ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯಲ್ಲಿ ಸೋಯಾಬೀನ್, ಶೇಂಗಾ ಬೀಜಗಳಿಗಾಗಿ ರೈತರು ಕೃಷಿ ಕೇಂದ್ರದ ಮುಂದೆ ರಾತ್ರಿಯಿಡೀ ಸರದಿ ಸಾಲಿನಲ್ಲಿ ಕಾಯುತ್ತಿದ್ದು, ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ: ಜಿಲ್ಲೆಯಲ್ಲಿ ಹದವಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳಿಗಾಗಿ ರೈತರ ಪರದಾಟ ಶುರುವಾಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿ ಕೃಷಿ ಕೇಂದ್ರದ ಮುಂದೆ ಅನ್ನದಾತರು ಶುಕ್ರವಾರ ರಾತ್ರಿ ಪೂರ್ತಿ ಸರದಿ ಸಾಲಿನಲ್ಲಿ ಮಲಗಿದರು.

Add Asianetnews Kannada as a Preferred SourcegooglePreferred

ಸೋಯಾಬೀನ್, ಶೇಂಗಾ ಬೀಜಕ್ಕಾಗಿ ರೈತರ ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಕೃಷಿ ಇಲಾಖೆಯಿಂದ ಸರಿಯಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ ನೆಪ ಹೇಳಿ ಬಿತ್ತನೆ ಬೀಜ ನೀಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದು, ರಾತ್ರೀ ಇಡೀ ಅನ್ನದಾತರು ಕೃಷಿ ಕೇಂದ್ರ ಮುಂದೆ ಕ್ಯೂ ಹಚ್ಚಿ ಮಲಗಿದ್ದಾರೆ.

ಬೀಜ ಪಡೆಯಲು ನೂಕುನುಗ್ಗಲು

ಇನ್ನು ಹಗಲು ರಾತ್ರಿ ಕೆಲವು ಕಡೆ ಬಿತ್ತನೆ ಬೀಜ ಪಡೆಯಲು ನೂಕುನುಗ್ಗಲು ಉಂಟಾಗುತ್ತಿದ್ದು, ಕೃಷಿ ಇಲಾಖೆಯ ವಿರುದ್ಧ ಜಿಲ್ಲೆಯ ಅನ್ನದಾತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ಬೀಜ ದಾಸ್ತಾನಿಲ್ಲ ಹಾಗೂ ಸರದಿಯಲ್ಲಿ ನಿಂತರೂ ಬೀಜ ಸಿಗುತ್ತಿಲ್ಲ, ಉತ್ತಮ ಮಳೆ ಆಗುತ್ತಿರುವುದರಿಂದ ಬೀಜ ಖಾಲಿ ಆದರೆ ಸಮಸ್ಯೆಯಾಗುತ್ತದೆ ಎಂದು ರೈತರು ಶುಕ್ರವಾರ ರಾತ್ರಿಯೇ ಕೃಷಿ ಕೇಂದ್ರದ ಬಳಿ ಆಗಮಿಸಿದ್ದರು.

ಇನ್ನು ಶುಕ್ರವಾರ ಸಂಜೆ ಸುರಿಯುವ ಮಳೆಯಲ್ಲೇ ಕೆಲ ರೈತರು ಸರದಿಯಲ್ಲಿ ನಿಂತು ಬೀಜ ಖರೀದಿಸಿದ ದೃಶ್ಯಗಳು ಕಂಡುಬಂತು.