ವಿದ್ಯುತ್ ಪೂರೈಕೆ, ಟಿಸಿ ಅಳವಡಿಕೆಯಲ್ಲಿ ರೈತರಿಗೆ ಕಿರುಕುಳ
ವಿದ್ಯುತ್ ಪೂರೈಕೆ ಮತ್ತು ಟಿ.ಸಿ ಅಳವಡಿಕೆಯಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ಹೊಸಹೊಳಲು ರಸ್ತೆಯಲ್ಲಿ ಸೆಸ್ಕಾಂ ಕಚೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕೆ.ಆರ್.ಪೇಟೆ : ವಿದ್ಯುತ್ ಪೂರೈಕೆ ಮತ್ತು ಟಿ.ಸಿ ಅಳವಡಿಕೆಯಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ಹೊಸಹೊಳಲು ರಸ್ತೆಯಲ್ಲಿ ಸೆಸ್ಕಾಂ ಕಚೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕಚೇರಿ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರೈತ ಮುಖಂಡರು ಧರಣಿ ಆರಂಭಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ವಿದ್ಯುತ್ ಇಲಾಖೆಯಿಂದ ರೈತ ಸಮುದಾಯಕ್ಕೆ ಆಗುತ್ತಿರುವ ಕಿರುಕುಳದ ಬಗ್ಗೆ ಅನೇಕ ಸಲ ಹೋರಾಟ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ. ರೈತ ಚಳುವಳಿಯ ಒತ್ತಾಯದ ಮೇರೆಗೆ ಕಳೆದ ಎರಡು ತಿಂಗಳ ಹಿಂದೆ ವಿದ್ಯುತ್ ನಿಗಮದ ಅಧೀಕ್ಷಕ ಎಂಜಿನಿಯರ್ ಕೃಷ್ಣಮೂರ್ತಿ ಎನ್ನುವವರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರ ಕ್ರಮದ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದರೂ ಸ್ಥಳೀಯ ಸೆಸ್ಕಾಂ ಅಧಿಕಾರಿಗಳು ಅವುಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ಇಲಾಖೆಯ ತಳಮಟ್ಟದ ಸಿಬ್ಬಂದಿ ಗುತ್ತಿಗೆದಾರರ ಅಡಿಯಾಳುಗಳಂತೆ ಕೆಲಸ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರ ಹಗಲು 4 ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ. ಆದರೆ ಸ್ಥಳೀಯ ಸಿಬ್ಬಂದಿಗಳು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಕೃಷಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಬಳಕೆಗೆ ನಿಗದಿಪಡಿಸಿರುವ ಸಮಯದಲ್ಲಿಯೇ ದುರಸ್ತಿ ಹೆಸರಿನಲ್ಲಿ ಲೈನ್ ಪವರ್ ಕಟ್ ಮಾಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಟ್ಟುಹೋದ ಟಿಸಿ ಗಳನ್ನು ಇಲಾಖೆಯ ವೆಚ್ಚದಲ್ಲಿಯೇ ದುರಸ್ತಿ ಮಾಡಿ ಅಳವಡಿಸಬೇಕು. ಆದರೆ ಟಿಸಿ ದುರಸ್ತಿ ಮತ್ತು ಬದಲಾವಣೆಗೆ ರೈತರಿಂದಲೇ ಹಣ ವಸೂಲಿ ಮಾಡುವ ಕ್ರಮ ಮುಂದುವರಿದಿದೆ. ರೈತರ ಕೃಷಿ ಬಳಕೆಯ ಟಿಸಿಗಳನ್ನು ಉಚಿತವಾಗಿ ಇಲಾಖೆಯ ವೆಚ್ಚದಲ್ಲಿಯೇ ದುರಸ್ತಿಗೊಳಿಸಲಾಗುವುದು ಎನ್ನುವ ನಾಮ ಫಲಕಗಳನ್ನು ಅಳವಡಿಸಿ ರೈತರಲ್ಲಿ ಜಾಗೃತಿ ಮೂಡಿಸುವಂತೆ ಕೋರಿದರು ಅದನ್ನು ಸೆಸ್ಕಾಂ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಟೀಕಿಸಿದರು.
ಸೆಸ್ಕಾಂ ಕಾರ್ಯಪಾಲಕ ಅಭಿಯಂತರೆ ವಿನುತಾ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಶೇಖರ್ ರೈತರೊಂದಿಗೆ ಸಂಧಾನ ನಡೆಸಿದ್ದು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ ನೀಡಿದ ಅನಂತರ ಧರಣಿಯನ್ನು ಕೈಬಿಡಲಾಯಿತು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮುಖಂಡರಾದ ಕೆ.ಆರ್.ಜಯರಾಂ, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ಕೃಷ್ಣೇಗೌಡ, ಹಕ್ಕಿಮಂಚನಹಳ್ಳಿ ಹೊನ್ನೇಗೌಡ, ಪಿ.ಬಿ.ಮಂಚನಹಳ್ಳಿ ನಾಗೇಗೌಡ, ಸ್ವಾಮೀಗೌಡ, ಕರೋಟಿ ರವಿ ಮತ್ತಿತರರು ಧರಣಿಯಲ್ಲಿದ್ದರು.
ಉಚಿತ ವಿದ್ಯುತ್ ಬಗ್ಗೆ ಚರ್ಚೆಗೆ ಬರಲಿ
ಬೆಂಗಳೂರು (ಮಾ.08): ಕಾಂಗ್ರೆಸ್ನ 200 ಯುನಿಟ್ ಉಚಿತ ವಿದ್ಯುತ್ ಭರವಸೆ ಬೋಗಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೇ, ಗೃಹ ಜ್ಯೋತಿ ಜಾರಿಗೊಳಿಸುವುದು ಹಾಗೂ 10 ಕೆ.ಜಿ. ಅಕ್ಕಿ ನೀಡುವುದು ನಿಶ್ಚಿತ. ಈ ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿ ಮಾಡದಿದ್ದರೆ ನಾನು, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ರಾಜಕಾರಣದಲ್ಲೇ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.