ಇನ್ನಷ್ಟು ಅಭಿವೃದ್ಧಿಗೆ ಬಲ ನೀಡಿ: ತಮ್ಮಣ್ಣ
ನಾನು ಕ್ಷೇತ್ರಕ್ಕೆ ನಾಯಕನಾಗಲು ಬಂದವನಲ್ಲ. ಜನರ ಸೇವಕನಾಗಿ ಬಂದವನು. ಈಗಲೂ ಸೇವಕನಾಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಭಾರತೀನಗರ : ನಾನು ಕ್ಷೇತ್ರಕ್ಕೆ ನಾಯಕನಾಗಲು ಬಂದವನಲ್ಲ. ಜನರ ಸೇವಕನಾಗಿ ಬಂದವನು. ಈಗಲೂ ಸೇವಕನಾಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಚಿಕ್ಕರಸಿನಕೆರೆ ಗ್ರಾಮದಲ್ಲಿ ಚಿಕ್ಕರಸಿನಕೆರೆ ಮಾರ್ಗವಾಗಿ ಹುಣ್ಣನದೊಡ್ಡಿಗೆ ಸೇರುವ 1.25 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದಲ್ಲಿ ಜನರು ನನಗೆ ನೀಡಿರುವ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ನಾನಾ ಮೂಲಗಳಿಂದ ಅಗತ್ಯ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಇಂತಹ ಶಕ್ತಿಯನ್ನು ಜನರು ಮುಂದೆಯೂ ಸಹ ನನಗೆ ನೀಡಿದರೆ ಮತ್ತುಷ್ಟುಅಭಿವೃದ್ಧಿ ಕಾರ್ಯದಲ್ಲಿ ತೊಡಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ನೀರಾವರಿ, ಶಿಕ್ಷಣ, ನಾಲೆಗಳ ಆಧುನೀಕರಣ, ರಸ್ತೆ ಅಭಿವೃದ್ಧಿ ಇನ್ನಿತರೆ ಯೋಜನೆ ಕೈಗೊಂಡು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತಿದ್ದೇನೆ. ರಾಜಕಾರಣ ಮಾಡುವುದು ಮೋಜಿಗಾಗಿ ಅಥವಾ ಹಣ ಮಾಡುವುದಕ್ಕಾಗಿ ಅಲ್ಲ. ಅಭಿವೃದ್ಧಿ ಚಿಂತನೆ, ಉಳ್ಳವರು ರಾಜಕಾರಣಕ್ಕೆ ಬರಬೇಕು. ಆಗ ಮಾತ್ರ ನಮ್ಮ ರಾಜ್ಯ ಅಭಿವೃದ್ಧಿ ಕಾಣುತ್ತದೆ ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರೈತರ ಅಭಿವೃದ್ಧಿಗಾಗಿ ಹಗಲಿರುಳು ರಾಜಕಾರಣ ಮಾಡಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದರೆ ರೈತರ ಸಮಸ್ಯೆ ದೂರವಾಗುವುದು ನಿಶ್ಚಿತ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರಷ್ಟೇ ರೈತ ಸಮುದಾಯಕ್ಕೆ ಉಳಿಗಾಲ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿದರು. ನಂತರ ಕ್ಯಾತಘಟ್ಟಗ್ರಾಮದಿಂದ ಮಠದದೊಡ್ಡಿ ಗ್ರಾಮಕ್ಕೆ ಸೇರುವ ರಸ್ತೆಗೆ 75 ಲಕ್ಷ, ಬೊಮ್ಮನದೊಡ್ಡಿ ಗ್ರಾಮದಿಂದ ತೊರೆಬೊಮ್ಮನಹಳ್ಳಿ ಗ್ರಾಮಕ್ಕೆ ಸೇರುವ ರಸ್ತೆಗೆ 75 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ಜೆಡಿಎಸ್ ತಾಲೂಕು ಉಪಾಧ್ಯಕ್ಷ ಎಚ್.ಎಂ.ಮರಿಮಾದೇಗೌಡ, ಗುರುದೇವರಹಳ್ಳಿ ಅರವಿಂದ್, ನಿಂಗಣ್ಣ, ರಾಮಕೃಷ್ಣ, ಮುತ್ತುರಾಜು, ಬೊಮ್ಮೇಗೌಡ, ಪ್ರಶಾಂತ್, ಸಿದ್ದರಾಜು, ಮಹೇಶ್, ಮೂರ್ತಿ, ಜ್ಯೋಗಿಗೌಡ, ಕ್ಯಾತಘಟ್ಟದ ತಿಮ್ಮರಾಜು, ಗಿರೀಶ್, ಕೆ.ಟಿ.ಸುರೇಶ್, ಅಪ್ಪೇಗೌಡ, ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷೆ ಸಿದ್ದಲಕ್ಷ್ಮಮ್ಮ, ಮಾಜಿ ಉಪಾಧ್ಯಕ್ಷ ಶಿವನಂಜು, ಸದಸ್ಯ ಸಿದ್ದರಾಜು, ನಿರೂಶ, ಜೀವಿತ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಕೆಂಪೇಗೌಡ, ಶಿವಲಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷ ಪ್ರಕಾಶ್, ಲಿಂಗಯ್ಯ, ಚನ್ನೇಗೌಡ, ಉಮೇಶ್, ಸಿದ್ದರಾಜು, ಅಜ್ಜಹಳ್ಳಿ ರಾಜೇಶ್, ಬಿ.ಬಸವರಾಜು, ಗುತ್ತಿಗೆದಾರ ಕೆಂಗಲ್ಗೌಡ, ಎಂಜಿನಿಯರ್ ಪ್ರಶಾಂತ್ ಸೇರಿದಂತೆ ಹಲವರಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ತರಲು ಯತ್ನ
ಮೈಸೂರು : ಕಾಂಗ್ರೆಸ್ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲು ದುಡಿಯುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಕುಮಾರ್ ಸಾಗರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅವರಿಂದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಆದೇಶ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ನಾನು ಸಹ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಸಿದ್ದರಾಮಯ್ಯ ಅವರು ಸಿದ್ದೇಗೌಡರಿಗೆ ಟಿಕೆಟ್ ಕೊಡುತ್ತೇವೆ ಅವರನ್ನು ಗೆಲ್ಲಿಸಿಕೊಂಡು ಬನ್ನಿರಿ ಎಂದು ಆದೇಶ ನೀಡಿದ್ದಾರೆ. ಅವರ ಆದೇಶದಂತೆ ಸಿದ್ದೇಗೌಡರನ್ನು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ಉಮಾಶಂಕರ್, ಶಿವಕುಮಾರ್, ರಾಜೇಂದ್ರಪ್ರಸಾದ್, ಶಿವಕುಮಾರ್, ರವಿಕುಮಾರ್, ಚೆನ್ನಾಜಮ್ಮ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಕಾಗಿಲ್ಲ
ಬೆಂಗಳೂರು (ಮಾ.31): ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಕಾಗಿಲ್ಲ, ತಾಕತ್ತಿದ್ದರೆ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿಎರಡು ಸೀಟು ತರಲಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕುರಿತು ಸಿದ್ದರಾಮಯ್ಯ ಹೇಳಿಕೆಯು ವಿಶ್ವದ ಎಂಟನೇ ಅದ್ಭುತ. ಜೆಡಿಎಸ್ನಲ್ಲಿ ಯಾರು ಪಾಳೆಗಾರಿಕೆ ಮಾಡಿದರು ಎಂಬುದು ಗೊತ್ತಿದೆ. ಅವರು ನಮ್ಮ ಪಕ್ಷದಲ್ಲಿದ್ದಾಗ ನಾವು ಸ್ಟೇಜ್ ಹಾಕಬೇಕಿತ್ತು, ಜನ ಸೇರಿಸಬೇಕಿತ್ತು.