Asianet Suvarna News Asianet Suvarna News

'ಆನಂದ ಸಿಂಗ್‌ಗಾಗಿ ಬಳ್ಳಾರಿ ಇಬ್ಭಾಗ'

ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ| ಅದು ಕೇವಲ ಕಾಂಗ್ರೆಸಿಗೆ ಮಾತ್ರ ಸಾಧ್ಯ| ವಲಸೆ ಹೋದವರನ್ನೇ ಬಿಜೆಪಿ ಮಂತ್ರಿಗಳನ್ನಾಗಿ ಮಾಡಿದೆ| ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಎಂಬುದನ್ನು ಲೆಕ್ಕ ಹಾಕಿ ನೋಡೋಣ ಎಂದು ಪ್ರಶ್ನಿಸಿದ ಶಿವರಾಜ ತಂಗಡಗಿ| 

Former Minister Shivaraj Tangadagi Talks Over Anand Singh  grg
Author
Bengaluru, First Published Nov 23, 2020, 11:39 AM IST

ಕೊಪ್ಪಳ(ನ.23): ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಸಚಿವ ಆನಂದ್‌ ಸಿಂಗ್‌ ಅವರ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ ಮಾಡ್ತಾರೆ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ. 

ಭಾನುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ. ಅದು ಕೇವಲ ಕಾಂಗ್ರೆಸಿಗೆ ಮಾತ್ರ ಸಾಧ್ಯ. ವಲಸೆ ಹೋದವರನ್ನೇ ಬಿಜೆಪಿ ಮಂತ್ರಿಗಳನ್ನಾಗಿ ಮಾಡಿದೆ. ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಎಂಬುದನ್ನು ಲೆಕ್ಕ ಹಾಕಿ ನೋಡೋಣ ಎಂದು ಪ್ರಶ್ನಿಸಿದರು.

ಹಾಗೆ ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದವರು ಇವಿಎಂ ದೋಷದಿಂದ ಗೆದ್ದಿದ್ದಾರೆ. ಶಿರಾದಲ್ಲಿ ಜಯಚಂದ್ರ ಅವರಿಗೆ ಜನಬೆಂಬಲ ಇತ್ತು. ಆದರೂ ಅಲ್ಲೂ ಬಿಜೆಪಿ ಗೆದ್ದಿದೆ ಅಂದ್ರೆ ಏನರ್ಥ? ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್‌ ಬಳಸಿ ಗೆಲ್ಲಲಿ. ಹಾಗೊಂದು ವೇಳೆ ಗೆದ್ದರೆ ಬಿಜೆಪಿಗೆ ನಾವು ಶರಣಾಗತಿ ಆಗುತ್ತೇವೆ. ಮುಂಬರುವ ಮಸ್ಕಿ ಚುನಾವಣೆಯಲ್ಲೂ ಇವಿಎಂ ಬಳಸಿದರೆ ನಮಗೆ ಫಲಿತಾಂಶದ ಬಗ್ಗೆ ಅನುಮಾನ ಇರುತ್ತದೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ವಿರುಪಾಕ್ಷಪ್ಪ-ವಿಜಯೇಂದ್ರ ಭೇಟಿ: ಒಳ ಹಂತದಲ್ಲಿ ಎನಾಗಿದೆಯೋ ಎಂದ BJP ಸಂಭವನೀಯ ಅಭ್ಯರ್ಥಿ

ಈ ವೇಳೆ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹಾಗೂ ಪಕ್ಷದ ಮುಖಂಡರಾದ ಮಾಲತಿ ನಾಯಕ್‌, ಶೈಲಜಾ ಹಿರೇಮಠ, ಅಕ್ಬರ್‌ ಪಲ್ಟಾನ್‌, ಗುರು ಹಲಗೇರಿ, ಮುತ್ತುರಾಜ ಕುಷ್ಟಗಿ ಮತ್ತಿತರರು ಇದ್ದರು.

ಬಣ್ಣ ಬಯಲಾಗುತ್ತೆ: ಹಿಟ್ನಾಳ

ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಜನರಿಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಇನ್ನೂ ಎರಡ್ಮೂರು ತಿಂಗಳಲ್ಲಿ ಬಿಜೆಪಿ ಬಣ್ಣ ಬಯಲಾಗಲಿದೆ. ಬಿಜೆಪಿ ಸೇರುವವರ ಸಂಖ್ಯೆ ಜಾಸ್ತಿಯಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವವರು ಹರಿವು ಹೆಚ್ಚುತ್ತಿದೆ. ಕೆಲವೇ ತಿಂಗಳು ಕಾದು ನೋಡಿ ಗೊತ್ತಾಗುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ನೀಡಿ ಸಂಚಲನ ಮೂಡಿಸಿದರು.
 

Follow Us:
Download App:
  • android
  • ios