*  ಸಚಿವ ಅಶ್ವತ್ಥ ನಾರಾಯಣ್‌ ಮೇಲೆ ರೇವಣ್ಣ ಗರಂ*  ಏಕವಚನದಲ್ಲಿ ಬೈಯ್ದಿದ್ದಕ್ಕೆ ಕ್ಷಮೆ ಕೇಳಿದ ರೇವಣ್ಣ*  ನಾನು ಯಾವುದೇ ಉದ್ದೇಶ ಇಟ್ಟುಕೊಂಡು ಮಾತನಾಡಲಿಲ್ಲ 

ಹಾಸನ(ಏ.28): ರಾಜ್ಯದ ಉನ್ನತ ಶಿಕ್ಷಣ ಸಚಿವರು ಖಾಸಗಿ ಕಾಲೇಜುಗಳ ಜೊತೆ ಶಾಮೀಲಾಗಿದ್ದು, ಇವರಿಗೆ ಬಡವರ ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೆಶ ಇಲ್ಲ. ಮುಂದಿನ ದಿನಗಳಲ್ಲಿ ಅವನ ಹಗರಣ ಬಯಲಿಗೆಳೆಯುತ್ತೇನೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ(HD Revanna) ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಮಂತ್ರಿಗೆ ಶಿಕ್ಷಣ ಇಲಾಖೆ(Education Department) ಬಗ್ಗೆ ತಿಳಿದಿಲ್ಲ. ನಾನು ಒಬ್ಬ ಹಳ್ಳಿ ಗಮಾಡ್‌. ಆದರೆ ನನ್ನ ಹಳ್ಳಿ ಕಾಲೇಜು ಮೊದಲ ಸ್ಥಾನದಲ್ಲಿದೆ. ಹಾಸನ ನಗರದಲ್ಲಿ ಸರ್ಕಾರಿ ಕಾಲೇಜು ಮಾಡಲು ದೇವೇಗೌಡರು(HD Devegowda) ಮತ್ತು ಅವರ ಮಕ್ಕಳು ಬರಬೇಕಾಯಿತು. ನಾನು ಬಂದ ಮೇಲೆ ಹಾಸನ ನಗರದಲ್ಲಿ ಖಾಸಗಿ ಶಾಲೆಗಳ ಹಾವಳಿ ಕಡಿಮೆಯಾಗಿದೆ. ಶಿಕ್ಷಣ ಮಂತ್ರಿ ಶಿಕ್ಷಣದಲ್ಲಿ ಕ್ರಾಂತಿ ಮಾಡಬಹುದು ಅಂದುಕೊಂಡಿದ್ದೆ. ಸರ್ಕಾರಿ ಶಾಲೆ ಕಾಲೇಜುಗಳಿಗೆ ಮೂಲ ಸೌಕರ್ಯ ಡೆಸ್ಕ್‌, ಬೆಂಚ್‌ ಹಾಗು ಉಪನ್ಯಾಸಕರ ಕೊರತೆ ಇರುವುದನ್ನು ಮೊದಲು ಅಶ್ವತ್ಥ ನಾರಾಯಣ್‌ ಸರಿ ಮಾಡಲಿ. ನಾನು, ಕುಮಾರಸ್ವಾಮಿ(HD Kumaraswamy), ದೇವೇಗೌಡರಾಗಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಿಜೆಪಿ ಸರ್ಕಾರ 5 ವರ್ಷದ ಅವ​ಧಿಯಲ್ಲಿ ಹಾಸನ ಜಿಲ್ಲೆಗೆ ಒಂದು ಲ್ಯಾಬ್‌ ಕೊಟ್ಟಿಲ್ಲ. ನಾನು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ 60 ಕೋಟಿ ವೆಚ್ಚದ ಕೆಲಸ ಮಾಡಿದ್ದೇನೆ. ಮೊಸಳೆ ಹೊಸಹಳ್ಳಿ ಎಂಜಿನಿಯರಿಂಗ್‌ ಕಾಲೇಜು ಬಾಗಿಲು ಮುಚ್ಚಲು ಹೊರಟಿದ್ದರು. ಆದರೆ ದೇವೇಗೌಡರು ಹೋರಾಟ ಮಾಡಿ ಗ್ರಾಮೀಣ ಪ್ರದೇಶದ ಕಾಲೇಜು ಉಳಿಸಿಕೊಟ್ಟರು. ರಾಜ್ಯದ 10 ಎಂಜಿನಿಯರಿಂಗ್‌ ಕಾಲೇಜು ಪೈಕಿ ಮೊಸಳೆ ಹೊಸಹಳ್ಳಿ ಎಂಜಿನಿಯರಿಂಗ್‌ ಕಾಲೇಜು ದಾಖಲಾತಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಹೆಚ್ಚೇನು ಓದದ ರೇವಣ್ಣಗೆ ಶಿಕ್ಷಣ ಅಂದ್ರೇನೆ ಗೊತ್ತಿಲ್ಲ: ಸಚಿವ ಅಶ್ವ​ತ್ಥ

ಕ್ಷಮೆ ಕೋರಿದ ರೇವಣ್ಣ:

ಟ್ರಕ್‌ ಟರ್ಮಿನಲ್‌ ವಿಚಾರವಾಗಿ ಜಿಲ್ಲಾ​ಧಿಕಾರಿ ಕಚೇರಿ ಮುಂದೆ ಕಳೆದ ಎರಡು ದಿನಗಳ ಹಿಂದೆ ಹಾಸನ ತಾಲೂಕು ಪಂಚಾಯ್ತಿ ಇಒ ಅವರಿಗೆ ಏಕವಚನದಲ್ಲಿ ‘ದನ ಕಾಯೋನೆ ನೀನು’ ಎಂದು ಬೈಯ್ದಿದ್ದಕ್ಕೆ ರೇವಣ್ಣ ಕ್ಷಮೆ ಕೋರಿದರು.
ಅಧಿ​ಕಾರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಯಿತು. ನನ್ನ ಮಾತಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನನಗೆ ನೋವಾಗಿದ್ದ ಕಾರಣ ಸಿಟ್ಟಾದೆ. ಅಧಿ​ಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ಜಿಲ್ಲಾ​ಧಿಕಾರಿ ಕಚೇರಿಯಲ್ಲಿ ಅಧಿ​ಕಾರಿಗಳ ಬಗ್ಗೆ ಏಕವಚನದಲ್ಲಿ ತಪ್ಪಾಗಿ ಮಾತನಾಡಿದೆ. ನಾನು ಯಾವುದೇ ಉದ್ದೇಶ ಇಟ್ಟುಕೊಂಡು ಮಾತನಾಡಲಿಲ್ಲ. ಇಂಗ್ಲಿಷ್‌ ಬರದ ಕಾರಣ ದನದ ಡಾಕ್ಟರ್‌ ನೀನು ಅಂತ ಕರೆದೆ. ನನ್ನ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಈಗಿರುವ ಕಾಂಗ್ರೆಸ್‌(Congress) ನೆಹರೂ ಕಾಂಗ್ರೆಸ್‌ ಅಲ್ಲ, ಹೊಟ್ಟೆಪಾಡಿನ ಕಾಂಗ್ರೆಸ್‌. ನಿರುದ್ಯೋಗಿ ಕಾಂಗ್ರೆಸ್‌ ನಾಯಕರು ನನ್ನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇವರಿಗೆ ನಾನು ಉತ್ತರ ಕೊಡುವುದಿಲ್ಲ. ರಾಹುಲ್‌ ಗಾಂ​ಧಿ, ಸೋನಿಯಾ ಗಾಂಧಿ​ ಇವರು ನನ್ನ ಬಗ್ಗೆ ಮಾತನಾಡಿದ್ದರೆ ಮಾತ್ರ ಉತ್ತರ ಕೊಡುತ್ತೇನೆ. ದೇಶದಲ್ಲಿ ಕಾಂಗ್ರೆಸ್‌ ಸಿಪಿಐ, ಸಿಪಿಎಂ ಎಲ್ಲಾ ಪ್ರಾದೇಶಿಕ ಪಕ್ಷಗಳದ್ದು ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದರು.