ರಾಜ್ಯ ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ಕಿಡಿ : ಭಿಕ್ಷೆ ಬೇಡುತ್ತಿಲ್ಲವೆಂದು ಆಕ್ರೋಶ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ. ನಾವೇನು ಭಿಕ್ಷೆ ಬೇಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ
ಬೇಲೂರು (ಅ.12): ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ತಾಲೂಕಿಗೆ ಬಿಡುಗಡೆಯಾಗಿದ್ದ 160 ಕೋಟಿ ರು. ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿರುವುದನ್ನು ಕೊಡಿ ಎಂದು ಕೇಳುತ್ತಿದ್ದೇವೆ ಹೊರತು ಭಿಕ್ಷೆ ಬೇಡುತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಅರೇಹಳ್ಳಿ ಹಿರಿಗರ್ಜೆ ಮಲ್ಲಾಪುರ ಡಾಂಬರು ರಸ್ತೆಗೆ ಭಾನುವಾರ ಸಂಸದ ಪ್ರಜ್ವಲ್ ರೇವಣ್ಣ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿಯವರು ಮಾತೆತ್ತಿದರೆ ನಿಮ್ಮ ಜೆಡಿಎಸ್ ಸಾಧನೆ ಏನು ಎಂದು ಪ್ರಶ್ನೆ ಮಾಡುತ್ತಾರೆ ಆದರೆ ಅವರ ಸಾಧನೆ ಏನು ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರಲ್ಲದೆ ಕುಮಾರಸ್ವಾಮಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ರದ್ದು ಮಾಡಿದ್ದೇ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು.
ತಮ್ಮ ಮಗನ ವಯಸ್ಸಿನ ಪ್ರಜ್ವಲ್ ರೇವಣ್ಣ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ ...
ಅನುದಾನ ಬಿಡುಗಡೆ ಮಾಡಿ ಎಂದು ಭಿಕ್ಷೆ ಬೇಡುತ್ತಿಲ್ಲ. ಜೆಡಿಎಸ್ ಕಾರ್ಯಕರ್ತರು ಸ್ವಾಭಿಮಾನಿಗಳಾಗಿದ್ದು ನಮ್ಮ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಹಣವನ್ನು ಕೇಳುತ್ತಿದ್ದೇವೆಯೇ ಹೊರತು ನೀವು ಕೊಡುವ ಭಿಕ್ಷೆಯನ್ನಲ್ಲ. ಕುಮಾರಣ್ಣ ಸರ್ಕಾರ ಬೀಳುವ ಹಂತದಲ್ಲಿ ತಾಲ್ಲೂಕಿನ ಅತಿವೃಷ್ಟಿಯಲ್ಲಿ ಹಾನಿಗೊಂಡ ಸೇತುವೆ ರಸ್ತೆ ಹಾಗೂ ದೇಗುಲಗಳ ದುರಸ್ತಿ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ 30 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಮಾಜಿ ಸಚಿವ ಎ.ಮಂಜು ಕೈವಾಡ ನಡೆಸಿ ಅನುದಾನವನ್ನು ರದ್ದು ಮಾಡಿ, ಸೇಡಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದೇ ಅವರ ಸಾಧನೆ ಎಂದರು.
ಶಾಸಕ ಕೆಎಸ್ ಲಿಂಗೇಶ್ ಮಾತನಾಡಿ, ಮಲೆನಾಡು ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 6.30 ಕೋಟಿ ಅನುದಾನದಲ್ಲಿ ಹರಿ ಗರ್ಜೆ ಮಲ್ಲಾಪುರ ಹೆಗಡೆಹಳ್ಳಿ ಡೋಲುಮನೆ 8.3 ಕಿಮಿ ಡಾಂಬರು ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿದೆ . ಅಲ್ಲದೆ ರೈತ ಸಂಪರ್ಕ ಕೇಂದ್ರ ನೂತನವಾಗಿ 45 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.