ಧಾರವಾಡದ ವ್ಯೆಕ್ತಿಗೆ ಕೊರೋನಾ ದೃಢ|ಗದಗ ಡೀಪೋಗೆ ಸೇರಿದ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದ ಸೋಂಕಿತ|ಗದಗ ಜಿಲ್ಲೆಯ 25 ಜನರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಆದೇಶ|

ಗದಗ[ಮಾ.22]: ಪಕ್ಕದ ಧಾರವಾಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಗದಗ ಜಿಲ್ಲೆಯಲ್ಲೂ ಭೀತಿ ಶುರುವಾಗಿದೆ. ಹೌದು, ಸೋಂಕಿತ ವ್ಯೆಕ್ತಿ ಗೋವಾದಿಂದ ಗದಗ ಡೀಪೋಗೆ ಸೇರಿದ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿದ್ದ, ಈ ಕಾರಣದಿಂದ ಗದಗ ಜಿಲ್ಲೆಯ 25 ಜನರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. 

Add Asianetnews Kannada as a Preferred SourcegooglePreferred

ಇಂದು[ಭಾನುವಾರ] ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಜಿಲ್ಲಾಡಳಿತ ಈಗಾಗಲೇ ಕೊರೋನಾ ವೈರಸ್ ಸೋಂಕಿತ ಪ್ರಯಾಣಿಸಿದ್ದ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕನನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟು 27 ಜನರ ಪೈಕಿ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 25 ಜನರ ಶೋಧ ಕಾರ್ಯವನ್ನ ಜಿಲ್ಲಾಡಳಿತ ಆರಂಭಿಸಿದೆ ಎಂದು ಹೇಳಿದ್ದಾರೆ. 

Breaking: ಕರ್ನಾಟಕದ ಈ 6 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ

ಸೋಂಕಿತ ವ್ಯೆಕ್ತಿ ಪಣಜಿಯಿಂದ ಮಾ.13 ರ ಮುಂಜಾನೆ ಪಣಜಿ ಗದಗ ಬಸ್ ಮೂಲಕ ಆಗಮಿಸಿದ್ದನು. ಈ ಸಂಬಂಧ ಗದಗ ಮತ್ತು ತಾಂಡಾಗಳ ಪ್ರಯಾಣಿಕರಿಗೆ ಜಿಲ್ಲಾಡಳಿತದ ತುರ್ತು ನಿರ್ದೇಶನ ನೀಡಿದೆ. ಪಣಜಿಯಿಂದ ದಿ. 12-3-2020ರ ರಾತ್ರಿ 8-45 ಕ್ಕೆ ಹೊರಟ ಪಣಜಿ-ಗದಗ ಬಸ್ ಸಂಖ್ಯೆ ಕೆಎ- 26-F-962 ಇದರಲ್ಲಿ 30 ಪ್ರಯಾಣಿಕರು ಇದ್ದರು. ಇದರಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದ ವ್ಯಕ್ತಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅದೇ ಬಸ್ಸಿನ ಮುಂದುವರೆದ ಪ್ರಯಾಣದಲ್ಲಿಮಾ.13ರಂದು ಮುಂಜಾನೆ 3-15 ಗಂಟೆಗೆ ಗದಗನಲ್ಲಿ 6, ಅಡವಿಸೋಮಾಪುರ ತಾಂಡಾದಲ್ಲಿ 3-30ಕ್ಕೆ 11 ಜನ, ಪಾಪನಾಶಿ ತಾಂಡಾದಲ್ಲಿ 3-45 ಕ್ಕೆ 2 ವ್ಯಕ್ತಿಗಳು ಹಾಗೂ ಒಂದು ಮಗು ಮತ್ತು 4-30ಕ್ಕೆ ಸಿಂಗಟರಾಯನಕೆರೆ ತಾಂಡಾದಲ್ಲಿ 7 ಜನ ಇಳಿದಿದ್ದಾರೆ. ಸದರಿ ಬಸ್ಸಿನ ವಾಹನ ಚಾಲಕ ಹಾಗೂ ನಿರ್ವಾಹಕರು ಈಗಾಗಲೇ ಗದಗ ಜಿಮ್ಸ್ ನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈ ಬಸ್ಸು ಎಕ್ಸಪ್ರೆಸ್ ಆಗಿದ್ದು ಪ್ರಯಾಣಿಕರ ಮಾಹಿತಿ ಸಿಗುತ್ತಿಲ್ಲ. ಆದುದರಿಂದ ಅಂದು ಪಣಜಿಯಿಂದ ಆಗಮಿಸಿದ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ತಕ್ಷಣ ಗದಗ ಜಿಮ್ಸ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದು ಪರೀಕ್ಷೆಗೆ ಒಳಗಾಗಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.