Heavy Rain Bidar: ರಸ್ತೆಗಳು ಅಧೋಗತಿ, ಜನ ಜೀವನ ಅಸ್ತವ್ಯಸ್ತ
- ಕಾರಂಜಾ ಜಲಾಶಯ ಬಹುತೇಕ ಭರ್ತಿ, ನದಿಗೆ ಅಪಾರ ನೀರು
- ಜಿಲ್ಲೆಯ ವಿವಿಧೆಡೆಯಲ್ಲಿ ಮನೆಗಳ ಹೊಕ್ಕ ಮಳೆ ನೀರು
- ಬೆಳೆಗಳು ಜಲಾವೃತ, ಮನೆ ಗೋಡೆಗಳ ಕುಸಿತ ಆತಂಕದಲ್ಲಿ ಜನ
ಬೀದರ್ (ಸೆ.11) : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲವೂ ಹೊಂಡಗಳಾಗಿ ಪರಿಣಮಿಸಿದ್ದರೆ, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ಹೊಕ್ಕು ಜನ ಜೀವನ ಅಸ್ತವ್ಯಸ್ತವಾಗಿದ್ದು ಸಂಚಾರ ವ್ಯವಸ್ಥೆಯಂತೂ ಅಧೋಗತಿ ಹಿಡಿದಿದೆ. ಜಿಲ್ಲೆಯಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ವಾಡಿಕೆಯಂತೆ 5.1 ಮಿ.ಮೀ. ಮಳೆ ಆಗಬೇಕಿದ್ದದ್ದು ಶನಿವಾರ 25.9 ಮಿ.ಮೀ. ಮಳೆಯಾಗಿದೆ. ಹಳ್ಳ ಕೊಳ್ಳಗಳು ಬಹುತೇಕ ತುಂಬಿ ಹರಿಯುತ್ತಿವೆ.
ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ಸ್ವಚ್ಛತೆ: Big 3ಗೆ ಬೀದರ್ ಜನರ ಅಭಿನಂದನೆ
ಜಿಲ್ಲೆಯ ಜೀವ ಜಲವಾಗಿರುವ ಕಾರಂಜಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, 7.691 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಶನಿವಾರದ ವೇಳೆಗೆ 3252 ಕ್ಯುಸೆಕ್ ನೀರಿನ ಒಳ ಹರಿವಿನಿಂದಾಗಿ 7.173 ಟಿಎಂಸಿ ನೀರು ಸಂಗ್ರಹವಾಗಿದೆ. ಅಷ್ಟಕ್ಕೂ ಜೂ.1ರಿಂದ ಕಾರಂಜಾ ಜಲಾಶಯಕ್ಕೆ 2.95 ಟಿಎಂಸಿ ನೀರು ಸಂಗ್ರಹವಾಗಿದ್ದು, ಜೂ.1ರಿಂದ ಒಟ್ಟಾರೆಯಾಗಿ 0.39 ಟಿಎಂಸಿ ನೀರನ್ನು ಕಾಲುವೆಗಳಿಗೆ ಮತ್ತು 0.54 ಟಿಎಂಸಿಯಷ್ಟುನೀರನ್ನು ನದಿಗೆ ಹರಿ ಬಿಡಲಾಗಿದೆ.
ಇದೀಗ ಕಾರಂಜಾ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿ ಬಲದಂಡೆ ಕಾಲುವೆಯಿಂದ 40 ಕ್ಯುಸೆಕ್ ಎಡದಂಡೆ ಕಾಲುವೆಯಿಂದ 5 ಕ್ಯುಸೆಕ್ ಹಾಗೂ ಮಾಂಜ್ರಾ ನದಿಗೆ 2999 ಕ್ಯುಸೆಕ್ ಸೇರಿದಂತೆ ಒಟ್ಟು 3044 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು ಇಲ್ಲಿಯವರೆಗೆ ಕಾರಂಜಾ ಕಾಲುವೆ ಶೇ. 93.3 ರಷ್ಟುಭರ್ತಿಯಾಗಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದು ಮನೆಗಳ ಕುಸಿತಕ್ಕೂ ಕಾರಣವಾಗುತ್ತಿದೆ ಈ ಮಳೆ. ಕಟ್ಟಿತೂಗಾಂವನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಸುತ್ತಲೂ ನೀರು ನಿಂತು ಜಲಬಂಧಿಯಾದಂತಿದೆ. ಬೀದರ್ ನಗರದಲ್ಲಂತೂ ಹಲವಾರು ಭಾಗಗಳಲ್ಲಿ ನೀರು ಮನೆಯನ್ನು ಹೊಕ್ಕಿದ್ದಲ್ಲದೆ ಜನ ಜೀವನ ಮತ್ತು ಸಂಚಾರಕ್ಕೆ ಅಡತಡೆ ಉಂಟು ಮಾಡಿದೆ. ಇನ್ನು ಮುಂಗಾರು ಬೆಳೆಯನ್ನು ಬಿತ್ತಿರುವ ರೈತರ ಸ್ಥಿತಿಯಂತೂ ಹೇಳತೀರದು. ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆಗಳೆಲ್ಲ ಕೊಳೆತು ಹೋಗುವ ಸ್ಥಿತಿಗೆ ತಲುಪಿವೆ. ಇದಕ್ಕೂ ಮುನ್ನ ಶಂಖದ ಹುಳುವಿನ ಕಾಟ, ಅತಿವೃಷ್ಟಿಯ ಸಂಕಷ್ಟದಿಂದ ನರಳಿದ್ದ ರೈತನಿಗೆ ಈ ಬಾರಿಯ ಬೆಳೆ ರೈತನ ಕೈಹಿಡಿಯೋದು ಕಷ್ಟವೇ ಸರಿ. ಕ್ರೈಂ ಸಿನಿಮಾ, ವೆಬ್ ಸೀರೀಸ್ಗಳಿಂದ ಪ್ರೇರಣೆ: ಮಾಜಿ ಗೆಳತಿಯ ಪತಿಯನ್ನು ಕೊಂದವ ಬೀದರ್ನಲ್ಲಿ ಅರೆಸ್ಟ್