Asianet Suvarna News Asianet Suvarna News

ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ

ಕೆಎಸ್ಆರ್‌ಟಿಸಿ ಬಸ್ ಅಪಘಾತದಿಂದ ಜಖಂಗೊಂಡಿದ್ದ ಮಡಿಕೇರಿ ನಗರದ ಹೃದಯ ಭಾಗದಲ್ಲಿದ್ದ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು 180 ದಿನಗಳ ಬಳಿಕ ಮತ್ತೆ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. 

Gen Thimayyas statue to be reinstalled in Madikeri on March 8 rav
Author
First Published Mar 8, 2024, 10:35 PM IST

ರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.8) : ಕೆಎಸ್ಆರ್‌ಟಿಸಿ ಬಸ್ ಅಪಘಾತದಿಂದ ಜಖಂಗೊಂಡಿದ್ದ ಮಡಿಕೇರಿ ನಗರದ ಹೃದಯ ಭಾಗದಲ್ಲಿದ್ದ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು 180 ದಿನಗಳ ಬಳಿಕ ಮತ್ತೆ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. 

ಮೈಸೂರಿನ ಶಿಲ್ಪಕಲಾ ಅಕಾಡೆಮಿಯಲ್ಲಿ ಸರಿಪಡಿಸಿದ ತಿಮ್ಮಯ್ಯ ಅವರ ಪ್ರತಿಮೆಯನ್ನು ಮೈಸೂರಿನಿಂದ ಮಡಿಕೇರಿಗೆ ತರುತ್ತಿದ್ದಂತೆ ಮಡಿಕೇರಿಯ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಅದ್ಧೂರಿಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮಡಿಕೇರಿ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಾರ್ಷಲ್ ನಂದಾ ಕಾರ್ಯಪ್ಪ, ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಎಂ.ಸಿ. ನಾಣಯ್ಯ ಸೇರಿದಂತೆ ನಿವೃತ ಸೇನಾಧಿಕಾರಿಗಳು ತಿಮ್ಮಯ್ಯ ಅವರ ಪ್ರತಿಮೆಯನ್ನು ಹೊತ್ತು ಬಂದ ಜಾಥಾದ ವಾಹನವನ್ನು ಸ್ವಾಗತಿಸಿದರು. 

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಉರುಳಿಬಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ!

ಕೊಡವ ಧಿರಿಸಿನಲ್ಲಿ ಹತ್ತಾರು ಮಹಿಳೆಯರು ದೀಪ ಬೆಳಗಿಸಿ ಜಾಥವನ್ನು ಬರಮಾಡಿಕೊಂಡರು. ಬಳಿಕ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೆ ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಅದ್ಧೂರಿ ಮೆರವಣಿಗೆಯಲ್ಲಿ ಸಾಗಿ ತಿಮ್ಮಯ್ಯ ಅವರ ಪ್ರತಿಮೆಯನ್ನು ಬರಮಾಡಿಕೊಳ್ಳಲಾಯಿತು. 

ಮಾಜಿ ಮಂತ್ರಿಗಳಾದ ಎಂ.ಸಿ.ನಾಣಯ್ಯ ಅವರ ಮುಂದಾಳತ್ವದಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಿಲ್ಲೆಯ ವೀರ ಸೇನಾನಿ, ಪದ್ಮ ಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯ ಪುನರ್ ಸ್ಥಾಪನೆ ಮಾಡಲಾಯಿತು. ಪ್ರತಿಮೆಯನ್ನು ಮಾರ್ಷಲ್ ನಂದಾ ಕಾರ್ಯಪ್ಪ ಅವರು ಅನಾವರಣಗೊಳಿಸಿದರು. ಪ್ರತಿಮೆ ಅನಾವರಣಗೊಳ್ಳುತ್ತಿದ್ದಂತೆ ಪೊಲೀಸ್ ಬ್ಯಾಂಡಿನೊಂದಿಗೆ ಗೌರವ ನಮನ ಸಲ್ಲಿಸಲಾಯಿತು. 

ಟೋಲ್ ಗೇಟ್ನಲ್ಲಿ ತಿಮ್ಮಯ್ಯ ಪ್ರತಿಮೆಯನ್ನು 50 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿತ್ತು. ಮಾಜಿ ಸೈನಿಕರು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್ಪಿ ರಾಮರಾಜನ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು. 

‘ನಾನು ಭಾರತೀಯ ಎನ್ನುವುದು ಮೊದಲು’- ವೀರ ಸೇನಾನಿಯ ಪ್ರತಿಮೆ ಅನಾವರಣಗೊಳಿಸಿದ ಏರ್ ಮಾರ್ಷಲ್(ನಿ) ನಂದಾ ಕಾರ್ಯಪ್ಪ  ಮಾತನಾಡಿ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ತಮ್ಮ ಸೈನ್ಯದ ಅತ್ಯಪೂರ್ವವಾದ ಕಾರ್ಯ ವೈಖರಿಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗೌರವಾದರಗಳನ್ನು ಪಡೆದ ಮಹಾನ್ ಸೇನಾನಿಯಾಗಿದ್ದಾರೆ ಎಂದರು. 

ಜನರಲ್ ತಿಮ್ಮಯ್ಯ ಅವರು ಬದುಕಿನುದ್ದಕ್ಕೂ ‘ನಾನು ಭಾರತೀಯ ಎನ್ನುವುದು ಮೊದಲು. ಉಳಿದೆಲ್ಲವೂ ನಂತರದ್ದು’ ಎನ್ನುವ ಮಹಾನ್ ಚಿಂತನೆ ಹೊಂದಿದ್ದರು. ಅಂತಹ ಉದಾತ್ತ ಚಿಂತನೆ ಯುವ ಸಮೂಹದ್ದಾಗಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು. ವೀರಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಉದಾತ್ತ ಚಿಂತನೆಗಳು ಯುವ ಸಮೂಹಕ್ಕೆ ಪ್ರೇರಣಾದಾಯವಾಗಿರಲಿ ಎನ್ನುವ ಚಿಂತನೆಗಳಡಿ 1973 ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಎಂ.ಸಿ. ನಾಣಯ್ಯ ಅವರು ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರೆಂದು ಸ್ಮರಿಸಿದರು. 

Gen Thimayyas statue to be reinstalled in Madikeri on March 8 rav

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ.ಬಿ.ಎ. ಕಾರ್ಯಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರೊಬ್ಬ ಮಹಾನ್ ಸೈನಿಕರಾಗಿದ್ದವರೆಂದು ಬಣ್ಣಿಸಿದರು. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರು ದೇಶಕ್ಕೆ ಕೀರ್ತಿ ತಂದ ವೀರ ಸೇನಾನಿಯಾಗಿದ್ದಾರೆ. ಅವರ ತತ್ವ, ಮಾರ್ಗದರ್ಶನ ನಮ್ಮೆಲ್ಲರಿಗೂ ಆದರ್ಶವಾಗಿದೆಯೆಂದರು. ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ,  ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಇರುವ ಈ ವೃತ್ತ ವೀರ ಸೇನಾನಿಯ ಹೆಸರಿನಲ್ಲೆ ಕರೆಯಲ್ಪಡುವಂತಾಗಬೇಕು ಎಂದು ಮನವಿ ಮಾಡಿದರು.   

ನನಗೆ ಟಿಕೆಟ್ ಸಿಗುವುದು ನಿಶ್ಚಿತ, ಪ್ರತಾಪ್ ಸಿಂಹ ಸೋಲು ಖಚಿತ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ದೇಶ ಕಂಡ ಅಪ್ರತಿಮ ವೀರ ಸೇನಾನಿ ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಯೊಂದಿಗೆ, ಈ ವೃತ್ತ ಅವರ ಹೆಸರಿನಲ್ಲೆ ಗುರುತಿಸಲ್ಪಡುವ ನಿಟ್ಟಿನಲ್ಲಿ ನಗರಸಭೆ ಮತ್ತೊಮ್ಮೆ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು. 

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ವೀರಸೇನಾನಿಯ ಪ್ರತಿಮೆ ಮರು ಸ್ಥಾಪನೆಗೆ ಕಾರಣರಾದವರನ್ನು ಸ್ಮರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸಿ ಸಜ್ಜುಗೊಳಿಸಲಾಗಿದ್ದು, ವೃತ್ತವನ್ನು 13.50 ಲಕ್ಷ ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ ಎಂದರು.

Follow Us:
Download App:
  • android
  • ios