ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದ್ವಿಚಕ್ರವಾಹನದಲ್ಲಿ ತಾಯಿಯೊಂದಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಅಡ್ಡಗಟ್ಟಿದ ಸಂಚಾರಿ ಪೊಲೀಸರು 500 ರೂ ದಂಡ ವಿಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 

 ಮಂಡ್ಯ (ನ.3): ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದ್ವಿಚಕ್ರವಾಹನದಲ್ಲಿ ತಾಯಿಯೊಂದಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಅಡ್ಡಗಟ್ಟಿದ ಸಂಚಾರಿ ಪೊಲೀಸರು 500 ರೂ ದಂಡ ವಿಧಿಸಿದ್ದಾರೆ. ಹಣವಿಲ್ಲವೆಂದರೂ ಬಿಡದೆ ರಸ್ತೆಯಲ್ಲೇ ತಾಯಿ-ಮಗುವನ್ನು ಕೂರಿಸಿ ಆತ ಯಾರಿಂದಲೂ ಫೋನ್ ಪೇ ಮಾಡಿಸಿಕೊಂಡು ತಂದು ಹಣ ಕಟ್ಟಿದ ಬಳಿಕ ಬಿಟ್ಟು ಕಳುಹಿಸಿರುವ ಅಮಾನವೀಯ ಪ್ರಸಂಗ ನಗರದ ಮಹಾವೀರ ವೃತ್ತದಲ್ಲಿ ಗುರುವಾರ ನಡೆಯಿತು. ಕೆ.ಆರ್.ಪೇಟೆ ತಾಲೂಕಿನ ಯಗಚಗುಪ್ಪೆ ಗ್ರಾಮದ ಅಭಿಷೇಕ್ ಎಂಬಾತ ದ್ವಿಚಕ್ರವಾಹನದಲ್ಲಿ ತಾಯಿ-ಮಗುವನ್ನು ಕೂರಿಸಿಕೊಂಡು ಜಿಲ್ಲಾ ಆಸ್ಪತ್ರೆಯ ಕಡೆ ತೆರಳುತ್ತಿದ್ದನು. ಆತ ಹೆಲ್ಮೆಟ್ ಧರಿಸದಿರುವುದನ್ನು ಕಂಡ ಸಂಚಾರಿ ಪೊಲೀಸರು ಮಹಾವೀರ ವೃತ್ತದ ಬಳಿ ತಡೆದು ನಿಲ್ಲಿಸಿದರೂ ಹೆಲ್ಮೆಟ್ ಧರಿಸದ ಕಾರಣಕ್ಕೆ 500 ರೂ ದಂಡ ವಿಧಿಸಿ ಚೀಟಿಯನ್ನು ಆತನ ಕೈಗೆ ಕೊಟ್ಟರೂ ಮಗುವನ್ನು ಆಸ್ಪತ್ರೆಗೆ ತೋರಿಸಬೇಕು. ನನ್ನ ಬಳಿ ಹಣವಿಲ್ಲ ಎಂದರೂ ಪೊಲೀಸರು ಕೇಳಲಿಲ್ಲ. ಹಣ ಕಟ್ಟಿ ಕರೆದುಕೊಂಡು ಹೋಗು ಎಂದರೂ ಆಗ ವಿಧಿಯಿಲ್ಲದೆ ತಾಯಿ-ಮಗು ನಡು ರಸ್ತೆಯಲ್ಲೇ ಕೂರುವಂತಾಯಿತು. ಅಭಿಷೇಕ್ ಕೂಡಲೇ ತನ್ನ ಕುಟುಂಬದವರಿಗೆ ಕರೆ ಮಾಡಿ 500 ರೂ ಹಣವನ್ನು ಫೋನ್-ಪೇ ಮಾಡಿಸಿಕೊಂಡು ಅದನ್ನು ಎಟಿಎಂನಲ್ಲಿ ಡ್ರಾ ಮಾಡಿಕೊಂಡು ಬಂದು ಕಟ್ಟಿದ ಬಳಿಕ ತಾಯಿ-ಮಗುವನ್ನು ಆತನೊಂದಿಗೆ ಕಳುಹಿಸಿಕೊಟ್ಟರು.

Add Asianetnews Kannada as a Preferred SourcegooglePreferred

ಘಟನೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಂಡ್ಯದಲ್ಲಿ ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ್ದು ಖಂಡನೀಯ. ಮಾನವೀಯತೆಯನ್ನೇ ಅಣಕಿಸುವ ಇಂಥ ಘಟನೆಗಳು ರಾಜ್ಯದಲ್ಲಿ ಪದೇಪದೆ ಘಟಿಸುತ್ತಿರುವುದು ಆಘಾತಕಾರಿ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಆಸ್ಪತ್ರೆಗೆ ಬೈಕ್‌ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ ಘಟನೆಯ ಘಟನೆಯ ವಿಡಿಯೋ ತುಣುಕುಗಳನ್ನು ನೋಡಿ ನನಗೆ ಬಹಳ ಸಂಕಟವಾಯಿತು.

ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯ. "ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ" ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ದಂಡದ ಮಾತು ಹೇಳುತ್ತಲೇ ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇಲಾಖೆಯೇ ತಲೆ ತಗ್ಗಿಸುವಂತದ್ದು. 

Scroll to load tweet…

ಹಣವಿಲ್ಲದೇ ದಂಪತಿ ರಸ್ತೆಯಲ್ಲೇ ಪರದಾಡಿದ್ದಾರೆ. ಆ ಮಗುವಿನ ತಂದೆ ಹಣಕ್ಕಾಗಿ ಒದ್ದಾಡಿದ್ದಾರೆ, ಆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ರಸ್ತೆ ನಡುವೆಯೇ ಮಡಿಲಲ್ಲಿಟ್ಟುಕೊಂಡು ಅನುಭವಿಸಿದ ವೇದನೆ ಬಿಜೆಪಿ ಸರಕಾರದ ಕೆಟ್ಟ ಆಡಳಿತಕ್ಕೆ ಹಿಡಿದ ಕನ್ನಡಿ, ಮನುಷ್ಯತ್ವ ಸತ್ತ ಸರಕಾರದ ಇನ್ನೊಂದು ಕರಾಳಮುಖ ಎನ್ನದೇ ವಿಧಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ಯೋನ್ಯವಾಗಿ ಬದುಕಿ ಸಾವಿನಲ್ಲೂ ಒಂದಾದ ದಂಪತಿ

ಆ ಮಗುವಿನ ತಂದೆ ಕೊನೆಗೂ ಗೆಳೆಯರೊಬ್ಬರಿಂದ ಹಣ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ದಂಡ ಕಟ್ಟಿದ ಮೇಲೆ ಪೊಲೀಸರು ಬೈಕ್ ಬಿಟ್ಟು ಕಳಿಸಿದ್ದಾರೆ. ಬದಲಿಗೆ ದಂಡದ ರಸೀತಿ ಕೊಟ್ಟು, ಆ ನಂತರ ದಂಡ ಕಟ್ಟಿ ಎಂದು ಪೊಲೀಸರು ಹೇಳಬಹುದಿತ್ತು. ಹಾಗೆ ಮಾಡದೇ ದಂಡಪ್ರಯೋಗದ ಹೆಸರಿನಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆ. ಕೂಡಲೇ ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ವಹಿಸಬೇಕು ಹಾಗೂ ಇಂಥ ಮನಃಸ್ಥಿತಿಯ ಪೊಲೀಸ್ ಸಿಬ್ಬಂದಿಯ ಮನಃಪರಿವರ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ, ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಕಾರ್ಮಿಕಳಾಗಿ ಬಂದು ಹುಣಸೆ ಹಣ್ಣಿನ ಆಸೆಗೆ ವಿವಾಹಿತೆ ಬಲಿ!

ಅಲ್ಲದೆ ಗೃಹ ಸಚಿವರು ಈ ಬಗ್ಗೆ ಜನರಿಗೆ ಉತ್ತರ ನೀಡಬೇಕಲ್ಲದೆ, ನೊಂದ ದಂಪತಿಗೆ ಸಾಂತ್ವನ ಹೇಳಲೇಬೇಕು. ಇಂಥ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.