ಹಾಸನದ ಯುವತಿ ನಿಖಿತಾ, ಬೆಂಗಳೂರಿನ ಪಿಲ್ಲಹಳ್ಳಿಯಲ್ಲಿದ್ದ ಪ್ರಿಯಕರನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರಿಯಕರನೇ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪಿಸಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.06): ಪ್ರೀತಿಯ ಹೆಸರಲ್ಲಿ ನಂಬಿ ಬಂದ ಯುವತಿಯೊಬ್ಬಳು ಪ್ರಿಯಕರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ನಿಖಿತಾ (19) ಮೃತಪಟ್ಟ ದುರ್ದೈವಿ.

Add Asianetnews Kannada as a Preferred SourcegooglePreferred

ಘಟನೆಯ ಹಿನ್ನೆಲೆ

ಮೃತ ನಿಖಿತಾ ಹಾಗೂ ಪಿಲ್ಲಹಳ್ಳಿ ಗ್ರಾಮದ ರಾಘವೇಂದ್ರ ಎಂಬ ಯುವಕ ಕಳೆದ 5-6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಿಖಿತಾ ಅರಸಿಕೆರೆಯಿಂದ ಪಿಲ್ಲಹಳ್ಳಿಯಲ್ಲಿರುವ ಪ್ರಿಯಕರ ರಾಘವೇಂದ್ರನ ಮನೆಗೆ ಬಂದಿದ್ದಳು. ಈ ವೇಳೆ ತನಗೆ ತಾಳಿ ಕಟ್ಟಿ ಅಧಿಕೃತವಾಗಿ ಮದುವೆಯಾಗುವಂತೆ ನಿಖಿತಾ ರಾಘವೇಂದ್ರನಿಗೆ ಸದಾ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.

ಆತ್ಮ*ಹತ್ಯೆಯೋ ಅಥವಾ ಕೊಲೆಯೋ?

ಸೋಮವಾರ ಪ್ರಿಯಕರ ರಾಘವೇಂದ್ರ ಹಾಗೂ ಆತನ ಮನೆಯವರು ಮನೆಯಲ್ಲಿ ಇಲ್ಲದ ವೇಳೆ ನಿಖಿತಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ಆದರೆ, ನಿಖಿತಾ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪಿಲ್ಲಹಳ್ಳಿಗೆ ಧಾವಿಸಿದ ನಿಖಿತಾ ಪೋಷಕರು, ಇದು ಆತ್ಮ*ಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. 'ನಮ್ಮ ಮಗಳನ್ನು ಪ್ರೀತಿಯ ಹೆಸರಲ್ಲಿ ವಂಚಿಸಿ, ಮದುವೆಗೆ ಒತ್ತಾಯಿಸಿದ ಕಾರಣಕ್ಕೆ ಅವಳನ್ನು ಹತ್ಯೆ ಮಾಡಲಾಗಿದೆ' ಎಂದು ಪೋಷಕರು ರಾಘವೇಂದ್ರನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ತನಿಖೆ

ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸದ್ಯ ಮೃತಳ ಪೋಷಕರ ದೂರಿನ ಮೇರೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ (Madanayakahalli Police Station) ಪ್ರಕರಣ ದಾಖಲಾಗಿದ್ದು, ಪ್ರಿಯಕರ ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.