ಜರ್ಮನಿಗೆ ಹೊರಟಿದ್ದ ವಿಮಾನ ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ
ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ| ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ| ಪೈಲಟ್ ಸಮಯ ಪ್ರಜ್ಞೆಯಿಂದ ಸುರಕ್ಷಿತರಾದ ಎಲ್ಲ 78 ಪ್ರಯಾಣಿಕರು|
ಬೆಂಗಳೂರು(ನ.06): ಜರ್ಮನಿ ಮೂಲದ ಲುಫ್ತಾನ್ಸಾ ಏರ್ಲೈನ್ನ ‘ಎಲ್ಎಚ್ 755’ ಸಂಖ್ಯೆಯ ‘ಬೆಂಗಳೂರು-ಫ್ರಾಂಕ್ಫರ್ಟ್’ ಮಾರ್ಗದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ಬೆಳಗ್ಗೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಜರುಗಿದೆ.
ಮುಂಜಾನೆ ಈ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದೆ. ಇದಾದ ಕೆಲವೇ ನಿಮಿಷದಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಮಯ ಪ್ರಜ್ಞೆ ಮರೆದಿರುವ ಪೈಲಟ್ ಸುಮಾರು ಒಂದು ಗಂಟೆ ಕಾಲ ಆಕಾಶದಲ್ಲೇ ವಿಮಾನವನ್ನು ಸುತ್ತು ಹಾಕಿಸಿ ಬಳಿಕ ಸುರಕ್ಷಿತವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ.
ಗೋವಾಕ್ಕೆ ಹೊರಟಿದ್ದ ವಿಮಾನ ಬೆಂಗ್ಳೂರಲ್ಲಿ ತುರ್ತು ಭೂಸ್ಪರ್ಶ
ಈ ವಿಮಾನದಲ್ಲಿದ್ದ 78 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೆಲ ಸಮಯದ ಬಳಿಕ ವಿಮಾನ ಕಂಪನಿ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ಪ್ರಯಾಣಿಕರು ಫ್ರಾಂಕ್ಫರ್ಟ್ಗೆ ತೆರಳಲು ಅವಕಾಶ ಕಲ್ಪಿಸಿತು ಎಂದು ಕೆಐಎಎಲ್ ಮೂಲಗಳು ತಿಳಿಸಿವೆ.