ಮಣಿಪುರದಲ್ಲಿ ಅಮಾನುಷವಾಗಿ ವರ್ತಿಸಿ ದೇಶವೇ ತಲೆ ತಗ್ಗಿಸುವಂತೆ ಮಾಡಿರುವ ಆರೋಪಿಗಳಿಗೆ ಯಾವುದೇ ನಿರ್ದಾಕ್ಷಿಣ್ಯವಿಲ್ಲದೇ ಗಲ್ಲಿಗೇರಿಸಬೇಕೆಂದು ದಲಿತ ಮುಖಂಡ ನೆಮ್ಮದಿ ಗ್ರಾಮದ ಮೂರ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ತುರುವೇಕೆರೆ : ಮಣಿಪುರದಲ್ಲಿ ಅಮಾನುಷವಾಗಿ ವರ್ತಿಸಿ ದೇಶವೇ ತಲೆ ತಗ್ಗಿಸುವಂತೆ ಮಾಡಿರುವ ಆರೋಪಿಗಳಿಗೆ ಯಾವುದೇ ನಿರ್ದಾಕ್ಷಿಣ್ಯವಿಲ್ಲದೇ ಗಲ್ಲಿಗೇರಿಸಬೇಕೆಂದು ದಲಿತ ಮುಖಂಡ ನೆಮ್ಮದಿ ಗ್ರಾಮದ ಮೂರ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

Add Asianetnews Kannada as a Preferred SourcegooglePreferred

ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವರು ಪ್ರಪಂಚವೇ ನಾಚಿಸುವಂತಹ ಹೇಯ ಕೃತ್ಯವನ್ನು ಮಾಡಲಾಗಿದೆ. ಇದು ಇಡೀ ಸಮಾಜವೆ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಸಂಕುಲಕ್ಕೆ ಅವಮಾನ ಮಾಡಲಾಗಿದೆ. ದೇಶ ಕಾಯುವ ಯೋಧನ ಪತ್ನಿಗೇ ಇಂತಹ ಸ್ಥಿತಿ ಬಂದೊದಿಗಿದರೆ ಜನ ಸಾಮಾನ್ಯರ ಗತಿ ಏನು ಎಂದು ಮೂರ್ತಿ ಪ್ರಶ್ನಿಸಿದರು.

ಮೋದಿಯವರು ಪ್ರಧಾನಿಯಾದ ವೇಳೆ ಭಾರತೀಯರು ಸಾಕಷ್ಟುಕನಸುಗಳನ್ನು ಕಂಡಿದ್ದರು. ಈಗ ಅದೆಲ್ಲ ಪೊಳ್ಳಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದಾಗ ಇಡೀ ದೇಶವೇ ರೊಚ್ಚಿಗೆದ್ದು ನಿಂತಿತು. ಈಗ ಮಣಿಪುರದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರವಾಗುತ್ತಿದೆ. 36 ಇಂಚಿನ ಎದೆ ಇದೆ ಹೇಳುತ್ತಿದ್ದ ದೇಶದ ಪ್ರಧಾನಿ ಮೋದಿಯವರ ಎದೆಗಾರಿಕೆ ಈಗ ಎಲ್ಲಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಗೌಡ ವ್ಯಂಗ್ಯವಾಡಿದರು.

ತಾಲೂಕು ಕಾರ್ಮಿಕ ಮುಖಂಡ ಟಿ.ಎಚ್‌. ಸತೀಶ್‌ ಮಾತನಾಡಿದರು.

ದೇಶವನ್ನು ಕಾಯುವ ಯೋಧನ ಪತ್ನಿಯನ್ನು ಮಣಿಪುರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದರು. ದೇಶವನ್ನು ರಕ್ಷಿಸುವ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲವೆಂದ ಮೇಲೆ ಇಲ್ಲಿ ಸಾಮಾನ್ಯ ಜನರ ಗತಿ ಏನು. ಮಣಿಪುರದ ಘಟನೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಭಾರತದ ಪರಂಪರೆಗೆ ಮಸಿ ಬಳಿಯುವಂತೆ ಮಾಡಿರುವುದು ಇದೊಂದು ಅಮಾನವೀಯ ಘಟನೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಬೇಕಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಲಕ್ಷ್ಮೇದೇವಮ್ಮ ಹೇಳಿದರು.

ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಾ ಕೇಂದ್ರ ಹಾಗೂ ಮಣಿಪುರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಣಿಪುರದ ಕೃತ್ಯ ಖಂಡಿಸಿದರು.

ಮಣಿಪುರದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಅಲ್ಲಿನ ಮಹಿಳೆಯರಿಗೆ ರಕ್ಷಣೆ ನೀಡಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್‌ ವೈ.ಎಂ.ರೇಣುಕುಮಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳಾದ ತಾವರೇಕೆರೆ ಸುರೇಶ್‌, ಬಾಣಸಂದ್ರ ಕೃಷ್ಣಸ್ವಾಮಿ, ಜಗದೀಶ್‌, ರಾಮಣ್ಣ, ಮಾಯಸಂದ್ರ ಸುಬ್ರಮಣಿ, ಶಿವರಾಜ್‌, ಮೂರ್ತಿ, ವೆಂಕಟೇಶ್‌ ಪಾಲ್ಗೊಂಡಿದ್ದರು.