ಹಾಸನ-ಸುಬ್ರಹ್ಮಣ್ಯ ರೈಲು ಪುನಾರಂಭ
ಸಕಲೇಶಪುರ ರೈಲ್ವೆ ಸ್ಟೇಷನ್ನಿಂದ ಎಡಕುಮರಿವರೆಗೆ ರೈಲ್ವೆ ಹಳಿ ಮೇಲೆ ಗುಡ್ಡಗಳು, ಬಂಡೆಗಳು ಅಲ್ಲಲ್ಲಿ ಕುಸಿದುಬಿದ್ದಿದ್ದು, ಕೆಲವೆಡೆ ರೈಲ್ವೆ ಹಳಿಗಳೇ ಕಿತ್ತುಹೋಗಿದ್ದವು. ಈ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಸಂಚಾರ ಆರಂಭಿಸಲಿದೆ.
ಹಾಸನ: ಮಹಾಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದಾಗಿ ಬಂದ್ ಆಗಿದ್ದ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಅ.10ರಿಂದ ರೈಲು ಸಂಚಾರ ಪುನಾರಂಭಗೊಳ್ಳಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲ್ವೆ ಮಾರ್ಗದಲ್ಲಿ ಆ.14ರಿಂದ 68 ಕಡೆ ಭೂ ಕುಸಿತವಾಗಿತ್ತು. ಇದರಿಂದ ಹಳಿಗೆ ಭಾರೀ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ತಿಂಗಳ ಕಾಲ ಈ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿತ್ತು.
ಸಕಲೇಶಪುರ ಪಟ್ಟಣದ ರೈಲ್ವೆ ಸ್ಟೇಷನ್ನಿಂದ ಎಡಕುಮರಿವರೆಗೆ ರೈಲ್ವೆ ಹಳಿ ಮೇಲೆ ಗುಡ್ಡಗಳು, ಬಂಡೆಗಳು ಅಲ್ಲಲ್ಲಿ ಕುಸಿದುಬಿದ್ದಿದ್ದು ಕೆಲವೆಡೆ ರೈಲ್ವೆ ಹಳಿಗಳೇ ಕಿತ್ತುಹೋಗಿದ್ದವು. ಸುಮಾರು 2 ಲಕ್ಷ ಕ್ಯೂಬಿಕ್ ಮೀಟರ್ಗೂ ಹೆಚ್ಚು ಪ್ರಮಾಣದ ಮಣ್ಣು, ಭಾರೀ ಗಾತ್ರದ ಬಂಡೆಗಳು, ಮರ, ಗಿಡಗಳು ರೈಲು ಹಳಿಗಳನ್ನು ಆವರಿಸಿದ್ದವು. ಹಳಿಗಳ ಮೇಲೆ ಕುಸಿದು ಬಿದ್ದಿರುವ ಮಣ್ಣು, ಬಂಡೆಗಳನ್ನು ಬಹುತೇಕ ತೆರವುಗೊಳಿಸಲಾಗಿದ್ದು, ರೈಲ್ವೆ ಹಳಿಗಳ ದುರಸ್ತಿಯೂ ಪೂರ್ಣಗೊಂಡಿದೆ. ಇನ್ನು ಸಣ್ಣಪುಟ್ಟಕಾಮಗಾರಿಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅ.10ರಿಂದ ಯಶವಂತಪುರ- ಮಂಗಳೂರು, ಕಾರವಾರ- ಬೆಂಗಳೂರು ನಡುವಿನ ಪ್ರಯಾಣಿಕರ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಹಳಿಗಳ ಮೇಲೆ ಕುಸಿದಿರುವ ಗುಡ್ಡ, ಮಣ್ಣಿ ತೆರವು ಕಾರ್ಯಾಚರಣೆ ಈಗಾಗಲೇ ನಡೆಯುತ್ತಿದೆ. ಸದ್ಯದಲ್ಲೇ ಈ ಕಾರ್ಯ ಪೂರ್ಣಗೊಳ್ಳಲಿದೆ. ಅ.10ರಂದು ಬೆಂಗಳೂರು-ಮಂಗಳೂರು ರೈಲು ಸಂಚಾರ ಆರಂಭವಾಗಲಿದೆ.
-ಅರುಣ್, ಸಕಲೇಶಪುರ ಸ್ಟೇಷನ್ ಮಾಸ್ಟರ್