Asianet Suvarna News Asianet Suvarna News

ದಕ್ಷಿಣದಲ್ಲಿ ಭಾರೀ ಮಳೆ; ಯಲಬುರ್ಗಾದಲ್ಲಿ ಬರಗಾಲದ ಕಾರ್ಮೋಡ!

ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೇ ಮುಂಗಾರು ಮಳೆ ಕೈಕೊಟ್ಟಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಇದು ಜಾನುವಾರುಗಳಿಗೂ ವ್ಯಾಪಿಸಿದೆ.

heavy rain in the south Drought in Yalaburga at koppal district rav
Author
First Published Jul 6, 2023, 5:25 AM IST

ಶಿವಮೂರ್ತಿ ಇಟಗಿ

 ಯಲಬುರ್ಗಾ (ಜು.6) : ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೇ ಮುಂಗಾರು ಮಳೆ ಕೈಕೊಟ್ಟಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಇದು ಜಾನುವಾರುಗಳಿಗೂ ವ್ಯಾಪಿಸಿದೆ.

ತಾಲೂಕಿನಲ್ಲಿ ಮುಂಗಾರು ದುರ್ಬಲವಾಗಿದೆ. ಒಣ ಹವೆ ಮುಂದುವರೆದಿದ್ದು, ಶೇ.25ರಷ್ಟುಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಬಾಡಲಾರಂಭಿಸಿವೆ.ತಾಲೂಕಿನ ಜನತೆ ಕೆರೆಗಳ ನೀರನ್ನು ಕುಡಿಯಲು ಅವಲಂಬಿಸಿದ್ದು, ಮಳೆಯಿಲ್ಲದೆ ಕೆರೆಗಳಲ್ಲಿರುವ ನೀರು ಬತ್ತಿ ಹೋಗಿವೆ. ಇದರಿಂದ ಕುಡಿವ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಬರಗಾಲದ ಕರಾಳ ಛಾಯೆ ಮುಂದುವರೆದಿದೆ. ಹೀಗಾಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕೆಂದು ರೈತರ ಒತ್ತಾಸೆಯಾಗಿದೆ.

ಜಾನುವಾರಗಳ ಗೋಳು ಕೇಳೋರಿಲ್ಲ:

ಜಾನುವಾರುಗಳಿಗೆ ಮೇವಿನ ಕೊರತೆಯಿಂದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಬೇರೆಡೆಯಿಂದ ದುಬಾರಿ ಬೆಲೆಗೆ ಮೇವು ಖರೀದಿಸಿ ಸಂಗ್ರಹಣೆ ಮಾಡುವ ಚಿಂತೆಯಲಿದ್ದರೆæ ಇನ್ನೂ ಕೆಲ ರೈತರು ಹಣಕಾಸಿನ ತೊಂದರೆಯಿಂದ ಮೇವು ಕೊಳ್ಳುವ ಶಕ್ತಿ ಇಲ್ಲದೆ ಕಸಾಯಿಖಾನೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದೋದಗಿದೆ.

 

Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ

ಶೇ.25ರಷ್ಟುಬಿತ್ತನೆ:

ಯಲಬುರ್ಗಾ ತಾಲೂಕಿನಾದ್ಯಂತ ಮುಂಗಾರು ಹಂಗಾಮಿಗೆ ಬೇಕಾಗಿದ್ದ ಮಳೆ ಪ್ರಮಾಣ 165.7 ಎಂಎಂ.86.3 ಎಂಎಂ ಮಳೆ ಆಗಿದೆ, ಹೀಗಾಗಿ ಕೇವಲ ಶೇ.25% ಬಿತ್ತನೆಯಾಗಿದೆ. ಹೆಸರು ಬಿತ್ತನೆ 5975 ಹೆಕ್ಟರ್‌ ಗುರಿಯಿದ್ದು, 2358 ಬಿತ್ತನೆಯಾಗಿದೆ. ಸಜ್ಜಿ 13495 ಗುರಿಯಿದ್ದು 2050 ಬಿತ್ತನೆಯಾಗಿದೆ. ತೊಗರಿ 3054 ಪೈಕಿ 421 ಬಿತ್ತನೆ. ಅಲಸಂದಿ 63 ಹೆಕ್ಟರ್‌ ಗುರಿಯಿತ್ತು 467 ಹೆಕ್ಟರ್‌ಷ್ಟುಹೆಚ್ಚು ಬಿತ್ತನೆಯಾಗಿದೆ. ಮೆಕ್ಕೆಜೋಳ 17431ಹೆಕ್ಟರ್‌ ಗುರಿಯಿದ್ದು 3805ರಷ್ಟುಬಿತ್ತನೆಯಾಗಿದೆ. ಒಟ್ಟು 45945 ಹೆಕ್ಟರ್‌ ಆಗಬೇಕಿತ್ತು ಆದರೆ ಎಲ್ಲ ಬೆಳೆ ಬಿತ್ತನೆ ಸೇರಿ 9307 ಬಿತ್ತನೆಯಾಗಿದೆ. ಸೋಮವಾರ ಸಂಜೆ ಸುರಿದ ಅಲ್ಪ-ಸ್ವಲ್ಪ ಮಳೆಯಿಂದ ಕೊಂಚ ತಂಪಾದ ವಾತಾವರಣ ಕಂಡು ಬರುತ್ತಿದೆ.ಆದರೆ ಬಿತ್ತಿದ ಬೆಳೆ ಒಣಗಿ ಹೋಗಿವೆ.

ಮೇವಿನ ಬೆಲೆ ದುಬಾರಿ:

ಒಂದು ಟ್ರ್ಯಾಕ್ಟರ ಮೇವಿಗೆ . 5000 ಸಾವಿರದವರೆಗೆ ಬೆಲೆ ಇದ್ದು, ಇದು .15 ಸಾವಿರ ದಾಟಿದರೂ ಆಶ್ಚರ್ಯವಿಲ್ಲ. ಇದರಿಂದ ರೈತರು ಬೇಸತ್ತು ಜಾನುವಾರುಗಳನ್ನು ಮಾರಾಟ ಮಾಡುವ ಮೂಲಕ ಕೃಷಿ ಚಟುವಟಿಕೆಯಿಂದಲೇ ದೂರ ಸರಿಯುವ ಹಂತಕ್ಕೆ ಬಂದಿದ್ದಾರೆ. ಎಷ್ಟೋ ರೈತರು ತಮ್ಮ ಜಾನುವಾರುಗಳನ್ನು ಸಾಕಲು ಆಗದೆ ಮಾರಾಟ ಮಾಡುವೊಂದೆ ದಾರಿ ಎನ್ನುವಂತಾಗಿದೆ.

ಬರಗಾಲ ಪೀಡಿತ ತಾಲೂಕು ಘೋಷಿಸಿ:

ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕಿದೆ. ಮಳೆಯಿಲ್ಲ, ಬೆಳೆಯಿಲ್ಲ, ಜನ ಉದ್ಯೋಗ ಅರಿಸಿ ಗುಳೆ ಹೋಗದಂತೆ ಸರ್ಕಾರ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಭರವಸೆ ಯೋಜನೆಗಳ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಇನ್ನೂ ರೈತರ ಜಾನುವಾರುಗಳಿಗೆ ಗೋಶಾಲೆ ತೆರೆದಾಗ ಮಾತ್ರ ಅವುಗಳು ಬದುಕುಳಿಯಲು ಸಾಧ್ಯವಾಗುತ್ತವೆ.

 

ಎಲ್ಲಿ ನೋಡಿದರಲ್ಲಿ ಬಿತ್ತನೆಯಾಗದೆ ಖಾಲಿ ಖಾಲಿ ಹೊಲಗಳು ಬರಗಾಲದ ಮುನ್ಸೂಚನೆ?

ಯಲಬುರ್ಗಾ ತಾಲೂಕು ಯಾವುದೇ ನೀರಾವರಿ ಯೋಜನೆಯಿಲ್ಲದೆ ಮಳೆ ಆಧಾರಿತ ಪ್ರದೇಶವಾಗಿದ್ದು, ಈ ಬಾರಿ ಮುಂಗಾರು ಮಳೆ 165.7 ಎಂಎಂ ಪ್ರಮಾಣ ಬೇಕಾಗಿತ್ತು. ಆದರೆ ಮಳೆ 86.3 ಎಂಎಂ ಪ್ರಮಾಣಯಾಗಿದೆ. ಪ್ರತಿ ವರ್ಷ ಮುಂಗಾರು ಬಿತ್ತನೆ ಅಧಿಕವಾಗುತ್ತಿತ್ತು. ಈ ಬಾರಿ ಕೇವಲ ಶೇ. 25% ರಷ್ಟುಬಿತ್ತನೆಯಾಗಿದ್ದು ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆಗಳು ಬಾಡಲಾರಂಭಿಸಿವೆ.

ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕರು ಯಲಬುರ್ಗಾ

ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ, ರೈತರಿಗೆ ಸಮರ್ಪಕವಾದ ಬೆಳೆವಿಮೆ ನೀಡುತ್ತಿಲ್ಲ, ಬರಗಾಲ ಕಾಮಗಾರಿ ಆರಂಭಗೊಂಡಿಲ್ಲ,ಜಾನುವಾರುಗಳಿಗೆ ಗೋಶಾಲೆ ತೆರೆದಿಲ್ಲ ಇಂತಹ ಸರ್ಕಾರಗಳು ಎಂದೂ ರೈತರ ಹಿತ ಬಯಸುತ್ತಿಲ್ಲ ರೈತರ ಪಾಲಿಗೆ ಸರ್ಕಾರ ಇದ್ದರು ಅಷ್ಟೇ,ಸತ್ತರೂ ಅಷ್ಟೇ.

ವೀರನಗೌಡ ಬನ್ನಪ್ಪಗೌಡ್ರ ರೈತ ಮುಖಂಡರು.

Follow Us:
Download App:
  • android
  • ios