ಬೆಂಗಳೂರಿನಲ್ಲಿ ಅಕಸ್ಮಿಕವಾಗಿ ಸುರಿದ ಮಳೆಯು ಜನರಿಗೆ ತಂಪು ನೀಡಿದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರು, ಚೆನ್ನೈ ಮತ್ತು ಮುಂಬೈನಿಂದ ಬಂದ ನಾಲ್ಕು ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ತಮ್ಮ ಮೂಲ ನಗರಗಳಿಗೆ ಹಿಂತಿರುಗಿವೆ.
ಬೆಂಗಳೂರು: ನಗರದಲ್ಲಿ ಅಕಸ್ಮಿಕವಾಗಿ ಸುರಿದ ಮಳೆಯು ಜನರಿಗೆ ತಂಪು ತಂದಿದ್ದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ವಿಮಾನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ. ಮಳೆ ಹಾಗೂ ವಾತಾವರಣ ದುರ್ಬಲ ಹಿನ್ನೆಲೆಯಲ್ಲಿ ರನ್ವೇ ಮೇಲೆ ಲ್ಯಾಂಡ್ ಆಗಬೇಕಿದ್ದ ನಾಲ್ಕು ವಿಮಾನಗಳನ್ನು ಮತ್ತೆ ಬಂದಲ್ಲಿಗೆ ಅವುಗಳನ್ನು ಹಿಂತಿರುಗಿಸಲಾಗಿದೆ.
ಮಂಗಳೂರುನಿಂದ ಬಂದ ಒಂದು ವಿಮಾನ, ಚೆನ್ನೈಯಿಂದ ಬಂದ ಎರಡು ವಿಮಾನಗಳು ಹಾಗೂ ಮುಂಬೈಯಿಂದ ಬಂದ ಒಂದು ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೆ ಮತ್ತೆ ತಮ್ಮ ತಮ್ಮ ನಗರಗಳಿಗೆ ವಾಪಸ್ ಹೋಗಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಶೇಷವಾಗಿ ಮಂಗಳೂರಿನಿಂದ 4.30ಕ್ಕೆ ಹೊರಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸುತ್ತಿದ್ದ ವಿಮಾನವೂ ಲ್ಯಾಂಡ್ ಆಗಲು ಸಾಧ್ಯವಾಗದೆ ಹಿಂತಿರುಗಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಜನರಿಗೆ ಮಳೆಯ ಸಿಂಚನ
ಇತ್ತ, ಹಲವು ದಿನಗಳಿಂದ ನಗರವನ್ನು ಕಾಡುತ್ತಿದ್ದ ಉಷ್ಣತೆಯಿಂದ ಬಳಲುತ್ತಿದ್ದ ಬೆಂಗಳೂರಿನ ಜನರಿಗೆ ಮಳೆಯ ಸಿಂಚನ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಮಲ್ಲೇಶ್ವರಂ, ಗಾಂಧಿನಗರ, ವಿಧಾನಸೌಧ, ಮೆಜೆಸ್ಟಿಕ್, ಯಶವಂತಪುರ, ವಸಂತನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯೂ ಸುರಿದಿದ್ದು, ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿಯೂ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆ ಕಾರಣದಿಂದ ತಾಪಮಾನದಲ್ಲಿ ಇಳಿಕೆ ಕಂಡುಬಂದಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರಿಗೆ ಇದು ತಂಪಿನ ಅನುಭವ ನೀಡಿದೆ. ಆದರೆ, ಇದೇ ವೇಳೆ ವಿಮಾನ ಸಂಚಾರ ಸೇರಿದಂತೆ ನಗರ ಮೂಲಸೌಕರ್ಯಗಳ ಮೇಲೆ ಮಳೆಯ ಪರಿಣಾಮ ಹೇಗೆ ಬೀಳಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ. ಮಳೆ ನಗರಕ್ಕೆ ತಂಪು ತಂದಿದ್ದರೂ, ವಿಮಾನ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


