Asianet Suvarna News Asianet Suvarna News

ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಂಸದ ಸುರೇಶ್‌ ಭರವಸೆ

ನಮ್ಮ ಸರ್ಕಾರ ಕೆಂಪೇಗೌಡ ಸ್ಮಾರಕಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಶೀಘ್ರದಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಕರೆತಂದು ಅಭಿವೃದ್ಧಿ ವಿಚಾರವಾಗಿ ಘೋಷಣೆ ಮಾಡುವ ಕೆಲಸ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

Government committed to development of Kempegowdas tomb Says MP DK Suresh gvd
Author
First Published Sep 11, 2023, 9:43 PM IST

ಮಾಗಡಿ (ಸೆ.11): ನಮ್ಮ ಸರ್ಕಾರ ಕೆಂಪೇಗೌಡ ಸ್ಮಾರಕಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಶೀಘ್ರದಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಕರೆತಂದು ಅಭಿವೃದ್ಧಿ ವಿಚಾರವಾಗಿ ಘೋಷಣೆ ಮಾಡುವ ಕೆಲಸ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಪಟ್ಟಣದ ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿಯಿಂದ ಕೆಂಪೇಗೌಡರ 514ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ನಾವೇ ಮುಂದಾಗಿದ್ದು ಜೊತೆಗೆ ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದೇವೆ. ಕೋಟೆ ಅಭಿವೃದ್ಧಿ ಕೆಂಪೇಗೌಡರ ಸಮಾಧಿಯ ಅಭಿವೃದ್ಧಿ ಜೊತೆಗೆ ಮುಂದಿನ ವರ್ಷದಿಂದ ಒಕ್ಕಲಿಗರ ಸಂಘ ಹಾಗೂ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಸಮಿತಿ ಒಟ್ಟಾಗಿ ಸೇರಿ ಮಾಗಡಿಯಲ್ಲೇ ಕೆಂಪೇಗೌಡರ ಜಯಂತಿ, ಆಚರಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದರು.

ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್-ಬಿಜೆಪಿ ಮೈತ್ರಿ: ಕಾಂಗ್ರೆಸ್‌ಗೆ ತೊಂದರೆ ಇಲ್ಲವೆಂದ ಸಂಸದ ಸುರೇಶ್

ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಡಿಕೆ ಸಹೋದರರು ಕೆಂಪೇಗೌಡರ ಸ್ಮಾರಕಗಳ ಅಭಿವೃದ್ಧಿಗೆ ಬದ್ಧರಾಗಬೇಕು. ಕೆಂಪೇಗೌಡರ ಸಮಾಧಿ ಸ್ಥಳವನ್ನು 20 ಎಕರೆ ಜಾಗ ವಶಪಡಿಸಿಕೊಂಡು ಅಲ್ಲಿ ಐತಿಹಾಸಿಕ ಪ್ರವಾಸಿ ತಾಣವಾಗಿ ಮಾಡಬೇಕು. ಹಲವು ವರ್ಷಗಳಿಂದಲೂ ಕೆಂಪೇಗೌಡರ ಕೋಟೆ ಕಾಮಗಾರಿ ಮುಗಿದಿಲ್ಲ. ಈ ಬಾರಿ ಕಾಮಗಾರಿ ಮುಗಿಸಿ ಕೆಂಪೇಗೌಡರ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಿದೆ. ಕೆಂಪೇಗೌಡರ ಆದರ್ಶ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಕಳೆದ 23 ವರ್ಷಗಳಿಂದಲೂ ಎಚ್.ಎಂ.ಕೃಷ್ಣಮೂರ್ತಿ ಕೆಂಪೇಗೌಡರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಅವರ ಆಶೀರ್ವಾದ ನನ್ನ ಮೇಲೆ ಇದ್ದ ಪರಿಣಾಮ ನಾನು ಐದನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಾಲ್ಕು ಬಾರಿ ಗೆಲುವಿಗಿಂತಲೂ ಈ ಬಾರಿಯ ಗೆಲುವು ನನಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದೆ. ನಾವು ರಾಜಕೀಯವಾಗಿ ವಿರೋಧಿಗಳಾಗಿದ್ದರೂ ಈ ಬಾರಿ ನಾವು ಒಂದಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬದ್ಧರಿದ್ದೇವೆ. ಕೋಟೆ ಅಭಿವೃದ್ಧಿಗೆ ಈಗಾಗಲೇ 8 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್

ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ತಾಲೂಕಿನ ಹುಚ್ಚನಮೇಗೌಡನ ಪಾಳ್ಯದ ಕಾಳಭೈರವೇಶ್ವರ ಸ್ವಾಮಿ ದೇವಸ್ಥಾನದಿಂದ ಮಾಗಡಿಯವರೆಗೂ ಕೆಂಪೇಗೌಡರ ಕಂಚಿನ ಪುತ್ಥಳಿಗೆ ವಿಶೇಷ ಪೂಜೆ, ಪಟ್ಟಣದ ಕೆಂಪೇಗೌಡರ ಪ್ರತಿಮೆವರೆಗೂ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಂಜಾವದೂತ ಸ್ವಾಮೀಜಿ, ಸೌಮ್ಯಾನಂದನಾಥ ಸ್ವಾಮೀಜಿ, ಚಕ್ರಬಾವಿಯ ಸಿದ್ದಲಿಂಗಯ್ಯ ಸ್ವಾಮೀಜಿ, ಕಳ್ಳಿಪಾಳ್ಯ ಮಠದ ರಂಗನಾಥ ಸ್ವಾಮೀಜಿ, ಗುಮ್ಮಸಂದ್ರ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ, ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ, ಖಜಾಂಚಿ ಮಾರೇಗೌಡ, ಮುಖಂಡರಾದ ಎಂ.ಕೆ.ಧನಂಜಯ್ಯ, ಜೆ.ಪಿ.ಚಂದ್ರೇಗೌಡ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಬಿಬಿಎಂಪಿ ಮಾಜಿ ಉಪಪೌರರಾದ ರಂಗಣ್ಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Follow Us:
Download App:
  • android
  • ios