Asianet Suvarna News Asianet Suvarna News

Haveri: ಸಾಹಿತ್ಯ ಸಮ್ಮೇಳನದಲ್ಲಿ ರಂಜಿಸಿದ ಕಲಾವಿದರಿಗೆ ಇನ್ನೂ ಸಿಗದ ಗೌರವಧನ!

ಹಾವೇರಿಯಲ್ಲಿ ಜ. 6ರಿಂದ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ವಿವಿಧೆಡೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ಕಲಾವಿದರು ನಿತ್ಯವೂ ತಮ್ಮ ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿಕೊಳ್ಳುತ್ತಿದ್ದು, ಸಮ್ಮೇಳನ ಮುಗಿದು ಒಂದು ತಿಂಗಳಾದರೂ ಅವರ ಗೌರವಧನ ಸಂದಾಯವಾಗಿಲ್ಲ.

Haveri kannada literature fest Artistes have not yet received honorarium  rav
Author
First Published Feb 7, 2023, 10:48 AM IST

ನಾರಾಯಣ ಹೆಗಡೆ

 ಹಾವೇರಿ (ಫೆ.7) : ಹಾವೇರಿಯಲ್ಲಿ ಜ. 6ರಿಂದ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ವಿವಿಧೆಡೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ಕಲಾವಿದರು ನಿತ್ಯವೂ ತಮ್ಮ ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿಕೊಳ್ಳುತ್ತಿದ್ದು, ಸಮ್ಮೇಳನ ಮುಗಿದು ಒಂದು ತಿಂಗಳಾದರೂ ಅವರ ಗೌರವಧನ ಸಂದಾಯವಾಗಿಲ್ಲ.

ಅಕ್ಷರ ಜಾತ್ರೆ ಅದ್ಧೂರಿಯಾಗಿ, ಯಶಸ್ವಿಯಾಗಿ ನಡೆದಿರುವುದು ಈಗ ಇತಿಹಾಸ. ಮೂರು ವರ್ಷಗಳ ಬಳಿಕ ನಡೆದ ಸಮ್ಮೇಳನಕ್ಕೆ ನಾಡಿನ ಎಲ್ಲೆಡೆಯಿಂದ ಸಾಹಿತ್ಯಾಸಕ್ತರ ಪ್ರವಾಹವೇ ಹರಿದುಬಂದಿತ್ತು. ಮಾಡಿರುವ ವ್ಯವಸ್ಥೆ, ಅಚ್ಚುಕಟ್ಟಾಗಿ ಎಲ್ಲ ಕಾರ್ಯಕ್ರಮಗಳು ನಡೆದ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದ್ದವು. ಗೋಷ್ಠಿಗಳ ಬಳಿಕ ಪ್ರತಿ ದಿನ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಗಮನ ಸೆಳೆದಿದ್ದವು. ಆದರೆ, ಈ ಕಾರ್ಯಕ್ರಮ ನೀಡಿದ ಕಲಾವಿದರಿಗೆ ನೀಡುವ ಗೌರವಧನ ಇನ್ನೂ ಕಲಾವಿದರಿಗೆ ತಲುಪಿಲ್ಲ.

ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ 50 ವರ್ಷಗಳ ಕನಸು ನನಸು; ಹಾವೇರಿ ಜನ ಖುಷಿಯೋ ಖುಷಿ

ಕಲಾವಿದರ  ₹47 ಲಕ್ಷ

ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾವಿದರನ್ನು, ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಕಲಾತಂಡಗಳ ಕಲಾವಿದರು ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದರು. ಸಮ್ಮೇಳನದಲ್ಲಿ ಪ್ರದರ್ಶನ ನೀಡುವುದೇ ಹೆಮ್ಮೆಯ ಸಂಗತಿ ಎಂಬ ಕಾರಣಕ್ಕೆ ಕಲಾವಿದರು ಆಗಮಿಸಿದ್ದರು. ಕಲಾ ತಂಡಗಳು ಹತ್ತಾರು ಸಾವಿರ ರು. ನೀಡಿ ವಾಹನ ಮಾಡಿಸಿಕೊಂಡು ಆಗಮಿಸಿದ್ದವು. ವೈಯಕ್ತಿಕ ಹಾಗೂ ತಂಡದ ಕಾರ್ಯಕ್ರಮ ನೀಡಿದವರಿಂದ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದು ವಾರದೊಳಗಾಗಿ ಗೌರವಧನವನ್ನು ಖಾತೆಗೆ ಹಾಕುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ, ಸಮ್ಮೇಳನ ನಡೆದು ತಿಂಗಳಾದರೂ ಬ್ಯಾಂಕ್‌ ಖಾತೆಗೆ ಹಣ ಬಾರದಿರುವುದು ಅನೇಕ ಬಡ ಕಲಾವಿದರಿಗೆ ಬೇಸರ ಮೂಡಿಸಿದೆ.

ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಕಲಾ ತಂಡಗಳಿಗೆ ಕಲಾವಿದರ ಸಂಖ್ಯೆ ಆಧರಿಸಿ ಗೌರವಧನ ನಿಗದಿಪಡಿಸಲಾಗಿತ್ತು. ಅದರಂತೆ ಸುಮಾರು 200 ಕಲಾ ತಂಡಗಳಿಗೆ . 47 ಲಕ್ಷ ಸಂದಾಯ ಮಾಡಬೇಕಿದೆ. ಸಮ್ಮೇಳನಕ್ಕೆ ಹಣಕಾಸಿನ ಕೊರತೆಯಾಗದ ರೀತಿಯಲ್ಲಿ ಸರ್ಕಾರ ಮುಂಚಿತವಾಗಿ . 20 ಕೋಟಿ ನೀಡಿದೆ. ಅನುದಾನ ಇದ್ದರೂ ಕಲಾವಿದರಿಗೆ ತಲುಪಿಸಲು ಸಾಧ್ಯವಾಗಿಲ್ಲ.

ಸಮಿತಿಯಿಂದ ಅನುಮೋದನೆಯಾಗಿಲ್ಲ

ಸಮ್ಮೇಳನದ ಖರ್ಚು ವೆಚ್ಚಗಳನ್ನು ಸಂಪೂರ್ಣವಾಗಿ ಎಂಸಿಎ ಏಜೆನ್ಸಿ ಮೂಲಕವೇ ಸಂದಾಯ ಮಾಡಲಾಗುತ್ತಿದೆ. ಸಮ್ಮೇಳನದ ಹಣಕಾಸು ಸಮಿತಿ ಸಭೆ ನಡೆಸಿ ಬಿಲ್‌ಗಳಿಗೆ ಅನುಮೋದನೆ ನೀಡಬೇಕಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬಿಲ್‌ಗೆ ಮಂಜೂರಾತಿ ನೀಡಿದ ಬಳಿಕ ಜಿಲ್ಲಾಡಳಿತವು ಎಂಸಿಎಗೆ ಕಲಾವಿದರು ಅಥವಾ ಕಲಾ ಸಂಸ್ಥೆಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹತ್ತಾರು ಕಲಾವಿದರನ್ನು ಕರೆತಂದು ಖರ್ಚು ಮಾಡಿಕೊಂಡಿರುವ ಸಂಸ್ಥೆಗಳು ಗೌರವಧನ ಯಾವಾಗ ಜಮಾ ಆಗುತ್ತದೆ ಎಂದು ಕಾದು ನೋಡುತ್ತಿರುವಂತಾಗಿದೆ.

Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ 32.87 ಕೋಟಿ ಬೇಡಿಕೆ

ಸಮ್ಮೇಳನದ ಹಣಕಾಸು ಸಮಿತಿಯಿಂದ ಬಿಲ್‌ಗೆ ಅನುಮೋದನೆಯಾದ ಬಳಿಕ ಎಂಸಿಎ ಏಜೆನ್ಸಿಗೆ ಹಣ ಬಿಡುಗಡೆ ಮಾಡಲಾಗುವುದು. ಬಳಿಕ ಎಂಸಿಎಯಿಂದ ಕಲಾವಿದರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಲಿದೆ. ವಾರದೊಳಗಾಗಿ ಸಭೆ ನಡೆಸಿ ಹಣ ಬಿಡುಗಡೆ ಮಾಡಲಾಗುವುದು.

-ರಘುನಂದನ ಮೂರ್ತಿ ಜಿಲ್ಲಾಧಿಕಾರಿ ಹಾವೇರಿ

Follow Us:
Download App:
  • android
  • ios