Asianet Suvarna News Asianet Suvarna News

ಬೆಳಗಾವಿ ಎಂದೆಂದಿಗೂ ನಮ್ಮದೇ: ಸಿದ್ದರಾಮಯ್ಯ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ ಅನಾವರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗು

Former CM Siddaramaiah Talks Over Belagavi grg
Author
First Published Dec 20, 2022, 7:45 PM IST

ಅಥಣಿ(ಡಿ.20): ಬೆಳಗಾವಿ ಎಂದೆಂದಿಗೂ ನಮ್ಮದೇ. ನಮ್ಮ ನಾಡಿನ ಒಂದು ಇಂಚು ಜಾಗವನ್ನು ಕೊಡಲು ನಾವು ಬಿಡುವುದಿಲ್ಲ. ಕನ್ನಡ ನೆಲ ಜಲ ಭಾಷೆ ಸಮಸ್ಯೆಗಳು ಎದುರಾದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಕನ್ನಡತನ ಮೆರೆಯಬೇಕು ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಚಾರದಲ್ಲಿ ಮರಾಠಿಗರು ಮೇಲಿಂದ ಮೇಲೆ ಕ್ಯಾತೆ ಮಾಡುತ್ತಿದ್ದಾರೆ. 1956 ರಲ್ಲಿ ತಾವೇ ಒಪ್ಪಿಕೊಂಡಂತೆ ಮಹಾಜನ ವರದಿಗೆ ಅಂತಿಮ. ರಾಜಕೀಯ ಲಾಭಕ್ಕಾಗಿ ಮೇಲಿಂದ ಮೇಲೆ ಪುಂಡಾಟಿಕೆ ಮಾಡುವ ಮರಾಠಿಗರಿಗೆ ತಕ್ಕ ಪಾಠ ಕಲಿಸಬೇಕು. ಸುಪ್ರೀಂ ಕೋರ್ಚ್‌ನಲ್ಲಿ ಈ ವಿಚಾರವನ್ನು ಸಮರ್ಪಕವಾಗಿ ಮಂಡಿಸುವ ನಿಟ್ಟಿನಲ್ಲಿ ವಕೀಲರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತಲಾಗುವುದು. ನಾನು ಮುಖ್ಯಮಂತ್ರಿ ಆಗಿದ್ದಾಗ ಜನರ ತೆರಿಗೆಯ ಹಣದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಿದ್ದೇವೆ. ಇಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ರಾಜ್ಯದ ರೈತರಿಗೆ ಸಕಾಲಕ್ಕೆ ವಿದ್ಯುತ್‌ ನೀಡುತ್ತಿಲ್ಲ, ಬೆಳೆ ಹಾನಿಗೆ ಸರಿಯಾಗಿ ಪರಿಹಾರ ನೀಡಿಲ್ಲ, ಐದು ವರ್ಷಗಳ ಹಿಂದೆ ಆರಂಭಿಸಿದ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದರೇ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸಿಬಿಐನವರು ಏನ್‌ ಮಾಡ್ತಾರೋ ಮಾಡ್ಲಿ: ಡಿ.ಕೆ.ಶಿವಕುಮಾರ್‌

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಸದಾಶಿವ ಬುಟಾಳಿ ಅವರು ತಮ್ಮ ಸ್ವಂತ ಖರ್ಚಿನಿಂದ ಹಾಲುಮತದ ಸಮಾಜ ಬಾಂಧವರ ಆಶಯದಂತೆ 9 ಅಡಿ ಎತ್ತರದ ಕಂಚಿನ ಮೂರ್ತಿ ನಿರ್ಮಿಸಿ ನಮ್ಮೆಲ್ಲರ ನಾಯಕರು ಆಗಿರುವ ಸಿದ್ದರಾಮಯ್ಯ ಅವರ ಹಸ್ತದಿಂದ ಇಂದು ಲೋಕಾರ್ಪಣೆ ಗೊಳಿಸಿದ್ದಾರೆ. ಈ ಸಭೆಯಲ್ಲಿ ಸೇರಿರುವ ಎಲ್ಲ ಹಾಲುಮತದ ಸಮಾಜದ ಪರವಾಗಿ ಅಭಿನಂದಿಸುತ್ತೇವೆ ಎಂದು ತಿಳಿಸಿದರು.

ಈ ವೇಳೆ ವಿವಿಧ ಸಂಘಟನೆಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡ ಸದಾಶಿವ ಬುಟಾಳಿ ಅವರಿಗೆ ಬೆಳ್ಳಿ ಗದೆ ಮತ್ತು ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು.

ಸಮಾರಂಭದಲ್ಲಿ ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ರಾಜು ಕಾಗೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ್‍ ಮೋಹಿತೆ, ಅಥಣಿ ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ರಾವಸಾಹೇಬ ಬೇವನೂರು, ಮುಖಂಡರಾದ ಬಸವರಾಜ ಬುಠಾಳಿ, ಧರೆಪ್ಪ ಠಕ್ಕಣ್ಣವರ, ಶ್ರೀಶೈಲ ದಳವಾಯಿ, ಓಂ ಪ್ರಕಾಶ ಪಾಟೀಲ, ಅಸ್ಲಮ ನಾಲಬಂದ, ಚಿದಾನಂದ ಮುಕುಣಿ, ಬೀರಪ್ಪ ಯಕ್ಕಂಚಿ, ರವಿ ಬಡಕಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಂಗ್ರೆಸ್‌ ಮುಖಂಡ ಸದಾಶಿವ ಬುಟಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ.ಗಂಟಿ ನಿರೂಪಿಸಿ, ವಂದಿಸಿದರು.

ಸಂಕ್ರಾಂತಿಗೆ ವಿದ್ಯುತ್‌ ಮಗ್ಗ ನೇಕಾರರಿಗೂ 5000 ರು.: ಸಿಎಂ ಬೊಮ್ಮಾಯಿ

ಬೆಳಗಾವಿ ವಿಚಾರದಲ್ಲಿ ಮರಾಠಿಗರು ಮೇಲಿಂದ ಮೇಲೆ ಕ್ಯಾತೆ ಮಾಡುತ್ತಿದ್ದಾರೆ. 1956 ರಲ್ಲಿ ತಾವೇ ಒಪ್ಪಿಕೊಂಡಂತೆ ಮಹಾಜನ ವರದಿಗೆ ಅಂತಿಮ. ರಾಜಕೀಯ ಲಾಭಕ್ಕಾಗಿ ಮೇಲಿಂದ ಮೇಲೆ ಪುಂಡಾಟಿಕೆ ಮಾಡುವ ಮರಾಠಿಗರಿಗೆ ತಕ್ಕ ಪಾಠ ಕಲಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವನ್ನು ಸಮರ್ಪಕವಾಗಿ ಮಂಡಿಸುವ ನಿಟ್ಟಿನಲ್ಲಿ ವಕೀಲರನ್ನು ನೇಮಿಸಬೇಕು ಅಂತ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ರಾಯಣ್ಣನ ದೇಶಪ್ರೇಮ, ಶೌರ್ಯ ಪ್ರೇರಣೆಯಾಗಬೇಕು: ಸಿದ್ದರಾಮಯ್ಯ

ಅಥಣಿ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ದೇಶಭಕ್ತರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಒಬ್ಬರು. ಅವರ ಕಂಚಿನ ಮೂರ್ತಿ ಅನಾವರಣವಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯಿದೆ. ರಾಯಣ್ಣನ ಈ ಮೂರ್ತಿ ನಮ್ಮ ಕನ್ನಡ ನಾಡಿನ ಯುವ ಜನತೆಗೆ ರಾಯಣ್ಣನ ದೇಶಪ್ರೇಮ ಮತ್ತು ಶೌರ್ಯ ಪ್ರೇರಣೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸ್ವತಂತ್ರ ಪೂರ್ವದಲ್ಲಿ 560ಕ್ಕೂ ರಾಜಮನೆತನಗಳು ಆಡಳಿತ ನಡೆಸುತ್ತಿದ್ದವು. ಈ ರಾಜಮನೆತನದಲ್ಲಿ ಒಗ್ಗಟ್ಟು ಇಲ್ಲದೇ ಇರುವುದನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ನಮ್ಮನ್ನು ಎರಡು ನೂರು ವರ್ಷಗಳ ಕಾಲ ಆಳಿದರು. ಕಿತ್ತೂರು ಸಂಸ್ಥಾನದಲ್ಲಿ ಆಡಳಿತ ಮಾಡುತ್ತಿದ್ದ ವೀರರಾಣಿ ಚನ್ನಮ್ಮಳ ಬಲಗೈ ಬಂಟನಾಗಿ, ಸೈನ್ಯದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಗೊಳ್ಳಿ ರಾಯಣ್ಣ ರಾಜಮನೆತನಕ್ಕೆ ಮತ್ತು ಚನ್ನಮ್ಮನ ಬಗ್ಗೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದ. ಬ್ರಿಟಿಷರ ವಿರುದ್ಧ ಹೋರಾಡಲು ಸೈನ್ಯವನ್ನು ಕಟ್ಟಿಕೊಂಡು ಗೆರಿಲಾ ಯುದ್ಧಗಳನ್ನು ಮಾಡಿ ಅವರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ. ನಮ್ಮವರೇ ಕುತಂತ್ರ ಮಾಡಿ ಆತ ನನ್ನ ಹಿಡಿದು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷ್‌ರು ಆತನಿಗೆ ರಾಯಗಡದಲ್ಲಿ ಗಲ್ಲಿಗೇರಿಸಿದರು. ರಾಯಣ್ಣನ ಇತಿಹಾಸವೇ ನಮ್ಮೆಲ್ಲರಿಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ ಮತ್ತು ಹುತಾತ್ಮನಾದ ರಾಯಗಡದಲ್ಲಿ ಅಭಿವೃದ್ಧಿಯಾಗಬೇಕು. ನಮ್ಮ ಸರ್ಕಾರವಿದ್ದಾಗ 100 ಎಕರೆ ಜಾಗವನ್ನು ನೀಡಿ, ಅಲ್ಲಿ ಒಂದು ಸೈನಿಕ ಶಾಲೆಯನ್ನು ಆರಂಭಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕನ್ನಡ ನಾಡು ನುಡಿ, ನೆಲ ಜಲ ವಿಚಾರದಲ್ಲಿ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಸಂಗೊಳ್ಳಿ ರಾಯಣ್ಣನಂತೆ ಹೋರಾಡಬೇಕು ಎಂದು ತಿಳಿಸಿದರು.
 

Follow Us:
Download App:
  • android
  • ios