ಬೆಂಗಳೂರಲ್ಲಿ ಮುಂದುವರೆದ ಮಳೆಯಬ್ಬರ: ಸಾರ್ವಜನಿಕರ ಪರದಾಟ
ಮುಂಜಾನೆಯಿಂದ ಮೋಡ ಮುಸುಕಿದ ವಾತಾವರಣ| ಸಂಜೆ ಬಳಿಕ ಹಲವೆಡೆ ಬಿರುಸಿನ ಮಳೆ| ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ, ಆಗಾಗ ಮಳೆ ಸುರಿಯಲಿದೆ|
ಬೆಂಗಳೂರು(ಅ.23): ನಗರದಲ್ಲಿ ವರುಣ ಆರ್ಭಟ ಮುಂದುವರೆದಿದ್ದು, ಗುರುವಾರ ಸುರಿದ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ. ಮುಂಜಾನೆಯಿಂದಲೇ ನಗರದಲ್ಲಿ ಮಂಜು ಹಾಗೂ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕೆಲವೆಡೆ, ಸಂಜೆಯ ನಂತರ ಅನೇಕ ಪ್ರದೇಶಗಳಲ್ಲಿ ಮಳೆ ಸುರಿಯಿತು. ಇದರಿಂದಾಗಿ ನಗರದಲ್ಲಿ ಚಳಿ ಹೆಚ್ಚಾಗಿತ್ತು.
ಸಂಜೆ 6ರ ಸುಮಾರಿಗೆ ಸಣ್ಣದಾಗಿ ಆರಂಭವಾದ ಮಳೆ ಬಳಿಕ ತುಸು ಜೋರಾಯಿತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ, ಮರ, ಅಂಗಡಿ-ಮುಂಗಟ್ಟುಗಳನ್ನು ಆಶ್ರಯಿಸಿದರು.
ಶಿವಾನಂದ ವೃತ್ತ, ಓಕಳಿಪುರ, ಹೆಬ್ಬಾಳ, ಕಾವೇರಿ ಜಂಕ್ಷನ್ ಸೇರಿದಂತೆ ಕೆಳ ಸೇತುವೆಗಳಲ್ಲಿ ನೀರು ನಿಂತ ಪರಿಣಾಮ ಸವಾರರು ರಸ್ತೆ ದಾಟಲು ಪಡಿಪಾಟಲು ಪಟ್ಟರು. ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಮೈಸೂರು ರಸ್ತೆ, ಮೆಜೆಸ್ಟಿಕ್, ಶೇಷಾದ್ರಿಪುರ, ಕಾಟನ್ಪೇಟೆ, ಸಂಪಂಗಿ ರಾಮನಗರ, ನಾಗರಬಾವಿ, ಹೆಬ್ಬಾಳ, ವಿಜಯನಗರ, ಮಲ್ಲೇಶ್ವರ, ರಾಜಾಜಿನರ, ಕೋರಮಂಗಲ, ಮಾರುತಿ ಮಂದಿರ, ವಿದ್ಯಾಪೀಠ, ಬಸವನಗುಡಿ, ಆರ್.ಆರ್.ನಗರ, ಕೆಂಗೇರಿ ಸೇರಿದಂತೆ ಹಲವೆಡೆ ಮಳೆ ಜೋರಾಗಿ ಸುರಿಯಿತು.
ವಾಯುಬಾರ ಕುಸಿತ, ಕರ್ನಾಟಕದಲ್ಲಿ ಮತ್ತೆ ಮಳೆ: ಎಚ್ಚರ...ಎಚ್ಚರ...!
ಇನ್ನೂ ಮೂರ್ನಾಲ್ಕು ದಿನ ಮಳೆ:
ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಆಗಾಗ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಸೂರು ರಸ್ತೆಯಲ್ಲಿ 3 ಸೆಂ.ಮೀ ಮಳೆ:
ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಬಳಿ 30.5 ಹಾಗೂ ಬೆಟ್ಟಹಲಸೂರಿನಲ್ಲಿ 30.5 ಮಿ.ಮೀ, ನಾಗರಬಾವಿಯಲ್ಲಿ 30, ಹೆಸರಘಟ್ಟದಲ್ಲಿ 28.50, ಮಾರುತಿ ಮಂದಿರದಲ್ಲಿ 28, ಉತ್ತನಹಳ್ಳಿಯಲ್ಲಿ 27, ಹಂಪಿನಗರದಲ್ಲಿ 26.5, ಸೊನ್ನಪ್ಪನಹಳ್ಳಿಯಲ್ಲಿ 26, ಆರ್.ಆರ್.ನಗರದಲ್ಲಿ 24.5, ಜ್ಞಾನಭಾರತಿ ಕ್ಯಾಂಪಸ್ನಲ್ಲಿ 23.5, ಕಾಡುಗೋಡಿಯಲ್ಲಿ 23.5, ವಿ.ವಿಪುರಂನಲ್ಲಿ 20.5, ಯಲಹಂಕ ಚೌಡೇಶ್ವರಿ ವಾರ್ಡ್ನಲ್ಲಿ 20, ವಿದ್ಯಾಪೀಠದಲ್ಲಿ 22, ಅಟ್ಟೂರಲ್ಲಿ 21, ಯಲಹಂಕದಲ್ಲಿ 19, ಜಕ್ಕೂರಲಲಿ 19, ಬಿಟಿಎಂ ಲೇಔಟ್ನಲ್ಲಿ 19.5, ಲಾಲ್ಬಾಗ್ನಲ್ಲಿ 18.5, ಸೀಗೆಹಳ್ಳಿಯಲ್ಲಿ 18.5, ಪಟ್ಟಾಭಿರಾಮನಗರದಲ್ಲಿ 18.5, ದೊಮ್ಮಲೂರು ಹಾಗೂ ಹೊಯ್ಸಳನಗರದಲ್ಲಿ 17, ಕೋರಮಂಗಲದಲ್ಲಿ 15, ಎಚ್ಎಸ್ಆರ್ ಲೇಔಟ್ನಲ್ಲಿ 15 ಮಿ.ಮೀ.ಮಳೆಯಾಗಿದೆ.
ದೊಡ್ಡಜಾಲ, ಚಿಕ್ಕಜಾಲ, ಹೂಡಿ, ಗರುಡಾಚಾರ್ಪಾಳ್ಯ, ಬಸವನಗುಡಿ, ಚಾಮರಾಜಪೇಟೆ, ಸಾರಕ್ಕಿ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ 10 ಮಿಲಿ ಮೀಟರ್ಗೂ ಅಧಿಕ ಮಳೆ ಸುರಿದಿದೆ.