'ನಾನು ರಾಜಕೀಯಕ್ಕೆ ಬಂದು 21 ವರ್ಷವಾಗಿದೆ : ಈ ರೀತಿ ಎಂದೂ ನೋಡಿಲ್ಲ'
ನಾನು ರಾಜಕೀಯಕ್ಕೆ ಬಂದು 21 ವರ್ಷಗಳೇ ಕಳೆದಿವೆ. ಆದರೆ ಇಂತಹ ಪರಿಸ್ಥಿತಿ ಎಂದೂ ನೋಡಿಲ್ಲ ಎಂದು ಎಚ್ ಡಿ ರೇವಣ್ಣ ಹೇಳಿದ್ದರು.
ಶಿರಾ (ನ.12): ಬಿಜೆಪಿಯವರು ಅಧಿಕಾರಿಗಳನ್ನು ಇಟ್ಟುಕೊಂಡು ಹಣ ಹಂಚಿದ್ದಾರೆ. ಸರಕಾರದ ಅಧಿಕಾರಿಗಳು, ಚುನಾವಣಾ ಆಯೋಗ ಸಂಪೂರ್ಣ ಬಿಜೆಪಿ ಪಕ್ಷದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಲು ಪ್ರಮುಖ ಕಾರಣ ಅಪಪ್ರಚಾರ. ಬಿಜೆಪಿಯವರ ಹಣ ಹಂಚಿಕೆಯೇ ಪ್ರಮುಖ ಕಾರಣ. ಈ ರಾಜ್ಯದಲ್ಲಿ ಅಧಿಕಾರಿಗಳಿಗೆ ಭಯದ ವಾತಾವರಣ ಇದೆ. ನಾನು 21 ವರ್ಷದಿಂದ ರಾಜಕೀಯದಲ್ಲಿ ಅಧಿಕಾರ ನಡೆಸಿದ್ದೇನೆ. ಆದರೆ ಈ ರೀತಿಯ ವಾತಾವರಣ ಎಂದು ನೋಡಿಲ್ಲ. ಬಿಜೆಪಿ ಸರಕಾರ ಅಧಿಕಾರಿಗಳ ಮೂಲಕ ಹಣ ಹಂಚಿಕೆ ಮಾಡಿದೆ. ಶಿರಾದಲ್ಲಿ ಸ್ವಾಭಿಮಾನ ಜನ ಇದ್ದಾರೆ. ಹಾಗಾಗಿಯೇ ಜೆಡಿಎಸ್ಗೆ 35 ಸಾವಿರ ಮತಗಳು ಬಂದಿವೆ. ಈ ರೀತಿಯ ಚುನಾವಣೆ ಮಾಡಿ ಜನರ ತೆರಿಗೆ ಹಣ ವ್ಯಯ ಮಾಡುವ ಬದಲು ರಷ್ಯಾ ಇತರೆ ರಾಷ್ಟ್ರಗಳಲ್ಲಿ ಸಾಯುವವರೆಗೂ ಅಧ್ಯಕ್ಷರಾಗುವ ರೀತಿಯಲ್ಲಿ ಈ ದೇಶದಲ್ಲಿ ಆ ಸನ್ನಿವೇಶ ಬರುವುದರಲ್ಲಿ ಅನುಮಾನವಿಲ್ಲ ಎಂದರು.
ಮತ್ತೆ ನಾಲ್ಕು ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ...
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲುಂಡಿರಬಹುದು. ಇದಕ್ಕೆ ಪಕ್ಷದ ಕಾರ್ಯಕರ್ತರು ಎದೆಗುಂದುವುದು ಬೇಡ. ಮುಂದಿನ ದಿನಗಳಲ್ಲಿ ಶಿರಾದಲ್ಲಿ ಪಕ್ಷದ ಕಚೇರಿ ತೆರೆದು ಕಾರ್ಯಕರ್ತರೊಂದಿಗೆ ಇರುತ್ತೇವೆ. ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷ ಗೆಲುವಿಗೆ ಶ್ರಮಿಸೋಣ ಎಂದರು.
ಬಿಜೆಪಿ ಪಕ್ಷದವರು ಶಿರಾ ಜನತೆಗೆ ಮಾತು ಕೊಟ್ಟಂತೆ 6 ತಿಂಗಳೊಳಗೆ ಮದಲೂರು ಕೆರೆಗೆ ನೀರು ಹರಿಸಲಿ ಎಂದು ಮನವಿ ಮಾಡುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಸತ್ಯಪ್ರಕಾಶ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಸದಸ್ಯ ಸಿ.ಆರ್.ಉಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಆರ್.ಮುದ್ದುರಂಗೇಗೌಡ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಎಂ.ರಂಗನಾಥ್, ಮಾಜಿ ನಗರಸಭಾ ಸದಸ್ಯರಾದ ರಾಘವೇಂದ್ರ, ಆರ್.ರಾಮು, ನಟರಾಜು, ಶ್ರೀರಂಗ, ಹರೀಶ್ ಇದ್ದರು.