ಜೆಡಿಎಸ್ಗೆ ಭರ್ಜರಿ ಗೆಲುವು : ಶೂನ್ಯ ಸುತ್ತಿದ ಬಿಜೆಪಿ
ಗೌಡರ ನಾಡಲ್ಲಿ ನಡೆದ ಚುನಾವಣೆಯೊಂದರಲ್ಲಿ ಜೆಡಿಎಸ್ ಭರ್ಜರಿ ಗೆಲುವು ಪಡೆದಿದ್ದರೆ ಬಿಜೆಪಿ ಶೂನ್ಯ ಸುತ್ತಿದೆ.
ಹಾಸನ (ಸೆ.27): ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹದಿಮೂರು ನಿರ್ದೇಶಕರ ಸ್ಥಾನಗಳ ಪೈಕಿ ಉಳಿದಿದ್ದ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಜೆಡಿಎಸ್ನ ನಾಲ್ವರು ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಾಗಿ ಜೆಡಿಎಸ್ ಪಕ್ಷದ 7 ಅಭ್ಯರ್ಥಿಗಳು ಅವಿರೋಧಧವಾಗಿ ಆಯ್ಕೆಯಾಗಿದ್ದರು. ಉಳಿದ 4 ಸ್ಥಾನಗಳಿಗಾಗಿ ಶುಕ್ರವಾರ ನಡೆದ ಚುಣಾವಣೆಯು ಉಪವಿಭಾಗಧಿಕಾರಿ ನವೀನ್ ಭಟ್ ಸಮ್ಮುಖದಲ್ಲಿ ಜರುಗಿತು. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹಾಗೂ ಹೆಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಗಿರೀಶ್ ಚನ್ನವಿರಪ್ಪ ತಮ್ಮ ಪ್ರತಿಸ್ಪರ್ಧಿ ಬಿ.ಜೆ.ಪಿ ಪಕ್ಷದ ನಗರಸಭೆ ಸದಸ್ಯ ಸಾಹಿತಿ ನಾಗೇಶ್(6) ವಿರುದ್ಧ 27 ಮತಗಳನ್ನು ಪಡೆದು ಜಯ ಗಳಿಸಿದರು. ವಿಧಾನಪರಿಷತ್ ಮಾಜಿ ಸದಸ್ಯರಾದ ಪಟೇಲ್ ಶಿವರಾಮ್ 29 ಮತಗಳನ್ನು ಪಡೆದು ಬಿ.ಜೆ.ಪಿ ಪಕ್ಷದ ಬೆಂಬಲಿತ ಉಘನೆ ದೇವೆಂದ್ರ (6 ಮತ) ವಿರುದ್ಧ ಜಯ ಗಳಿಸಿದ್ದು, ಅರಸೀಕೆರೆ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬಂಡಿ ರಾಜಣ್ಣ 18 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ ವಕೀಲರಾದ ಮೊಹನ್ ಕುಮಾರ್(6 ಮತ) ವಿರುದ್ಧ ಜಯ ಗಳಿಸಿದ್ದು, ಸಹಕಾರ ಸಂಘದ ಬಿದರೆಕೆರೆ ಜಯರಾಂ ಬ್ಯಾಂಕ್ನ ಮಾಜಿ ನೌಕರ ಪುಟ್ಟಸ್ವಾಮಿಗೌಡ(7 ಮತ) ವಿರುದ್ಧ 19 ಮತಗಳನ್ನು ಪಡೆದು ಜಯ ಗಳಿಸಿದರು.
ಅಕ್ಟೋಬರ್ ಮೊದಲ ವಾರ ಸಚಿವ ಸಿ.ಟಿ.ರವಿ ರಾಜೀನಾಮೆ ? ...
ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಹೊರಬಂದಿತು. ಬೆಳಗಿನಿಂದಲೇ ಎರಡು ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತದಾರರನ್ನು ಸೆಳೆಯಲು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ಮತದಾನವು ಸಂಜೆ 4 ಗಂಟೆಯ ವೇಳೆಗೆ ಶೇ.90 ರಷ್ಟುನಡೆಯಿತು. ನಂತರ ಮತ ಏಣಿಕೆ ಪ್ರಾರಂಭಿಸಿದರು. ಗೆಲುವು ಪಡೆದ ಅಭ್ಯರ್ಥಿಗಳ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿ.ಎಂ. ರಸ್ತೆಯಲ್ಲಿ ಜನರು ನೆರೆದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು.