ನಾಲ್ಕು ಬಾರಿ ಮುಜುಗರಕ್ಕೊಳಗಾದ ಮಾಜಿ ಪ್ರಧಾನಿ
- ಸುದ್ದಿಗೋಷ್ಠಿ ನಡೆಸುವಾಗ ನಾಲ್ಕು ಬಾರಿ ಕೈಕೊಟ್ಟ ವಿದ್ಯುತ್
- ಪದೇ ಪದೇ ಕರೆಂಟ್ ಹೋಗಿದ್ದರಿಂದ ಬೇಸರಗೊಂಡ ಮಾಜಿ ಪ್ರಧಾನಿ
ಬೆಳಗಾವಿ[ಜು.15]: ಕುಂದ ನಗರಿಯಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿದ್ಯುತ್ ಕೈಕೊಟ್ಟ ಪರಿಣಾಮ ನಾಲ್ಕು ಬಾರಿ ಮುಜುಗರಕ್ಕೊಳಗಾದರು.
ಮಾತನಾಡಲು ಆರಂಭಿಸಿದಾಗಲೆಲ್ಲ ಕರೆಂಟ್ ಕೈಕೊಡುತ್ತಿತ್ತು. ಇದು ಜೆಡಿಎಸ್ ವರಿಷ್ಠರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಅದಲ್ಲದೆ ಇಂಧನ ಖಾತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯಿದ್ದರೂ ವಿದ್ಯುತ್ ಸಮಸ್ಯೆ ಮಾತ್ರ ತಪ್ಪಲಿಲ್ಲ. ಪದೇ ಪದೇ ಕರೆಂಟ್ ಹೋಗಿ ಬಂದಿದ್ದರಿಂದ ದೇವೇಗೌಡರು ತಲೆ ಮೇಲೆ ಕೈಯಿಟ್ಟುಕೊಂಡು ಬೇಸರ ಹೊರಹಾಕಿದರು.
ದೇವೇಗೌಡರ ಸಮ್ಮುಖದಲ್ಲೇ ಗಲಾಟೆ
ಇದೇ ಸಂದರ್ಭದಲ್ಲಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ ಮುಖಂಡರು ಕಿತ್ತಾಡಿದ ಘಟನೆ ಕೂಡ ನಡೆಯಿತು. ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯ,ಜಿಲ್ಲಾಧ್ಯಕ್ಷರ ಬದಲಾವಣೆಗೆ ಆಗ್ರಹ,ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಕುರಿತು ಗಲಾಟೆ ಉಂಟಾಯಿತು. ಜೆಡಿಎಸ್ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದವರಿಗೆ ನಿರ್ಲಕ್ಷ್ಯ ಮಾಡುತ್ತಿರುವ ಕುರಿತು ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು.