ಕೊರೋನಾ ಭೀತಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಚಿತ್ರ ವಿಚಿತ್ರ ರೋಗಗಳ ಆರ್ಭಟ ಹೆಚ್ಚಾಗಿದೆ. ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. 

ಬೆಂಗಳೂರು [ಮಾ.05] : ಮಾರಣಾಂತಿಕ ಕೊರೋನಾ ಸೋಂಕಿನ ಭೀತಿ ಆವರಿಸಿರುವ ಬೆನ್ನಲ್ಲೇ ಕರುಳು ಬೇನೆ, ಎಚ್‌1ಎನ್‌1 ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ನೆರೆಯ ಕೇರಳದಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದ್ದು, ಇದರಿಂದ ರಾಜ್ಯದಲ್ಲೂ ನಡುಕ ಹುಟ್ಟಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈದರಾಬಾದ್‌ ಮೂಲದ ಕೊರೋನಾ ಸೋಂಕಿತ ಟೆಕ್ಕಿ ಬೆಂಗಳೂರಿನಲ್ಲಿ ಎರಡು ದಿನ ವಾಸವಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನರಲ್ಲಿ ಭೀತಿ ಆವರಿಸಿದೆ. ಇದೀಗ ರಾಜ್ಯಾದ್ಯಂತ ಕರುಳು ಬೇನೆ ಸೋಂಕು ಉಲ್ಬಣಿಸಿದೆ. ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಕರಳುಬೇನೆ ಪ್ರಕರಣಗಳು ವರದಿಯಾಗಿದ್ದು, ಸುಮಾರು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಶುಕ್ರವಾರ ಬೆಂಗಳೂರಿನ ಐಸೊಲೇಷನ್‌ ಆಸ್ಪತ್ರೆ ಒಂದರಲ್ಲೇ ಬರೋಬ್ಬರಿ 85 ಪ್ರಕರಣಗಳು ದೃಢಪಟ್ಟಿವೆ. ಬಹುತೇಕರು ಮಹದೇವಪುರ ಹಾಗೂ ಮಾರತ್‌ಹಳ್ಳಿ ವ್ಯಾಪ್ತಿಯವರಾಗಿದ್ದು, ಒಂದೇ ಬಾರಿ ಇಷ್ಟೂಮಂದಿಗೆ ಗ್ಯಾಸ್ಟ್ರೋ ಎಂಟರೈಟಿಸ್‌ ಉಂಟಾಗಲು ನಿಖರ ಕಾರಣ ತಿಳಿದುಬಂದಿಲ್ಲ.

ಸಿಟಿ ಲೈಫ್‌ ಮೇಲೂ ಕೊರೋನಾ ಕರಿನೆರೆಳು...

ಸಿಟಿಯಲ್ಲೇ ಸೋಂಕಿತರು ಹೆಚ್ಚು: ರಾಜ್ಯದಲ್ಲಿ ಎಚ್‌1ಎನ್‌1 (ಹಂದಿಜ್ವರ) ಸೋಂಕು ಸಹ ಹೆಚ್ಚಾಗಿದ್ದು, ಕಳೆದ ಎರಡು ವಾರದಲ್ಲಿ ಮೂರು ಮಂದಿಯನ್ನು ಬಲಿ ಪಡೆದಿದೆ. 252 ಮಂದಿಗೆ ಎಚ್‌1ಎನ್‌1 ದೃಢಪಟ್ಟಿದ್ದು, ದಾವಣಗೆರೆ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತ ಜಿಲ್ಲೆಯಲ್ಲಿ ತಲಾ ಒಬ್ಬರು ಮೃಪಟ್ಟಿದ್ದಾರೆ. ಬೆಂಗಳೂರು ಒಂದರಲ್ಲೇ ಅತೀ ಹೆಚ್ಚು (120) ಪ್ರಕರಣಗಳು ವರದಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 85 ಪ್ರಕರಣ ದೃಢಪಟ್ಟಿವೆ. 2018ರಲ್ಲಿ 1,733 ಸೋಂಕಿತರಲ್ಲಿ 87 ಮಂದಿ ಹಾಗೂ 2019ರಲ್ಲಿ 2030 ಸೋಂಕಿತರಲ್ಲಿ 96 ಮಂದಿ ಮೃತಪಟ್ಟಿದ್ದರು.

ಗ್ಯಾಸ್ಟ್ರೋ ಎಂಟರೈಟಿಸ್‌ ಸಮಸ್ಯೆ ಹಿನ್ನೆಲೆಯಲ್ಲಿ 80ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲು ಕಾಲರಾ ಎಂದು ಶಂಕಿಸಿದ್ದರೂ ಬಳಿಕ ಕರುಳು ಬೇನೆ ಎಂಬುದು ಸ್ಪಷ್ಟವಾಗಿದೆ. ಎಲ್ಲರಿಗೂ ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ.

- ಡಾ. ಅನ್ಸರ್‌ ಅಹಮದ್‌, ವೈದ್ಯಾಧಿಕಾರಿಗಳು, ಬೆಂಗಳೂರು ಸಾಂಕ್ರಾಮಿಕ ರೋಗಗಳ ಆಸ್ಪತ್ರೆ