* ಕೋವಿಡ್‌ನಿಂದ ವರ್ಷದ ಹಿಂದೆ ಮೃತಪಟ್ಟಿದ್ದ ತಂದೆ* ತಂದೆಯ ಮೇಣದ ಪ್ರತಿಮೆ ಎದುರು ಸಪ್ತಪದಿ ತುಳಿದ ಮಗ

ನಂಜನಗೂಡು(ಮೇ.08): ವರನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ಶಾಸ್ತ್ರಕ್ಕೆ ಕುಳಿತ ಪ್ರಸಂಗ ತಾಲೂಕಿನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ನಂಜನಗೂಡಿನಲ್ಲಿ ಡಾ.ಯತೀಶ್‌ ಮತ್ತು ಡಾ.ಅಪೂರ್ವ ಮದುವೆ ಇತ್ತು. ವರ ಯತೀಶ್‌ ಅವರ ತಂದೆ ರಮೇಶ್‌ ಒಂದು ವರ್ಷದ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಜ್ಜಂಪುರ ನಿವಾಸಿ ದಿ.ರಮೇಶ್‌ ಅವರ ಪುತ್ರ ಯತೀಶ್‌ ಮೈಸೂರು ಜೆಎಸ್‌ಎಸ್‌ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.

ನಂಜನಗೂಡು ತಾಲೂಕಿನ ಮಲ್ಕುಂಡಿಯ ವಧು ಡಾ. ಅಪೂರ್ವ ಜೊತೆ ಸಪ್ತಪದಿ ತುಳಿದರು. ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದಿದ್ದು, ತಂದೆಯನ್ನು ಕಳೆದುಕೊಂಡಿದ್ದರಿಂದ ತನ್ನ ಮದುವೆಯಲ್ಲಿ ತಂದೆಯ ಪ್ರತಿರೂಪವಾಗಿ ಮೇಣದ ಪ್ರತಿಮೆ ಮಾಡಿಸಿದ್ದರು. ಅದರ ಮುಂದೆಯೇ ಶಾಸ್ತ್ರ ನಡೆಸಿ ಮದುವೆ ಆಗಿದ್ದಾರೆ. ಮದುವೆ ಶಾಸ್ತ್ರ ಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಪೂಜೆಗೆ ಕುಳಿತಿದ್ದರು.

ಮೈಸೂರಲ್ಲೂ ತಲೆ ಎತ್ತಿದೆ ವ್ಯಾಕ್ಸ್‌ ಮ್ಯೂಸಿಯಂ!

ಮೈಸೂರಿನಲ್ಲಿ ದಸರಾ ಅಂಗ​ವಾಗಿ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್‌ ಎಂಬ ಖಾಸಗಿ ಮ್ಯೂಜಿಯಂ ಆರಂಭವಾಗಿದ್ದು, ವಿಶ್ವದ ಪ್ರಮುಖ ಗಣ್ಯರ ಮೇಣದ ಪ್ರತಿರೂಪ ಮೈದಳೆದು ನಿಂತಿವೆ.

ನಗರದ ಮಹಾರಾಣ ಪ್ರತಾಪ್‌ ರಸ್ತೆಯ ಸಿಎಆರ್‌ಪಿ ಮೈದಾನದ ಬಳಿ (ರೇಸ್‌ ಕೋರ್ಸ್‌ ಹಿಂಭಾಗ) ಇರುವ ಸಂಗ್ರಹಾಲಯದಲ್ಲಿ ಮೇಣದ ಪ್ರತಿಮೆಗಳು ಗಮನ ಸೆಳೆಯುತ್ತಿವೆ.

ಲಂಡನ್‌ನ ವಿಶ್ವಪ್ರಸಿದ್ಧ ಮೇಡಂ ಟುಸ್ಸಾದ್‌ ಮ್ಯೂಜಿಯಂ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಶಿರಡಿ ಸಾಯಿ​ಬಾಬಾ, ಪುಟ್ಟಪರ್ತಿ ಸಾಯಿಬಾಬಾ, ಸರ್‌ ಎಂ. ವಿಶ್ವೇ​ಶ್ವ​ರ​ಯ್ಯ, ಭಗತ್‌ ಸಿಂಗ್‌ ಸೇರಿ​ದಂತೆ ಹಲವು ಸೆಲೆಬ್ರಿಟಿಗಳ ಪ್ರತಿ​ಮೆ​ಗಳನ್ನು ಸಿದ್ಧ​ಗೊ​ಳಿ​ಸ​ಲಾ​ಗಿ​ದೆ.

ದುಬೈ ಮ್ಯೂಸಿಯಂನಲ್ಲಿ ಕೊಹ್ಲಿ ಮೇಣದ ಪ್ರತಿಮೆ!

ಲಂಡನ್‌ನ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂ ಇತ್ತೀಚೆಗಷ್ಟೇ ದುಬೈನಲ್ಲಿ ತನ್ನ ಕೇಂದ್ರವೊಂದನ್ನು ಆರಂಭಗೊಳಿಸಿದ್ದು, ಅಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಕ್ರೀಡಾಲೋಕದ ಅನೇಕ ದಿಗ್ಗಜರ ಮೇಣದ ಪ್ರತಿಮೆಗಳನ್ನು ಇರಿಸಲಾಗಿದೆ.

ಟಿ20 ವಿಶ್ವಕಪ್‌ಗೆ ಆಗಮಿಸುವ ಪ್ರೇಕ್ಷಕರನ್ನು ಮ್ಯೂಸಿಯಂಗೂ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಲಿಕರು ತಿಳಿಸಿದ್ದಾರೆ. ಅಲ್ಲದೇ ದುಬೈನ ಪ್ರಮುಖ ಆಕರ್ಷಣೆಗಳಲ್ಲಿ ಈ ಮ್ಯೂಸಿಯಂ ಸಹ ಒಂದಾಗಲಿದೆ ಎಂದಿದ್ದಾರೆ. 2019ರ ಏಕದಿನ ವಿಶ್ವಕಪ್‌ ವೇಳೆ ಲಂಡನ್‌ನ ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ, 2018ರಲ್ಲಿ ದೆಹಲಿಯಲ್ಲಿರುವ ಕೇಂದ್ರದಲ್ಲಿ ಕೊಹ್ಲಿಯ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.