ಒಂದು ವರ್ಷದೊಳಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಹೇರೂರು ರಸ್ತೆಯ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಗಂಗಾವತಿ (ಮೇ.02): ಒಂದು ವರ್ಷದೊಳಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಹೇರೂರು ರಸ್ತೆಯ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 5 ಎಕರೆ ಪ್ರದೇಶವನ್ನು ಬಸ್ ನಿಲ್ದಾಣಕ್ಕೆ ತೆಗೆದುಕೊಳ್ಳಲಾಗಿದೆ. ಈ ಜಾಗೆಯಲ್ಲಿ 20 ಕೋಟಿ ರು ವೆಚ್ಚದ ಸೆಟ್ ಲೈಟ್ ಕಾಮಗಾರಿ ಪ್ರಾರಂಭವಾಗಲಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಮಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ ಎಂದರು.

ಸಿಬಿಎಸ್ ವೃತ್ತದಿಂದ ಬಸವೇಶ್ವರ ನಗರದವರಿಗೂ 4 ಲೈನ್ ರಸ್ತೆ ಕೈಗೆತ್ತಿಕೊಳ್ಳಲಾಗಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಕಲ್ಬುರ್ಗಿ ನಂತರ ಎರಡನೆ ಬಸ್ ನಿಲ್ದಾಣ ಇದಾಗಿದೆ ಎಂದರು. ಸುಂದರ ಬಸ್ ನಿಲ್ದಾಣ ಜೊತೆಗ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ ಬಸ್ ನಿಲ್ದಾಣದ ಸುತ್ತಲು ಗಿಡಮರಗಳನ್ನು ಬೆಳೆಸಲಾಗುತ್ತದೆ ಎಂದರು.

25 ಕೋಟಿ ಅನುದಾನ

ನಗರದಲ್ಲಿರುವ ರೈಲ್ವೆ ನಿಲ್ದಾಣವನ್ನು ಹೈಟಿಕ್ ನಿಲ್ದಾಣವಾಗಿ ಪರಿವರ್ತಿಸಲಾಗುತ್ತದೆ. ಇದಕ್ಕೆ 25 ಕೋಟಿ ರು ಅನುದಾನ ನೀಡಿದೆ ಎಂದರು. ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರ ನದಿ ತೀರದ ಪ್ರದೇಶವನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಪ್ರತಿ ವರ್ಷ ಚಿಂತಾಮಣಿ ಮತ್ತು ನವವೃಂದಾವನಗಡ್ಡೆಯ ಯತಿವರೇಣ್ಯರು ಇರುವ ವೃಂದಾವನಗಳಿಗೆ ಇಲ್ಲಿಂದಲೆ ತುಂಗಾರತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಅತಿಥಿ ಕರ್ನಾಟಕ ಸಾರಿಗೆ ನಿಗಮದ ಅದ್ಯಕ್ಷ ಅರುಣ್ ಕುಮಾರ ಎಂ.ವೈ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಜಿಲ್ಲೆಗಳಲ್ಲಿ ಬಸ್ ನಿಲ್ದಾಣ ಸೇರಿದಂತೆ ಬಸ್ ಗಳ ಖರೀದಿಗೆ ಸಾಕಷ್ಟು ಅನುದಾನ ನೀಡಿದೆ. ಕಲ್ಬರ್ಗಿ ವಿಭಾಗಕ್ಕೆ 400 ಬಸ್ ಗಳನ್ನು ನೀಡ ಬೇಕೆಂದು ಸಾರಿಗೆ ಸಚಿವರಿಗೆ ಮನವಿ ಮಾಡಿಕೊಂಡಿದೆ ಎಂದರು.

ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾತನಾಡಿದರು. ವೇದಿಕೆ ಮೇಲೆ ತಾಲೂಕ ಪಂಚಾಯಿತಿ ಇಓ ರಾಮರೆಡ್ಡಿ, ತಹಸೀಲ್ದಾರ ಮಹಾತಂಗೌಡ, ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಗಿರೇಗೌಡ, ಜಿ.ಶ್ರೀಧರ, ನರಸಪ್ಪ ಅಮರಜ್ಯೋತಿ, ಮನೋಹರ ಹೇರೂರು, ಡಿ.ಕೆ.ಆಗೋಲಿ. ಚಂದ್ರು ಹಿರೂರು,ಚೆನ್ನಪ್ಪ ಮಳಗಿ, ಪಿಐ ಪ್ರಕಾಶ ಮಾಳೆ, ಮೌಲಾಸಾಬ, ಟಿ.ಜಿ.ಬಾಬು, ಯಮನೂರು ಚೌಡ್ಕಿ, ಬಸಪ್ಪನಾಯಕ ಸೇರಿದಂತೆ ಪ್ರಮುಖರು ಇದ್ದರು.