ಪಾಕಿಸ್ತಾನ ಪರ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಬೆಂಗಳೂರಿನ ರಸ್ತೆಯೊಂದರ ಬದಿಯಲ್ಲಿನ ಗೋಡೆ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ, ನೋ ಸಿಎಎ’ ಎಂದು ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಬೆಂಗಳೂರು(ಮಾ.03): ಪಾಕಿಸ್ತಾನ ಪರ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಬೆಂಗಳೂರಿನ ರಸ್ತೆಯೊಂದರ ಬದಿಯಲ್ಲಿನ ಗೋಡೆ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ, ನೋ ಸಿಎಎ’ ಎಂದು ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಡಿಕೆನ್ಸನ್‌ ರಸ್ತೆಯಲ್ಲಿರುವ ಸಂದೀಪ್‌ ಉನ್ನಿಕೃಷ್ಣನ್‌ ಏನ್‌ಕ್ಲೇವ್‌ ವಸತಿ ಸಮುಚ್ಚಯದ ಗೋಡೆಯ ಮೇಲೆ ಕೆಲ ಕಿಡಿಗೇಡಿಗಳು ಭಾನುವಾರ ತಡರಾತ್ರಿ ‘ಫ್ರೀ ಕಾಶ್ಮೀರ’ ಎಂದು ಬರೆದಿದ್ದಾರೆ.

ಆರ್ದ್ರಾ ವಿರುದ್ಧ ವಾದಿಸಲು ಶ್ರೀರಾಮ ಸೇನೆ ಅರ್ಜಿ

ಈ ಸಂಬಂಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಕೆನ್ಸನ್‌ ರಸ್ತೆಯಲ್ಲಿ ಸೇನೆಯ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರ ವಸತಿ ಸಮುಚ್ಚಯವಿದೆ. ಈ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಕಾಲೇಜು ಕೂಡ ಇದೆ. ಈ ಗೋಡೆ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ, ನೋ ಸಿಎಎ’ ಎಂದು ಬರೆದು ಮೋದಿ ಚಿತ್ರವಿರುವ ಭಿತ್ತಿ ಪತ್ರವನ್ನು ಅಂಟಿಸಲಾಗಿದೆ.

ಸಾರ್ವಜನಿಕರು ಈ ಬರಹ ನೋಡಿ ಪೊಲೀಸರಿಗೆ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಹಲಸೂರು ಪೊಲೀಸರು ಪರಿಶೀಲಿಸಿ, ಆಕ್ಷೇಪಾರ್ಹ ಬರಹದ ಮೇಲೆ ಬಣ್ಣ ಬಳಿದು ಅಳಿಸಿದ್ದಾರೆ.

ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ

ಈ ಕುರಿತು ಪ್ರತಿಕ್ರಿಯೆ ನೀಡಿದ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ, ಗೋಡೆಯ ಮೇಲೆ ಆಕ್ಷೇಪಾರ್ಹ ಬರಹ ಬರೆದಿದ್ದು, ಈ ಸಂಬಂಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆ (ಕೆಒಪಿಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.

ಕೆಲ ತಿಂಗಳ ಹಿಂದಷ್ಟೇ ಚಚ್‌ರ್‍ಸ್ಟ್ರೀಟ್‌ ವಾಣಿಜ್ಯ ಮಳಿಗೆಗಳ ಮೇಲೆ ಕೆಲ ಕಿಡಿಗೇಡಿಗಳು ಫ್ರೀ ಕಾಶ್ಮೀರ ಎಂಬ ಬರಹ ಬರೆದಿದ್ದರು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಬರಹಗಳಿಗೆ ಕಪ್ಪು ಬಣ್ಣದ ಮಸಿ ಬಳಿದು ಅಳಿಸಿದ್ದರು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಅಲ್ಲದೆ, ಕೆಲ ದಿನಗಳ ಹಿಂದೆ ಅಮೂಲ್ಯ ಲಿಯೋನ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಳು. ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.