ಅನರ್ಹರ ಶಾಸಕರಿಗಾಗಿ ಪ್ರಾಣ ಕೊಡುವಂತ ಸಿಎಂ ನಮಗೆ ಬೇಕಾ? HDK
ಸಿಎಂ ಬಾಯಲ್ಲಿ ಆಮಿಷಕ್ಕೆ ಒಳಗಾಗಿರುವ ಅನರ್ಹ ಶಾಸಕರಿಗಾಗಿ ಪ್ರಾಣ ಕೊಡ್ತೇನೆ ಎಂದು ಹೇಳಿದ್ದಾರೆ| ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ| ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವ ಸಿಎಂ ನಿಮಗೇ ಬೇಕಾ ಎಂದ ಕುಮಾರಸ್ವಾಮಿ|
ಬೆಂಗಳೂರು(ನ.24): ಬಿಜೆಪಿ ಸರ್ಕಾರ ಪುನಃ ಅಧಿಕಾರಕ್ಕೆ ತರಬೇಕೆಂದು ಎಂದು 17 ಶಾಸಕರಿಗೆ ಆಮೀಷ ಒಡ್ಡಿ ನಮ್ಮ ಸರ್ಕಾರ ಬೀಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ಪ್ರಚಾರದ ವೇಳೆ ಜನರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಅನರ್ಹರಿಗಾಗಿ ಪ್ರಾಣ ಕೊಡುತ್ತೇನೆ. ಪ್ರಾಣ ಬೇಕಾದರೂ ಕೊಟ್ಟು ಅಭ್ಯರ್ಥಿ ಗೆಲ್ಲಿಸ್ತೇನೆ ಎಂದು ಹೇಳಿದ್ದಾರೆ. ಅವರು ಪ್ರಾಣ ಕೊಡಬೇಕಾಗಿರೋದು ಈ ರಾಜ್ಯದ ಜನರ ಸಮಸ್ಯೆಗಳಿಗಾಗಿ ಹೊರತು ಅನರ್ಹ ಶಾಸಕರಿಗೆ ಅಲ್ಲ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಾಯಲ್ಲಿ ಆಮಿಷಕ್ಕೆ ಒಳಗಾಗಿರುವ ಅನರ್ಹ ಶಾಸಕರಿಗಾಗಿ ಪ್ರಾಣ ಕೊಡ್ತೇನೆ ಎಂದು ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವ ಸಿಎಂ ನಿಮಗೇ ಬೇಕಾ ಎಂದು ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗೋಕಾಕ್ ನಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನನ್ನ ಸಮುದಾಯ ಏನಾದರೂ ಆಗಲಿ, ಬೇರೆ ಯವರು ಗೆಲ್ಲಲಿ ಎಂದು ಹೇಳುತ್ತಾರೆ. ಇವರು ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಅನ್ನೋದು ನೋಡಿ. ನಾನು ಯಾವತ್ತು ಕೂಡ ಜಾತಿಯ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಇವಾಗಿನ ಸಿಎಂ ಯಡಿಯೂರಪ್ಪರನ್ನು ಬಡ ಜನರು ಭೇಟಿ ಮಾಡೋಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ದುಡ್ಡೆ ಕೊಟ್ಟಿಲ್ಲ ಎಂದು ಇಲ್ಲಿನ ಶಾಸಕರು ಹೇಳಿದ್ದರು. ನಾನು ಅವರಿಗೆ ಸವಾಲು ಹಾಕ್ತೇನೆ, ಈ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಯಶವಂತಪುರ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಕೊಟ್ಟಿದ್ದೇನೆ. ಎಸ್ ಟಿ ಸೋಮಶೇಖರ್ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.