ಅರಣ್ಯ ಗಡಿಗಳ ಕುರಿತು ಹಗುರವಾದ ಅಭಿಪ್ರಾಯವನ್ನು ಹೊಂದಿರುವವರಿಗೆ ಆ ಇಲಾಖೆಯನ್ನೆ ನೀಡಿರುವುದು ಸರಿಯಲ್ಲ: ಮಾಜಿ ಸಚಿವ, ಎಂಎಲ್ಸಿ ಎಚ್‌.ಎಂ.ರೇವಣ್ಣ ಟೀಕೆ|ಬಿಜೆಪಿ ಬರೀ ನೈತಿಕತೆ ಕುರಿತು ಮಾತನಾಡುವುದನ್ನು ಬಿಟ್ಟು ಆಗಿರುವಂತಹ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳಬೇಕು|

ರಾಯಚೂರು[ಫೆ.15]: ರಾಜ್ಯ ಬಿಜೆಪಿ ಸರ್ಕಾರವು ಆನಂದ ಸಿಂಗ್‌ ಅವರಿಗೆ ಅರಣ್ಯ ಖಾತೆಯನ್ನು ನೀಡಿರುವುದು ಕಳ್ಳರ ಕೈಗೆ ಕೀಲಿಕೊಟ್ಟಂತಿದೆ ಎಂದು ಮಾಜಿ ಸಚಿವ ಹಾಗೂ ಎಂಎಲ್ಸಿ ಎಚ್‌.ಎಂ.ರೇವಣ್ಣ ಲೇವಡಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಅರಣ್ಯ ಗಡಿಗಳ ಕುರಿತು ಹಗುರವಾದ ಅಭಿಪ್ರಾಯವನ್ನು ಹೊಂದಿರುವವರಿಗೆ ಆ ಇಲಾಖೆಯನ್ನೆ ನೀಡಿರುವುದು ಸರಿಯಲ್ಲ ಇದರಿಂದ ಅಕ್ರಮ ಹೆಚ್ಚಾಗುವ ಸಾಧ್ಯತೆಗಳಿವೆ. ಬಿಜೆಪಿ ಬರೀ ನೈತಿಕತೆ ಕುರಿತು ಮಾತನಾಡುವುದನ್ನು ಬಿಟ್ಟು ಆಗಿರುವಂತಹ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂದಿನ ಸರ್ಕಾರಗಳ ಜನಪರ ಯೋಜನೆಗಳಿಗೆ ಕಡಿತಗೊಳಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಆರ್ಥಿಕವಾಗಿ ದಿವಾಳಿ ಎದ್ದಿರುವ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಹಾಗೂ ನಂತರ ಬಂದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಡವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಆ ಯೋಜನೆಗಳಿಗೆ ಅನುದಾನ ಕಡಿತಗೊಳಿಸುವುದರ ಮೂಲಕ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಕುರುಬ-ನಾಯಕ ಸಮುದಾಯಗಳ ನಡುವೆ ಕಂದಕವನ್ನು ಉಂಟುಮಾಡುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌, ಹೇಳಿಕೆಯಿಂದಾಗಿ ಎರಡೂ ಸಮಾಜದ ಸಾಮರಸ್ಯಕ್ಕೆ ಹಿನ್ನಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಉಭಯ ಸಮುದಾಯಗಳ ಮಠಾಧೀಶರು, ಜನಪ್ರತಿನಿಧಿಗಳು, ಮುಖಂಡರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು. ಎರಡೂ ಸಮುದಾಯಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ಮಾಜಿ ಸಂಸದ ಹಾಗೂ ಡಿಸಿಸಿ ಅಧ್ಯಕ್ಷ ಬಿ.ವಿ.ನಾಯಕ ಮಾತನಾಡಿ, ಕುರುಬ ಮತ್ತು ನಾಯಕ ಸಮುದಾಯಗಳ ನಡುವೆ ಇಲ್ಲಸಲ್ಲದ ಹೇಳಿಕೆಗಳನ್ನು ಹಾಕುವುದರ ಮೂಲಕ ಒಡಕು ಮೂಡಿಸುವ ಪ್ರಯತ್ನಗಳಿಗೆ ಉಭಯ ಸಮುದಾಯದವರು ಕಿವಿಕೊಡಬಾರದು. ಹಿಂದುಳಿದ ಸಮುದಾಯಕ್ಕೆ ಸೇರಿರುವ ಕುರುಬ ಮತ್ತು ನಾಯಕ ಜನಾಂಗದವರು ದ್ವೇಷ ಸಾಧಿಸದೇ ಪರಸ್ಪರ ಪ್ರೀತಿ, ಸ್ನೇಹ ಸಂಬಂಧದಿಂದ ಬಾಳಬೇಕು ಆ ಮೂಲಕ ರಾಜಕೀವವಾಗಿ ಬಲಗೊಳ್ಳಬೇಕು ಎಂದು ಹೇಳಿದ್ದಾರೆ.