ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಅಸೆಂಬ್ಲಿಗೆ ಕಳುಹಿಸುವ ಮೂಲಕ ತಾಲೂಕಿನ ಜನಸೇವೆಗೆ ಅವಕಾಶ ಕಲ್ಪಿಸಿ ಕೂಡಿ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಕಾರ್ಯಕರ್ತರಿಗೆ ಮನವಿ ಮಾಡಿದರು.

 ಪಾವಗಡ : ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಅಸೆಂಬ್ಲಿಗೆ ಕಳುಹಿಸುವ ಮೂಲಕ ತಾಲೂಕಿನ ಜನಸೇವೆಗೆ ಅವಕಾಶ ಕಲ್ಪಿಸಿ ಕೂಡಿ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಕಾರ್ಯಕರ್ತರಿಗೆ ಮನವಿ ಮಾಡಿದರು.

ತಾಲೂಕು ಯುವ ಕಾಂಗ್ರೆಸ್‌ ವತಿಯಿಂದ ಭಾನುವಾರ ನಗರದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಲೂಕು ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ಕಳೆದ 35 ವರ್ಷಗಳಿಂದ ನಮ್ಮ ತಂದೆ ಶಾಸಕ ವೆಂಕಟರಮಣಪ್ಪ ನಿಮ್ಮ ಸೇವೆಗೆ ಮುಡುಪಾಗಿದ್ದಾರೆ. 2013ರ ಚುನಾವಣೆಯಲ್ಲಿ ಸ್ವಲ್ಪ ಅಂತರದಲ್ಲಿ ಸೋಲು ಕಂಡಿದ್ದೇನೆ. ನಾನು ಗೆದ್ದಿದ್ದರೆ ತಾಲೂಕಲ್ಲಿ ಇನ್ನೂ ನೂರು ಕೋಟಿ ಅಭಿವೃದ್ಧಿ ಕೆಲಸವಾಗುತ್ತಿತ್ತು. ಸೋತಿದ್ದೇನೆ ಅಂತಾ ಮನೆಯಲ್ಲಿ ಕೂರಲಿಲ್ಲ. ಅಂದಿನಿಂದಲೂ ನಿಮ್ಮ ಸೇವೆಯಲ್ಲಿ ನಿರತನಾಗಿದ್ದೇನೆ. ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಮಾಜಿ ಶಾಸಕ ತಿಮ್ಮರಾಯಪ್ಪ ನಾನು ಬಡವ ಎಂದು ಹೇಳಿಕೊಂಡೇ ಜನರನ್ನು ಮರಳು ಮಾಡುತ್ತಿದ್ದಾರೆ. ಕುಮಾರಸ್ವಾಮಿಯದ್ದು ಕಣ್ಣೀರಿಡುವ ದೊಡ್ಡ ನಾಟಕ ಕಂಪನಿ ಇದ್ದಂತೆ ಎಂದರು.

ಕೋವಿಡ್‌ ವೇಳೆ ಸಾವಿರಾರು ಕುಟುಂಬಗಳಿಗೆ ಆಹಾರ ಧಾನ್ಯಗಳ ವಿತರಣೆ, ಆಸ್ಪತ್ರೆಯ ರೋಗಿಗಳಿಗೆ ಊಟ, ತಿಂಡಿ ಹಾಗೂ ಕೋವಿಡ್‌ನಿಂದ ಮೃತರಾದ 250 ಮಂದಿ ಬಡಕುಟುಂಬಗಳಿಗೆ ಗುಂಡಿ ತೊಡಲು ಜೆಸಿಬಿ, ಶವಸಂಸ್ಕಾರಕ್ಕೆ ತಲಾ 5 ಸಾವಿರ ಸಹಾಯ ಹಸ್ತ, ಸರ್ಕಾರಿ ಆಸ್ಪತ್ರೆಗೆ ಉಚಿತ ಎರಡು ಆ್ಯಂಬೂಲೆನ್ಸ್‌, ರೋಗಿಗಳಿಗೆ ಆಸ್ಪತ್ರೆಯ ಖರ್ಚು ಮತ್ತು ಶುಭಸಮಾರಂಭಗಳಿಗೆ ಅರ್ಥಿಕ ಸಹಾಯ ಮಾಡುತ್ತಲೇ ಬಂದಿದ್ದೇನೆ. ನನ್ನ ಸೇವೆ ಬಗ್ಗೆ ಅನುಕಂಪ ವಿಶ್ವಾಸವಿದ್ದರೆ ಚುನಾವಣೆಯಲ್ಲಿ ಗೆಲ್ಲಿಸಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ ಕೊಡಿ. ನೀವು ನಿರಾಕರಿಸಿದರೆ ನನ್ನ ದಾರಿ ಹಿಡಿದು ತೋಟದ ಕೆಲಸಕ್ಕೆ ಹೋಗುತ್ತೇನೆ ಎಂದು ಭಾವುಕರಾದರು.

ರಾಜ್ಯ ಕೆಪಿಪಿಪಿ ವಕ್ತಾರ ನಿಖಿತ್‌ರಾಜ್‌ ಮೌರ್ಯ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿಹುಲಿಕುಂಟೆ ಮಠ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಸುದೇಶ್‌ ಬಾಬು ವೆಂಕಟೇಶ್‌ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಧನಲಕ್ಷ್ಮೇ, ತಾಲೂಕು ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ರಾಮಾಂಜಿನಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಸುಮಾ ಅನಿಲ್‌, ಹಿರಿಯ ಮುಖಂಡರಾದ ಎ.ಶಂಕರರೆಡ್ಡಿ, ಪ್ರಮೋದ್‌ಕುಮಾರ್‌, ಪುರಸಭೆ ಸದಸ್ಯರಾದ ಪಿ.ಎಚ್‌.ರಾಜೇಶ್‌, ರವಿ, ಶಶಿಕಲಾ ಬಾಲಾಜಿ, ವೇಲುರಾಜ್‌, ಗೀತಮ್ಮ, ವೆಂಕಟರಮಣಪ್ಪ, ಮಹಮ್ಮದ್‌ ಇಮ್ರಾನ್‌, ಎಂ.ಎಸ್‌.ವಿಶ್ವನಾಥ್‌, ಬಾಲಸುಬ್ರಹ್ಮಣ್ಯಂ, ಬಾಲಾಜಿ, ಮಹಿಳಾ ಘಟಕದ ವೀಣಮ್ಮ, ಸುಮಾ ಅನಿಲ್‌, ಉಷಾರಾಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾಲೂಕು ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಸುಜಿತ್‌, ಹೊಸಹಳ್ಳಿ ಮಂಜುನಾಥ್‌, ಬಂಧು ಮಾದವ್‌ರಾವ್‌, ಕನಕಲಬಂಡೆ ಅನಿಲ್‌ಕುಮಾರ್‌, ಓಂಕಾರನಾಯಕ, ಚಂದ್ರು, ರೊಪ್ಪ ಹನುಮಂತ್‌, ಕನ್ನಮೇಡಿ ಸುರೇಶ್‌, ಹನುಮಯ್ಯನಪಾಳ್ಯ ಈರಣ್ಣ, ಬಿಳಿ ನಾಗೇಂದ್ರಪ್ಪ, ಪಾಪಣ್ಣ, ಹನುಮೇಶ್‌ ಪಾಪಣ್ಣ, ವಿ.ಎಚ್‌.ಹರೀಶ್‌, ದೇವರಾಜ್‌, ಮಂಜುನಾಥ್‌, ಲೋಕೇಶ್‌, ರೊಪ್ಪ ಹನುಮಂತ್‌, ಪಿ.ಎಲ….ಮಣಿ, ಅನಿಲ್‌ಕುಮಾರ್‌, ನಾಗೇಂದ್ರಪ್ಪ, ಕಿರಣ್‌ಕುಮಾರ್‌ ಮತ್ತು ಕಾಂಗ್ರೆಸ್‌ನ ಯುವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜನಪರ ಪ್ರಗತಿ ಕಾಂಗ್ರೆಸ್‌ನಿಂದ ಸಾಧ್ಯ. ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಅತ್ಯಧಿಕ ಮತಗಳಿಂದ ವೆಂಕಟೇಶ್‌ ಗೆಲುವಿಗೆ ಸಹಕರಿಸಿ. ರಾಜಕಾರಣದಿಂದ ನಿವೃತ್ತಿ, ಸೇವೆಯಿಂದ ನಿವೃತ್ತಯಾಗಲ್ಲ. ವೆಂಕಟೇಶ್‌ ಗೆದ್ದರೂ ನಿಮ್ಮ ಸೇವೆಗೆ ಬದ್ಧರಾಗಿ ಕೆಲಸ ಮಾಡುವೆ.

ವೆಂಕಟರಮಣಪ್ಪ ಶಾಸಕ