ವರುಣನ ಅಬ್ಬರ: ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ವರ್ಷಧಾರೆ|ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲ್ಪರುಕ, ಕಲಬುರಗಿ, ಸೇಡಂ, ಚಿತ್ತಾಪುರ, ಕಾಳಗಿ, ಶಹಾಬಾದ್‌, ಯಡ್ರಾಮಿ ತಾಲೂಕುಗಳ ವ್ಯಾಪ್ತಿಯಲ್ಲಿಯೂ ಮಂಗಳವಾರ ರಾತ್ರಿಯಿಂದ ಉತ್ತಮ ಮಳೆ|

ಕಲಬುರಗಿ(ಜು.16):  ಕಳೆದ ಕೆಲದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಪ್ರಬಲವಾಗಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

Add Asianetnews Kannada as a Preferred SourcegooglePreferred

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಬಾರೀ ಮಳೆ ಸುರಿದಿದ್ದು, ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿರುವ ಘಟನೆ ತಾಲೂಕಿನ ಪಲಗಾಪೂರ ಗ್ರಾಮದ ಬಳಿ ನಡೆದಿದೆ. ಯಾದಗಿರಿ ನಗರ ಪ್ರದೇಶಗಳಲ್ಲಿ ತೆಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಮುಷ್ಟೂರು ಬಳಿಯ ಚಾರ್‌ಕಮಾನ್‌ ಬಳಿ ಕಾರೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ತಕ್ಷಣವೇ ಚಾಲಕ ಪ್ರಾಣ ರಕ್ಷಿಸಿಕೊಂಡಿದ್ದು, ಪ್ರವಾಹ ಕಡಿಮೆಯಾದ ಬಳಿಕ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಹೊಲಗದ್ದೆಗಳಲ್ಲಿ ನೀರು ತುಂಬಿ, ಹತ್ತಿ,ಭತ್ತ, ಹೆಸರು ಬೆಳೆಗಳು ನೀರುಪಾಲಾಗಿವೆ.

ಕಲಬುರಗಿ: ಮಹಿಳಾ ಕಂಡಕ್ಟರ್‌ ಮೇಲೆ ಪ್ರಯಾಣಿಕರಿಂದ ಹಲ್ಲೆ

ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲ್ಪರುಕ, ಕಲಬುರಗಿ, ಸೇಡಂ, ಚಿತ್ತಾಪುರ, ಕಾಳಗಿ, ಶಹಾಬಾದ್‌, ಯಡ್ರಾಮಿ ತಾಲೂಕುಗಳ ವ್ಯಾಪ್ತಿಯಲ್ಲಿಯೂ ಮಂಗಳವಾರ ರಾತ್ರಿಯಿಂದ ಉತ್ತಮ ಮಳೆ ಸುರಿಯುತ್ತಿದ್ದು ನೀಲಕೋಡ್‌ ಗ್ರಾಮದಲ್ಲಿ 131 ಮಿ.ಮೀ.ಮಳೆಯಾಗಿದೆ. ಹುಮನಾಬಾದ್‌, ಬಸವಕಲ್ಯಾಣ ಸೇರಿದಂತೆ ಬೀದರ್‌ ಜಿಲ್ಲೆ ವಿವಿಧæಡೆ ಬುಧವಾರ ಬೆಳಗಿನಿಂದ ಉತ್ತಮ ಮಳೆಯಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಳ್ಳಾರಿ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆಯಾಗಿದೆ.

ಗದಗ ಜಿಲ್ಲೆಯ ನರಗುಂದ, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಕೆಲ ಹೊತ್ತು ಉತ್ತಮ ಮಳೆಯಾಗಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ.