಾಯದ ಸ್ಥಳವಾದ ಬಂಡೆಗಲ್ಲಿನ ಮೇಲೆ ಹತ್ತಿ ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಸ್ವಲ್ಪ ಮೈಮರೆತರೆ ಉಡುಪಿ ಅಥವಾ ಮಂಗಳೂರು ಆಸ್ಪತ್ರೆ ನೋಡಬೇಕಾಗುತ್ತದೆ. ಸ್ವಲ್ಪ ಜಾರಿದರೂ ಅಪಾಯ ಕಟ್ಟಿಟ್ಟಬುತ್ತಿ. ಹುಚ್ಚಾಟ ಆಡಳು ಹೋಗಿ ಕೈಕಾಲುಕಳೆದುಕೊಂಡವರು, ಪ್ರಾಣವನ್ನೆ ಕಳೆದುಕೊಂಡುವರಿದ್ದಾರೆ. ಅಪಾಯದ ಸ್ಥಳಕ್ಕೆ ಹೋಗಬಾರದೆಂದು ಮನವಿ ಮಾಡಿದರೂ ಕೇಳುತ್ತಿಲ್ಲ.

ಚಿತ್ರದುರ್ಗ ಜನರ ಪಾಲಿಗೆ ವಿಷವಾದ ಮಲ್ಲಾಪುರ ಕೆರೆ, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಂಕಷ್ಟ

ನದಿನೀರಿನ ಹರಿವು ಹೆಚ್ಚಳ:
ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು, ನಾಡಿನ ಜೀವ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಕೆಂಪುನೀರಿನೊಂದಿಗೆ ಮೈದುಂಬಿ ಹರಿಯುತ್ತಿವೆ. ಇವುಗಳ ಸಾಗುವ ಮಾರ್ಗದ ರಸ್ತೆ ಬದಿಯಲ್ಲಿ ನಿಂತು ಪ್ರವಾಸಿಗರು ವೀಡಿಯೋಮಾಡಿ ಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಗ್ರಾಮೀಣ ಪ್ರದೇಶದಲ್ಲೂ ಹಳ್ಳಕೊಳ್ಳಗಳು ಉಕ್ಕಿಹರಿಯುತ್ತಿವೆ.

ರಸ್ತೆಗೆ ಬಿದ್ದ  ಮರ: 
ಗಿರಿಭಾಗದಲ್ಲಿ ಬುಧವಾರವೂ ಭಾರೀ ಮಳೆಯಾಗಿದೆ. ಕೈಮರ ಸಮೀಪ ದತ್ತಪೀಠದ ರಸ್ತೆಯಲ್ಲಿ ಕಾಫಿ ತೋಟದಲ್ಲಿದ್ದ ಮರವೊಂದು ಪಕ್ಕದ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ವೇಳೆ ವಾಹನವೊಂದು ಸ್ವಲ್ಪದರಲ್ಲೇ ಅನಾಹುತದಿಂದ ತಪ್ಪಿಸಿಕೊಂಡಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಗುಡ್ಡ ಕುಸಿತ, ಮಣ್ಣು ಜರಿಯುವುದು ಮುಂದುವರಿದಿರುವುದರಿಂದ ಪ್ರವಾಸಿಗರ ನಿರ್ಬಂಧವನ್ನು ಎರಡನೇ ದಿನವೂ ಮುಂದುವರಿಸಲಾಗಿದೆ. ಮರಗಳು ರಸ್ತೆಗುರುಳುವುದು ನಿರಂತರವಾಗಿ ಸಂಭವಿಸುತ್ತಿರುವುದರಿಂದ ಜಿಲ್ಲಾಡಳಿತ ಕೈಮರ ಚೆಕ್ಪೋಸ್ಟ್ ಮತ್ತು ದತ್ತಪೀಠದ ರಸ್ತೆಗಳಲ್ಲಿ ಮಳೆಗಾಲ ಮುಗಿಯುವವರೆಗೆ ಜೆಸಿಬಿಗಳು ಮತ್ತು ಮರ ಕತ್ತರಿಸುವ ಯಂತ್ರಗಳು ಮತ್ತು ಸಿಬ್ಬಂದಿಗಳನ್ನು ಸದಾ ಸನ್ನದ್ಧವಾಗಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios